ಸಾರಾಂಶ
ಸಿಡಿಲು ಬಡಿದು ಸಾವು, ಪರಿಹಾರ ಚೆಕ್ ವಿತರಣೆ, ಎನ್ ಡಿ ಆರ್ ಎಫ್ ಮಾರ್ಗಸೂಚಿ, ಭೈರನಹಟ್ಟಿ ಗ್ರಾಮ
ಕನ್ನಡಪ್ರಭ ವಾರ್ತೆ ನರಗುಂದ
ಈಚೆಗೆ ಸಿಡಿಲು ಬಡಿದು ಸಾವನ್ನಪ್ಪಿದ ಕುರಿಗಾಹಿ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಚೆಕ್ ಅನ್ನು ಶಾಸಕ ಸಿ.ಸಿ. ಪಾಟೀಲ ವಿತರಿಸಿದರು.ಶನಿವಾರ ಪಟ್ಟಣದ ಗುಡ್ಡದಕೇರಿ ಓಣಿಯ ಕುರಿಗಾಹಿ ಮನೆಗೆ ಭೇಟಿ ನೀಡಿ ಅವರ ಕುಟುಂಬದವರಿಗೆ ಪರಿಹಾರ ಚೆಕ್ ವಿತರಸಿ ಮಾತನಾಡಿದರು.
ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ ಮೃತ ಬಾಲಕನ ತಾಯಿಗೆ ₹5 ಲಕ್ಷ ಮಂಜೂರಾತಿ ಪತ್ರ ನೀಡಲಾಗಿದೆ. ಸಿಡಿಲಾಘಾತದಲ್ಲಿ ಗಾಯಗೊಂಡ ಮೃತನ ಸಹೋದರ ಪರಸಪ್ಪನನ್ನು ಸಂಪೂರ್ಣ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಕಳಿಸಿ ಕೊಡಲಾಗುವುದು. ದೇಹವನ್ನು ಸಂಪೂರ್ಣ ಸ್ಕ್ಯಾನ್ ಮಾಡುವಂತೆ ವೈದ್ಯರಿಗೆ ತಿಳಿಸಲಾಗಿದೆ ಎಂದು ಹೇಳಿದರು. ₹5 ಲಕ್ಷ ಮಂಜೂರಾತಿ ಪತ್ರವನ್ನು ಮೃತ ಬಾಲಕನ ತಾಯಿ ಹೊನ್ನವ್ವ ಕೀಲಿಕೈ ಅವರಿಗೆ ವಿತರಿಸಿ, ತಾಲೂಕಿನ ಭೈರನಹಟ್ಟಿ ಗ್ರಾಮದ ವ್ಯಾಪ್ತಿಯಲ್ಲಿ ಜೂನ್ 6ರಂದು ಸಿಡಿಲು ಬಡಿತದಿಂದ ಯಲ್ಲಪ್ಪ ಹನುಮಂತಪ್ಪ ಕೀಲಿಕೈ ಎಂಬ ಬಾಲಕ ಸಾವನ್ನಪ್ಪಿದ್ದು, ಅವನ ಸಹೋದರ ಪರಸಪ್ಪ ಕೀಲಿಕೈ ಗಾಯಗೊಂಡಿದ್ದಾನೆ. ಪ್ರಕೃತಿ ವಿಕೋಪದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಜೀವಹಾನಿಗೆ ₹5 ಲಕ್ಷ ಖಜಾನೆ-2 ಮುಖಾಂತರ ಮೃತನ ತಂದೆ ಹನುಮಂತಪ್ಪ ಕೀಲಿಕೈ ಅವರ ಎಸ್.ಬಿ.ಐ. ಖಾತೆಗೆ ಜಮಾ ಮಾಡಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ರೀಶೈಲ ತಳವಾರ, ಎಸ್.ಎಲ್. ಪಾಟೀಲ, ಹನುಮಂತಪ್ಪ ಕಿಲಿಕೈ, ಫಕೀರಪ್ಪ ಕಿಲಿಕೈ, ಭೀಮಪ್ಪ ಸನ್ನಿ, ಸಿದ್ದಪ್ಪ ಎಲಿಗಾರ, ಮುತ್ತು ಎಲಿಗಾರ, ಪುರಸಭೆ ಮಾಜಿ ಅಧ್ಯಕ್ಷ ಎಸ್.ಜಿ. ಮುತ್ತವಾಡ, ಬಸಪ್ಪ ಮಳಗಿ, ಮಾಬುಸಾಬ ಹಂಪಿಹೊಳಿ, ಅಡಿವೆಪ್ಪ ಮೆಣಸಿನಕಾಯಿ, ವಿಠ್ಠಲ ಹವಾಲ್ದಾರ, ಗ್ರಾಮ ಲೆಕ್ಕಾಧಿಕಾರಿ ಆನಂದ ಭೋವಿ, ಇಮಾಮಸಾಬ ಮುಳಗುಂದ ಸೇರಿದಂತೆ ಮುಂತಾದವರು ಇದ್ದರು.