ಸಾರಾಂಶ
ಕನ್ನಡಪ್ರಭ ವಾರ್ತೆ ಹುನಗುಂದ
ನೆರೆಯ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಆಲಮಟ್ಟಿ ಜಲಾಶಯದ ನೀರಿನ ಒಳಹರಿವು ಹೆಚ್ಚಾಗಿ ಗೇಟ್ನಿಂದ ನೀರು ಹೊರಬಿಡುತ್ತಿರುವುದರಿಂದ ಹುನಗುಂದ ತಾಲೂಕಿನ ನದಿ ಪಾತ್ರದ 36 ಗ್ರಾಮಗಳಲ್ಲಿ ನೆರೆ ಭೀತಿ ಬರುವ ಸಾಧ್ಯತೆ ಇದೆ. ಗ್ರಾಮಗಳಿಗೆ ಭೇಟಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಕೈಗೊಂಡು ಪ್ರವಾಹ ಎದುರಿಸಲು ಸನ್ನದ್ಧರಾಗಬೇಕು ಎಂದು ತಹಸೀಲ್ದಾರ್ ನಿಂಗಪ್ಪ ಬಿರಾದಾರ ಹೇಳಿದರು.ಪಟ್ಟಣದ ತಾಲೂಕು ತಹಸೀಲ್ದಾರ್ ಸಭಾಭವನದಲ್ಲಿ ತಾಲೂಕಿನ 36 ಗ್ರಾಮಗಳಿಗೆ ಪ್ರವಾಹ ಭೀತಿ ಮುಂಜಾಗ್ರತೆ ಕುರಿತು ಅಧಿಕಾರಿಗಳ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಾಹಿತಿ ಪ್ರಕಾರ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದು ಒಳ ಹರಿವು ಹೆಚ್ಚಾಗುತ್ತಿದೆ. ಹೆಚ್ಚಿನ ನೀರನ್ನು ಬಸವಸಾಗರಕ್ಕೆ ಹರಿಸುತ್ತಿದ್ದು, ಇದರಿಂದ ನದಿ ಪಾತ್ರದ ಸುತ್ತಲಿನ ಜನ-ಜಾನುವಾರುಗಳ ರಕ್ಷಣೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಯಾವ ಗ್ರಾಮಗಳಲ್ಲಿ ಪ್ರವಾಹ ಭೀತಿ?:ತಾಲೂಕಿನ ಕೂಡಲಸಂಗಮ, ಚವಡಕಮಲದಿನ್ನಿ, ಬಿಸಲದಿನ್ನಿ, ವಳಕಲದಿನ್ನಿ, ತುರಡಗಿ, ಕಟಗೂರ, ವರಗೋಡದಿನ್ನಿ, ಖಜಗಲ್, ಕೆಂಗಲ್ಕಡಪಟ್ಟಿ, ಗಂಜಿಹಾಳ, ನಂದನೂರ, ಹಿರೇಮಳಗಾವಿ, ಚಿಕ್ಕಮಳಗಾವಿ, ಚಿಕ್ಕಮಾಗಿ, ಪಾಪಥನಾಳ, ಖೈರವಾಡಗಿ, ಹೂವನೂರ, ಬೆಳಗಲ್, ಮೇದಿನಾಪೂರ, ಬಿಸನಾಳಕೊಪ್ಪ, ಚಿತ್ತರಗಿ, ಗಂಗೂರ, ಧನ್ನೂರ, ಎಮ್ಮೆಟ್ಟಿ, ಅಡಿವಿಹಾಳ, ಇದ್ದಲಗಿ, ಕಮದತ್ತ, ಐಹೊಳೆ, ನಿಂಬಲಗುಂದಿ, ರಾಮಥಾಳ, ಮುಳ್ಳೂರ, ಸುರಳಿಕಲ್, ಹಿರೇಮಾಗಿ, ಬೇವಿನಾಳ ಮತ್ತು ಕಮತಗಿ ಗ್ರಾಮಗಳಿಗೆ ಪ್ರವಾಹ ಬರುವ ಭೀತಿ ಇದೆ. ತಾಲೂಕಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಆಯಾ ಗ್ರಾಮಗಳಲ್ಲಿ ಜನ-ಜಾನುವಾರು ಸೇರಿದಂತೆ ಇನ್ನಾವುದೇ ರೀತಿಯಲ್ಲಿ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು. ಪ್ರವಾಹಕ್ಕೆ ಒಳಗಾಗುವ ಗ್ರಾಮಗಳನ್ನು ಈಗಾಗಲೇ ಗುರುತಿಸಿ ಅಲ್ಲಿ ಸುರಕ್ಷಿತ ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಪ್ರವಾಹ ಬರುವ ಪೂರ್ವದಲ್ಲಿ ಎಲ್ಲವನ್ನು ಅಲ್ಲಿಗೆ ಸ್ಥಳಾಂತರಿಸಬೇಕು. ಆಯಾ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳಲಿ ಈಗಾಗಲೆ ಮಧ್ಯಾಹ್ನ ಊಟದ ಸ್ಥಳದಲ್ಲಿಯೆ ಪ್ರವಾಹಕ್ಕೆ ಒಳಗಾಗುವ ಸಂತ್ರಸ್ತರಿಗೆ ಊಟ ಮತ್ತು ವೈದ್ಯಕೀಯ ಹಾಗೂ ಇತರೆ ಸೌಲಭ್ಯಗಳ ವ್ಯವಸ್ಥೆ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ತಹಸೀಲ್ದಾರ್ ಸೂಚಿಸಿದರು.
ಮಳೆ ಮತ್ತು ಪ್ರವಾಹ ಭೀತಿಯ ಮುಂಜಾಗ್ರತೆ ಕುರಿತು ದಿನೇದಿನೆ ಮಾಹಿತಿಯನ್ನು ಅಧಿಕಾರಿಗಳು ತಾಲೂಕಾಡಳಿತಕ್ಕೆ ನೀಡುತ್ತಿರಬೇಕು. ಈಗಾಗಲೇ ನೇಮಿಸಿದ ನೋಡೆಲ್ ಅಧಿಕಾರಿಗಳು ಮೊಬೈಲ್ ಸರ್ವಿಸ್ದೊಂದಿಗೆ ನಿಗದಿಪಡಿಸಿದ ಸ್ಥಳದಲ್ಲೇ ಕಾರ್ಯನಿರ್ವಹಿಸಬೇಕು. ನಿರ್ದಿಷ್ಟಪಡಿಸಿದ ಕಾಳಜಿ ಕೇಂದ್ರಕ್ಕೆ ಎಲ್ಲವನ್ನು ಈಗಾಗಲೆ ತಯಾರಿ ಮಾಡಿಕೊಳಬೇಕೆಂದು ಅವರು ತಿಳಿಸಿದರು.ಈ ವೇಳೆ ಸಿಪಿಐ ಸುನೀಲ ಸವದಿ, ಸಿಡಿಪಿಒ ವ್ಹಿ.ಎ. ಗಿರಿತಿಮ್ಮಣ್ಣವರ, ಟಿಎಚ್ಒ ಸಂಗಮೇಶ ಅಂಗಡಿ, ಸಮಾಜಕಲ್ಯಾಣ ಅಧಿಕಾರಿ ಎಂ.ಎಚ್. ಕಟ್ಟಿಮನಿ, ಲೋಕೋಪಯೋಗಿ ಎಇಇ ವೆಂಕಟೇಶ ಹೂಲಗೇರಿ, ಸಂಗಮೇಶ ಗಡೇದ, ಪಂಚಾಕ್ಷರಯ್ಯ ಪುರಾಣಿಕಮಠ, ಎಸ್.ಡಿ. ಬಬಲಾದಿ, ಎಸ್.ಬಿ.ಗೋನಾಳ ಸೇರಿದಂತೆ ತಾಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಇದ್ದರು.