ಸಾರಾಂಶ
ಬಿ.ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ: ಒಮ್ಮೆ ಬರ, ಇನ್ನೊಮ್ಮೆ ಅತಿವೃಷ್ಟಿಯಿಂದ ಅತ್ಯಂತ ಹಿಂದುಳಿದ ಹರಪನಹಳ್ಳಿ ತಾಲೂಕಿನ ರೈತರು ಸಂಕಷ್ಟಕ್ಕೀಡಾಗುತ್ತಲೇ ಬರುತ್ತಿದ್ದಾರೆ. ಅಂತಹ ಸಂಕಷ್ಟ ಈ ಬಾರಿ ಪುನಃ ಮಳೆಯಿಂದ ಆಗಿದೆ.ಈಚೆಗೆ ಸತತ ಸುರಿದ ಮಳೆಯಿಂದ ಹರಪನಹಳ್ಳಿ ತಾಲೂಕಲ್ಲಿ ಕೃಷಿ ಹಾಗೂ ತೋಟಗಾರಿಕೆ ಸೇರಿ ಅಂದಾಜು 40 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದ್ದು, ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಬಹುತೇಕ ಮೆಕ್ಕೆಜೋಳ ಬಿತ್ತಿರುವ ರೈತರಿಗೆ ಇದೀಗ ಮಳೆಯಿಂದ ಎಲ್ಲ ಬೆಳೆ ಸೇರಿ 29.18 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ. ಅದರಲ್ಲಿ ಬಹುತೇಕ ಮೆಕ್ಕೆಜೋಳ ಹಾನಿಗೀಡಾಗಿದೆ. ತಾಳೇದಹಳ್ಳಿ ಕೆರೆ ಕೋಡಿ ಬಿದ್ದು, ತಾಳೇದಹಳ್ಳಿ, ಮಾಚಿಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಮೆಕ್ಕೆಜೋಳ ಹಾನಿಗೀಡಾಗಿದೆ.
ತೋಟಗಾರಿಕೆ ಬೆಳೆ ಹಾನಿ: 19 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಗೀಡಾಗಿದೆ. ಅದರಲ್ಲಿ ಈರುಳ್ಳಿ, ಸೇವಂತಿ, ಮೆಣಸಿನಕಾಯಿ, ಟೊಮೋಟ ಬೆಳೆಗಳು ಹಾನಿಗೀಡಾಗಿವೆ. ಅದರಲ್ಲೂ ಈರುಳ್ಳಿ ದರ ಸಹ ಸಾಕಷ್ಟು ಕಡಿಮೆಯಾಗಿದೆ. ₹10, ₹15ಕ್ಕೆ ಸಿಗುತ್ತದೆ. ಮೈದೂರು, ಬೆಣ್ಣಿಹಳ್ಳಿ, ಸಾಸ್ವಿಹಳ್ಳಿ ಮುಂತಾದ ಗ್ರಾಮಗಳಲ್ಲಿ ಈರುಳ್ಳಿ ಹೆಚ್ಟು ಹಾನಿಗೀಡಾಗಿದೆ. ಮಳೆ ಹೆಚ್ಚಾಗಿದ್ದರಿಂದ ಗಡ್ಡೆ ಕೊಳೆತು ಹಾನಿಗೀಡಾಗಿವೆ. ಈರುಳ್ಳಿ ಬೆಳೆ ಹಾನಿಗೀಡಾಗಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ದರ ಕುಸಿತದಿಂದ ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದಾರೆ.ಬೆಳೆ ಹಾನಿಗೀಡಾದ ರೈತರು ಒರಿಯಂಟಲ್ ಇನ್ಸೂರೆನ್ಸ್ ಕಂಪನಿಯ ಟೋಲ್ ಫ್ರೀ ನಂಬರ್ 18004256678 ಗೆ ಕರೆ ಮಾಡಿ ಪರಿಹಾರಕ್ಕಾಗಿ ನೋಂದಾಯಿಸಿಕೊಳ್ಳಬೇಕು. ಈಗಾಗಲೇ 2500 ರೈತರು ನೋಂದಾಯಿಸಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಬೆಳೆಯುವ ಹಂತದಲ್ಲಿರುವಾಗ ಹಾನಿಗೀಡಾದರೆ ಹಾಗೂ ಬೆಳೆ ಕಟಾವು ಮಾಡಿ ಫಸಲು ಒಣಗಲು ಜಮೀನಿನಲ್ಲಿಯೇ ಬಿಟ್ಟಾಗ ಹಾನಿಗೀಡಾದರೂ 14 ದಿನದೊಳಗೆ ನೋಂದಾಯಿಸಿ ಹೀಗೆ ಎರಡು ವಿಧದಲ್ಲಿ ಬೆಳೆ ಪರಿಹಾರ ಪಡೆಯಬಹುದು ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸುತ್ತಾರೆ.
ಬೆಳೆ ಹಾನಿಗೆ ಈಡಾದ ರೈತರು ಒರಿಯಂಟಲ್ ಇನ್ಸೂರೆನ್ಸ್ ಕಂಪನಿಯ ಟೋಲ್ ಫ್ರೀ ನಂಬರಿಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಆ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿ ಪುನೀತಕುಮಾರ- 7353607144ಗೆ ಕರೆ ಮಾಡಿ ವಿಚಾರಿಸಬಹುದು ಎನ್ನುತ್ತಾರೆ ಹರಪನಹಳ್ಳಿ ಸಹಾಯಕ ಕೃಷಿ ನಿರ್ದೇಶಕ ವಿ.ಸಿ. ಉಮೇಶ.ತೋಟಗಾರಿಕೆ ಬೆಳೆ ಹಾನಿಗೀಡಾದ 28-30 ರೈತರಿಗೆ ಪರಿಹಾರಕ್ಕಾಗಿ ಪ್ರಸ್ತಾವನೆ ಕಳಿಸಿದ್ದೇವೆ. ಇನ್ನು ಬೆಳೆ ಹಾನಿ ಸಮೀಕ್ಷೆ ಪ್ರಗತಿಯಲ್ಲಿದೆ. 19 ಹೆಕ್ಟೇರ್ ತೋಟಗಾರಿಗೆ ಬೆಳೆ ಹಾನಿಗೀಡಾಗಿದೆ ಎನ್ನುತ್ತಾರೆ ಹರಪನಹಳ್ಳಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಯಸಿಂಹ.