ಸಾರಾಂಶ
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಸಹ ಕಾಂಗ್ರೆಸ್ ನೇತೃತ್ವದ ಸರ್ಕಾರ ಮಾತ್ರ ರಾಜ್ಯದಲ್ಲಿ ಗೋಹತ್ಯೆ, ಗೋ ಮಾಂಸ ಮಾರಾಟ ಮಾಡುವುದನ್ನು ತಡೆಯಲು ಸಂಪೂರ್ಣ ವಿಫಲವಾಗಿದೆ. ಆಂಧ್ರದಿಂದ ಹಸುಗಳನ್ನು ಖರೀದಿಸಿ ರಾಜ್ಯಕ್ಕೆ ತಂದು ಅವುಗಳನ್ನು ಹತ್ಯೆ ಮಾಡಿ ಮಾಂಸ ಮಾರಾಟ ಮಾಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಗುಡಿಬಂಡೆ
ಬಾಗೇಪಲ್ಲಿಯ ಮಿಟ್ಟೆಮರಿ ಹಾಗೂ ಚಿಂತಾಮಣಿ ಮಾರ್ಗದಲ್ಲಿ ನಾಲ್ಕು ಬೊಲೆರೋ ವಾಹನಗಳಲ್ಲಿ ಗುರುವಾರ ಅಕ್ರಮವಾಗಿ ಸಾಗಿಸುತ್ತಿದ್ದ 38 ಹಸುಗಳನ್ನು ಬಜರಂಗದಳ ಕಾರ್ಯಕರ್ತರು ರಕ್ಷಿಸಿ ನಮ್ಮ ನಾಡು ಗೋಶಾಲೆಯಲ್ಲಿ ಬಿಟ್ಟಿದ್ದಾರೆ. ಈ ಬಗ್ಗೆ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಭಜರಂಗದಳದ ಜಿಲ್ಲಾ ಸಂಚಾಲಕ ಅಂಬರೀಶ್, ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಸಹ ಕಾಂಗ್ರೆಸ್ ನೇತೃತ್ವದ ಸರ್ಕಾರ ಮಾತ್ರ ರಾಜ್ಯದಲ್ಲಿ ಗೋಹತ್ಯೆ, ಗೋ ಮಾಂಸ ಮಾರಾಟ ಮಾಡುವುದನ್ನು ತಡೆಯಲು ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ಇತ್ತೀಚೆಗೆ ಪೇರೆಸಂದ್ರ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಹಸುಗಳನ್ನು ರಕ್ಷಣೆ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಅಕ್ರಮವಾಗಿ ನಾಲ್ಕು ಬೊಲೆರೋ ವಾಹನದಲ್ಲಿ 38 ಹಸುಗಳನ್ನು ತುಂಬಿಕೊಂಡು ಸಾಗಾಟ ಮಾಡಲಾಗುತ್ತಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ನಮ್ಮ ಕಾರ್ಯಕರ್ತರು ಹಾಗೂ ಸಾರ್ವಜನಿಕರು ವಾಹನಗಳನ್ನು ತಡೆದ ಗೋವುಗಳನ್ನು ರಕ್ಷಣೆ ಮಾಡಲಾಗಿದೆ ಎಂದರು.ಗಡಿಯಲ್ಲಿ ತನಿಖಾ ಠಾಣೆ ಸ್ಥಾಪಿಸಿಆಂಧ್ರದ ಗಡಿಭಾಗಗಳಲ್ಲಿ ಹಸುಗಳ ಸಂತೆ ನಡೆಯುತ್ತದೆ. ಅಲ್ಲಿ ಹಸುಗಳನ್ನು ಖರೀದಿ ಮಾಡಿ ನಮ್ಮ ರಾಜ್ಯಕ್ಕೆ ತಂದು ಅವುಗಳನ್ನು ಹತ್ಯೆ ಮಾಡಿ ಮಾಂಸ ಮಾರಾಟ ಮಾಡುವಂತಹ ಪ್ರಕರಣಗಳು ನಡೆಯುತ್ತಿದೆ. ಆದ್ದರಿಂದ ಗಡಿ ಭಾಗಗಳಲ್ಲಿ ಕೂಡಲೇ ತನಿಖಾ ಠಾಣೆಗಳನ್ನು ತೆರೆಯಬೇಕು. ಗೋ ಕಳ್ಳರಿಗೆ ಯಾರ ಭಯವೂ ಇಲ್ಲದಂತಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಗೋ ಕಳ್ಳರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.