ಕಿಲ್ಲಾರಹಟ್ಟಿ ತಾಂಡಾದಲ್ಲಿ 40 ಜನರಿಗೆ ಜ್ವರ, ಓರ್ವರಿಗೆ ಡೆಂಘೀ

| Published : Jun 19 2025, 11:49 PM IST

ಕಿಲ್ಲಾರಹಟ್ಟಿ ತಾಂಡಾದಲ್ಲಿ 40 ಜನರಿಗೆ ಜ್ವರ, ಓರ್ವರಿಗೆ ಡೆಂಘೀ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ನಾಲ್ಕೈದು ದಿನಗಳಿಂದ ಕುಷ್ಟಗಿ ತಾಲೂಕಿನ ಕಿಲ್ಲಾರಹಟ್ಟಿ ತಾಂಡಾದಲ್ಲಿ 40ಕ್ಕೂ ಅಧಿಕ ಜನರಿಗೆ ಜ್ವರದ ಲಕ್ಷಣ ಕಂಡು ಬಂದಿದ್ದು ಗುರುವಾರ ಓರ್ವರಿಗೆ ಡೆಂಘೀ ದೃಢಪಟ್ಟಿದೆ.

ಕುಷ್ಟಗಿ:

ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನ ಕಿಲ್ಲಾರಹಟ್ಟಿ ತಾಂಡಾದಲ್ಲಿ 40ಕ್ಕೂ ಅಧಿಕ ಜನರಿಗೆ ಜ್ವರದ ಲಕ್ಷಣ ಕಂಡು ಬಂದಿದ್ದು ಗುರುವಾರ ಓರ್ವರಿಗೆ ಡೆಂಘೀ ದೃಢಪಟ್ಟಿದೆ.ತಾಲೂಕಿನ ಕಿಲ್ಲಾರಹಟ್ಟಿ ತಾಂಡಾದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಜ್ವರ, ಮೈಕೈ ನೋವು ಸೇರಿದಂತೆ ಸಣ್ಣ-ಪುಟ್ಟ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು 40ರ ಗಡಿ ದಾಟಿದೆ. ಇದರಲ್ಲಿ 30ಕ್ಕೂ ಅಧಿಕ ಜನರ ರಕ್ತ ತಪಾಸಣೆ ಮಾಡುವ ಮೂಲಕ ಪರೀಕ್ಷೆಗೆ ಕಳಿಸಿಕೊಟ್ಟ ಹಿನ್ನೆಲೆಯಲ್ಲಿ ಗುರುವಾರ ಒಂದು ಡೆಂಘೀ ಪ್ರಕರಣ ಬೆಳಕಿಗೆ ಬಂದಿದ್ದು ಈ ವರೆಗೆ ತಾಲೂಕಿನಲ್ಲಿ 4 ಪ್ರಕರಣ ಪತ್ತೆಯಾಗಿವೆ.

ತಾಂಡಾದಲ್ಲಿ ಅಸ್ವಚ್ಛತೆ ಎದ್ದು ಕಾಣುತ್ತಿದ್ದು ಅನೈರ್ಮಲ್ಯ ಕೊರತೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಇದರಿಂದ ಅನೇಕರು ಅನಾರೋಗ್ಯ ಪೀಡಿತರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮುಂಜಾಗೃತೆಯಾಗಿ ಸ್ವಚ್ಛತೆ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿಗೆ ಸೂಚಿಸಿದ್ದಾರೆ.

ತಾತ್ಕಾಲಿಕ ಕ್ಲಿನಿಕ್ ಆರಂಭ:

ಮುದೇನೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗುರುನಗೌಡ ಪಾಟೀಲ ನೇತೃತ್ವದ ತಂಡ ಸದ್ಯ ತಾಂಡಾದಲ್ಲಿ ಬೀಡುಬಿಟ್ಟಿದ್ದು, ಅನಾರೋಗ್ಯ ಪೀಡಿತ ಜನರಿಗೆ ಚಿಕಿತ್ಸೆ ನೀಡುತ್ತಿದೆ. ಸ್ವಚ್ಛತೆ ಕಾಯ್ದುಕೊಳ್ಳುವಂತೆ ವಿವಿಧ ಜಾಗೃತಿ ಕಾರ್ಯ ನಡೆಸಿದ್ದಾರೆ. ತಾಂಡಾದಲ್ಲಿ ತಾತ್ಕಾಲಿಕ ಆರೋಗ್ಯ ತಪಾಸಣೆ ಕೇಂದ್ರ ಸ್ಥಾಪಿಸಿ ಪ್ರತಿ ಮನೆಯವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಲಾರ್ವಾ ಸರ್ವೇ:

ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ತಂಡದೊಂದಿಗೆ ಪ್ರತಿಯೊಂದು ಮನೆಯಲ್ಲಿ ಸಂಗ್ರಹಿಸಿರುವ ನೀರಿನಲ್ಲಿ ಲಾರ್ವಾ ಪರೀಕ್ಷೆ ಮಾಡುವ ಮೂಲಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಸ್ಥಳಕ್ಕೆ ಆರೋಗ್ಯ ಇಲಾಖೆ ಭೇಟಿ:

ಕಿಲ್ಲಾರಹಟ್ಟಿ ತಾಂಡಾಕ್ಕೆ ಜಿಲ್ಲಾ ಸರ್ವೆಲೆನ್ಸ್‌ ಆರೋಗ್ಯ ಅಧಿಕಾರಿ, ತಾಲೂಕು ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರಿಗೆ ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯವಂತರಾಗಿರಬೇಕು. ಕಾಯಿಸಿ ಹಾರಿಸಿದ ನೀರು ಕುಡಿಯಬೇಕು, ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ತಾತ್ಕಾಲಿಕ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿವಳಿಕೆ ಮೂಡಿಸಿದ್ದಾರೆ. ಯಾವುದೇ ತೊಂದರೆಯಾಗದಂತೆ ನಿಗಾವಹಿಸುವ ಮೂಲಕ ಚಿಕಿತ್ಸೆ ನೀಡಬೇಕು ಎಂದು ಆರೋಗ್ಯ ಸಿಬ್ಬಂದಿಗೆ ಸೂಚಿಸಿದರು.

ಕಿಲ್ಲಾರಹಟ್ಟಿ ತಾಂಡಾದಲ್ಲಿ 30ಕ್ಕೂ ಅಧಿಕ ಜನರ ರಕ್ತ ತಪಾಸಣೆ ಮಾಡಿದ್ದು ಈ ಪೈಕಿ ಒಬ್ಬರಿಗೆ ಡೆಂಘೀ ದೃಢಪಟ್ಟಿದೆ. ಅನಾರೋಗ್ಯವಿರುವವರಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ತಾಂಡಾ ಸ್ವಚ್ಛತೆಗೆ ಹಾಗೂ ಫಾಗಿಂಗ್ ಮಾಡಿಸಲು ಪಿಡಿಒ ಅವರಿಗೆ ತಿಳಿಸಲಾಗಿದೆ.

ಡಾ. ಗುರುನಗೌಡ ಪಾಟೀಲ ವೈದ್ಯಾಧಿಕಾರಿ ಸಮುದಾಯ ಆರೋಗ್ಯ ಕೇಂದ್ರ ಮುದೇನೂರುನಮ್ಮ ಮನೆಯಲ್ಲಿ ಒಬ್ಬರಿಗೆ ಡೆಂಘೀ ಲಕ್ಷಣ ಕಂಡು ಬಂದಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಾರೆ.

ಹರೀಶ ನಾಯಕ ತಾಂಡಾ ನಿವಾಸಿ