ಸಾರಾಂಶ
ಕುಮಟಾ: ಜಿಲ್ಲೆಗೆ ೩೨೯ ಬಿಎಸ್ಎನ್ಎಲ್ ಟವರ್ ಮಂಜೂರು ಮಾಡಿಸಿದ್ದೇನೆ. ಈಗಾಗಲೇ ಕಾರ್ಯಚರಿಸುತ್ತಿರುವ ಬಿಎಸ್ಎನ್ಎಲ್ ಟವರ್ಗಳಲ್ಲಿ ವಿದ್ಯುತ್ ವ್ಯತ್ಯಯವಾದಾಗ ತೊಂದರೆ ಆಗದಂತೆ ಜನರೇಟರ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ತಾಲೂಕಿನ ಮಿರ್ಜಾನದ ಕಡಕೋಡ ಹಾಗೂ ಕತಗಾಲ ಸನಿಹದ ಸಂಡೊಳ್ಳಿಯಲ್ಲಿ ಎರಡು ಹೊಸ ೪ಜಿ ಬಿಎಸ್ಎನ್ಎಲ್ ಟವರ್ಗಳನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದ ಬಗ್ಗೆ ನಿನ್ನೆ ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಜರುಗಿಸಿ, ಪರಿಶೀಲಿಸಿದ್ದೇನೆ. ಪ್ರತಿಯೊಬ್ಬ ಫಲಾನುಭವಿಗೆ ಕೇಂದ್ರದ ಯೋಜನೆ ತಲುಪುವಂತಾಗಬೇಕು. ಸಾರ್ವಜನಿಕರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಶಾಸಕ ದಿನಕರ ಶೆಟ್ಟಿ ಮಾತನಾಡಿ, ಹಿಂದೆ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಕಾಲದಲ್ಲಿ ೨ಜಿ ಸೇರಿ ಹಲವು ಹಗರಣ ನಡೆದಿದ್ದು, ಮೋದಿಜಿ ಪ್ರಧಾನಿಯಾದ ನಂತರ ಯಾವುದೇ ಹಗರಣ ಇಲ್ಲದೇ ದೇಶವು ವೇಗವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಮೊಬೈಲ್ ಕರೆ ದರವೂ ಮೋದಿಜಿ ಬಂದ ನಂತರ ತೀವ್ರವಾಗಿ ಕಡಿಮೆಯಾಗಿತ್ತು. ನಮ್ಮ ಜಿಲ್ಲೆಗೆ ೨೫೦ಕ್ಕೂ ಹೆಚ್ಚು ಟವರ್ ಮಂಜೂರಿಯಾಗಿದೆ. ಕೇವಲ ಟವರ್ ಮಾತ್ರವಲ್ಲದೇ ಗೋಕರ್ಣಕ್ಕೆ ಮತ್ತು ಗೋಕರ್ಣದಿಂದ ಓಂ ಬೀಚ್ ರಸ್ತೆ ಮಾಡಿಕೊಡುವ ಭರವಸೆಯನ್ನು ಸಂಸದರು ನೀಡಿದ್ದಾರೆ ಎಂದರು.ಬಿಎಸ್ಎನ್ಎಲ್ ಅಧಿಕಾರಿಗಳಾದ ಜಿ.ಎಂ. ಸಂತೋಷ್ ಚೌಹಾಣ, ಜೆಟಿಒ ಸಂದೀಪ್, ವಿ.ಎಚ್. ನಾಯಕ ಬೆಣ್ಣೆ, ರಾಮನಾಥ ಶಾನಭಾಗ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಮಂಡಲಾಧ್ಯಕ್ಷ ಜಿ.ಐ. ಹೆಗಡೆ, ಸ್ಥಳೀಯರು ಇದ್ದರು.10ರಿಂದ ಅಯ್ಯಪ್ಪ ಸ್ವಾಮಿ ಜಾತ್ರಾ ಉತ್ಸವ
