ಧರ್ಮರಾಯಸ್ವಾಮಿ ದೇವಸ್ಥಾನ ಆವರಣದಲ್ಲಿ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ.

ಕನ್ನಡಪ್ರಭ ವಾರ್ತೆ ಬೆಂಗಳೂರುಕರಗ ಮಹೋತ್ಸವದ ಅವಧಿಯಲ್ಲಿ 12 ದಿನಗಳಲ್ಲಿ ಸುಮಾರು 455 ಟನ್ ತ್ಯಾಜ್ಯ ವಿಲೇವಾರಿ ಮಾಡಿ ಸ್ವಚ್ಛತೆ ಕಾಪಾಡಲಾಗಿದೆ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿನ ಅಲಂಕಾರಿಕ ಹೂವು, ಸೇರಿದಂತೆ ದಿನನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ಸೇರಿದಂತೆ ಕರಗ ಸಂಚರಿಸುವ ಪ್ರಮುಖ ರಸ್ತೆ ಹಾಗೂ ಸ್ಥಳಗಳಲ್ಲಿ ಪ್ರತಿನಿತ್ಯ ಕಸಗುಡಿಸಿ, ತ್ಯಾಜ್ಯ ವಿಲೇವಾರಿಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲಾಗಿದೆ. ಎರಡು ಪಾಳಿಯಲ್ಲಿ ಸರದಿಯಂತೆ ಸ್ವಚ್ಛತೆ ಕಾರ್ಯ ನಿರ್ವಹಣೆ ಮಾಡಲಾಗಿದ್ದು, 35 ಹೆಚ್ಚುವರಿ ಸಿಬ್ಬಂದಿ, ಹೆಚ್ಚುವರಿಯಾಗಿ 2 ಕಂಪ್ಯಾಕ್ಟರ್‌ಗಳು, 15 ಆಟೋ ಟಿಪ್ಪರ್ ಬಳಕೆ ಮಾಡಲಾಗಿದೆ ಎಂದು ಆಯುಕ್ತರು ಹೇಳಿದ್ದಾರೆ. ದೇವಸ್ಥಾನ ಮಾರ್ಗದ ರಸ್ತೆಗಳು ಹಾಗೂ ಪಾದಚಾರಿ ಮಾರ್ಗ ಸ್ವಚ್ಛತೆಗೆ ಜಟ್ಟಿಂಗ್ ಪ್ರೆಶರ್ ಯಂತ್ರಗಳ ಬಳಸಲಾಗಿದೆ. ಸ್ವತಃ ಆಯುಕ್ತರೇ 3 ದಿನಗಳ ಕಾಲ ವಿದ್ಯುತ್ ಅಲಂಕಾರ, ರಸ್ತೆ ಗುಂಡಿ ಮುಚ್ಚುವುದು, ಸ್ವಚ್ಛತೆ ಕಾರ್ಯ ಹಾಗೂ ಇತರೆ ಪೂರ್ವ ಸಿದ್ಧತೆ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದರು. ಕರಗ ಮಹೋತ್ಸವಕ್ಕೆ ಶ್ರಮಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗೆ ಆಯುಕ್ತ ರಾಜೇಂದ್ರ ಚೋಳನ್ ಧನ್ಯವಾದ ತಿಳಿಸಿದ್ದಾರೆ.