ಸಾರಾಂಶ
ಹಾನಿಗೀಡಾದ ಸ್ಥಳಗಳಿಗೆ ಸ್ಥಳೀಯ ಜನಪ್ರತಿನಿಧಿಗಳು , ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ನಿರಂತರ ಮಳೆಗೆ 34 ನೆಕ್ಕಿಲಾಡಿ ಗ್ರಾಮದಲ್ಲಿ ಕೆಲವು ಕಡೆ ಧರೆ ಕುಸಿತ ಉಂಟಾಗಿದ್ದು, ಮನೆಗಳು ಅಪಾಯದ ಭೀತಿಗೆ ಸಿಲುಕಿದೆ. ಆದರ್ಶನಗರ ಬಳಿಯ ಕಜೆ ಎಂಬಲ್ಲಿ ಹಮೀದ್ ಎಂಬವರ ಮನೆಯ ಮುಂದಿನ ಬೃಹತ್ತಾದ ಧರೆ ಕುಸಿದಿದ್ದು, ಇವರ ಮನೆಯ ಸಿಟೌಟ್ ಬಳಿ ಮಣ್ಣು ಬಿದ್ದಿದೆ. ಆದರ್ಶನಗರ ಕಾಲನಿಯಲ್ಲಿ ಅಂಗನವಾಡಿಗೆ ತೆರಳುವ ದಾರಿಯು ಧರೆ ಕುಸಿತದಿಂದ ಸಂಪೂರ್ಣ ಮುಚ್ಚಿ ಹೋಗಿದ್ದು, ಬೆಟ್ಟ ಪ್ರದೇಶದಲ್ಲಿರುವ ಇಲ್ಲಿ ಇನ್ನಷ್ಟು ಭೂ ಕುಸಿತವುಂಟಾದರೆ ದಾರಿ ಹಾಗೂ ಮನೆಗಳಿಗೂ ಅಪಾಯವಾಗುವ ಸಾಧ್ಯತೆ ಇದೆ. ಬೊಳಂತಿಲ ಹೊಸ ಕಾಲನಿಯ ಈಸುಬು ಅವರ ಮನೆಯ ಎದುರಿನ ಆವರಣ ಗೋಡೆ ಬಿರುಕು ಬಿಟ್ಟಿದೆ. ಕರ್ವೇಲಿನಲ್ಲಿ ಮುಹಮ್ಮದ್ ಎಂಬವರ ಮನೆ ಎದುರಿನ ಧರೆ ಕುಸಿದಿದ್ದು, ಮನೆ ಅಪಾಯದ ಭೀತಿಗೆ ಸಿಲುಕಿದೆ. ಹಾನಿಗೀಡಾದ ಸ್ಥಳಗಳಿಗೆ ಸ್ಥಳೀಯ ಜನಪ್ರತಿನಿಧಿಗಳು , ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.