ಸಿದ್ದಾಪುರ: ಪಟ್ಟಣದ ಬಾಲಿಕೊಪ್ಪದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಏಳನೇ ವರ್ಷದ ಜಾತ್ರೋತ್ಸವ ಜ. ೧೦ರಿಂದ ೧೫ರ ವರೆಗೆ ಶ್ರದ್ಧಾ-ಭಕ್ತಿಯಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲು ಎಲ್ಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಡಾ. ಕೆ. ಶ್ರೀಧರ ವೈದ್ಯ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಜ. ೧೦ರಂದು ಅಯ್ಯಪ್ಪ ಸ್ವಾಮಿಯ ಉತ್ಸವ ಪ್ರಾರಂಭಗೊಳ್ಳಲಿದೆ. ಧ್ವಜಾರೋಹಣ, ದುರ್ಗಾಹವನ, ರಾತ್ರಿ ಪಡಿಪೂಜೆ, ೧೧ರಂದು ದೇವಸ್ಥಾನದ ತಂತ್ರಿಯವರಾದ ಬ್ರಹ್ಮಶ್ರೀ ತರಣನಲ್ಲೂರು ಪದ್ಮನಾಬನ್ ಉಣ್ಣಿ ನಂಬೂದರಿ ಇವರಿಂದ ವಿಶೇಷ ಪೂಜೆ, ಸಾರ್ವತ್ರಿಕ ಗಣಹೋಮ, ಪ್ರಸಾದ ವಿತರಣೆ, ನಂತರ ಅನ್ನಸಂತರ್ಪಣೆ ನಡೆಯಲಿದೆ.ಜ. ೧೨ರಂದು ರುದ್ರಹವನ, ಆಶ್ಲೇಷಬಲಿ, ೧೩ರಂದು ನರಸಿಂಹ ಹವನ, ೧೪ರಂದು ಅಷ್ಟಾಭಿಷೇಕ, ವಿಶೇಷ ಪೂಜೆ, ಸಂಜೆ ೫ರಿಂದ ನಗರದ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪ ಸ್ವಾಮಿಯ ಅಂಬಾರಿ ಉತ್ಸವ ನಡೆಯಲಿದೆ. ಸೊರಬ ತಾಲೂಕಿನ ಜಡೆ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮಿಗಳಿಂದ ಆಶೀರ್ವಚನ ಹಾಗೂ ಅಂಬಾರಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ೧೫ರಂದು ಓಕಳಿ ನಡೆಯಲಿದೆ ಎಂದರು.
ಜಾತ್ರಾ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ ಮಾತನಾಡಿ, ಜಾತ್ರೋತ್ಸವದ ಅಂಗವಾಗಿ ಪ್ರತಿದಿನ ಬೆಳಗ್ಗೆಯಿಂದ ರಾತ್ರಿಯವರೆಗೆ ವಿಶೇಷ ಪೂಜೆ, ಭಜನೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ, ಭಜನೆ, ರಸಮಂಜರಿ, ಯಕ್ಷಗಾನ ಹಾಗೂ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸ್ಥಳೀಯ ಕಲಾವಿದರಿಂದ ಹಾಗೂ ಕಲಾಸಂಘಗಳಿಂದ ಆಯೋಜಿಸಲಾಗಿದೆ. ವಿವಿಧ ಮನರಂಜನೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.ಆಡಳಿತ ಸಮಿತಿಯ ಸುದರ್ಶನ ಪಿಳ್ಳೆ, ಶ್ರೀನಿವಾಸ ಪ್ರಭು, ಸದಾನಂದ ಕಾಮತ್, ರಾಘವೇಂದ್ರ ನಾಯ್ಕ, ಎ.ಜಿ. ನಾಯ್ಕ, ಶ್ರೀಪಾದ ಹೆಗಡೆ ಹಾಗೂ ದೇವಸ್ಥಾನ ಸಮಿತಿಯ ಹಾಗೂ ಜಾತ್ರೋತ್ಸವ ಸಮಿತಿ ಪದಾಧಿಕಾರಿಗಳಿದ್ದರು.