ಅಯೋಧ್ಯೆಗೆ 51 ಅಡಿ ಉದ್ದದ ಭಗವಾ ಧ್ವಜ

| Published : Jan 18 2024, 02:05 AM IST

ಸಾರಾಂಶ

ಶಶಿಕಾಂತ ಸ್ಪಟಿಕ ಅವರು 2019ರಲ್ಲಿ ಅಯೋಧ್ಯೆಗೆ ಹೋಗಿದ್ದಾಗ ಭಗವಾಧ್ವಜ ತಯಾರಿಸಲು ಅನುಮತಿಯನ್ನು ರಾಮಮಂದಿರ ಟ್ರಸ್ಟ್‌ನವರಲ್ಲಿ ಕೋರಿದ್ದರು. ಟ್ರಸ್ಟ್‌ನವರು ಅನುಮತಿ ನೀಡಿದ್ದರು.

ಹರಪನಹಳ್ಳಿ: ಅಯೋಧ್ಯೆಯಲ್ಲಿ ಜ. 22ರಂದು ಉದ್ಘಾಟನೆಗೊಳ್ಳಲಿರುವ ರಾಮಮಂದಿರಕ್ಕೆ ಸಮರ್ಪಣೆ ಮಾಡಲು ಪಟ್ಟಣದಿಂದ 51 ಅಡಿ ಉದ್ದದ ಭಗವಾಧ್ವಜದೊಂದಿಗೆ ಇಲ್ಲಿಯ ಮೂವರು ಭಕ್ತರು ಮಂಗಳವಾರ ರಾತ್ರಿ ತೆರಳಿದ್ದಾರೆ.

ಪಟ್ಟಣದ ವೆಂಕಟೇಶ್ವರ ರೆಡಿಮೆಡ್‌ ಅಂಗಡಿಯ ಮಾಲೀಕ ಶಶಿಕಾಂತ ಸ್ಪಟಿಕ ಅವರು 2019ರಲ್ಲಿ ಅಯೋಧ್ಯೆಗೆ ಹೋಗಿದ್ದಾಗ ಭಗವಾಧ್ವಜ ತಯಾರಿಸಲು ಅನುಮತಿಯನ್ನು ರಾಮಮಂದಿರ ಟ್ರಸ್ಟ್‌ನವರಲ್ಲಿ ಕೋರಿದ್ದರು.

ಟ್ರಸ್ಟ್‌ನವರು ಅನುಮತಿ ನೀಡಿದ್ದರು. ಈ ಹಿನ್ನೆಲೆ ಭಗವಾಧ್ವಜವನ್ನು ಶಶಿಕಾಂತ ಸ್ಪಟಿಕ ಅವರು ಇಲ್ಲಿಯ ತೆಲುಗರ ಬೀದಿಯಲ್ಲಿರುವ ರಾಮಾಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಕೋಟೆ ಆಂಜನೇಯ ದೇವಸ್ಥಾನಕ್ಕೆ ತೆರಳಿದರು. ನಂತರ ಶಶಿಕಾಂತ್‌ ಸ್ಪಟಿಕ ಅವರು ಸ್ಥಳೀಯ ಸಂತ ಜ್ಞಾನೇಶ್ವರ ಮಂದಿರದ ಧರ್ಮಕರ್ತ ಸ್ಪಟಿಕ ಜ್ಞಾನೇಶ್ವರ ಮಹಾರಾಜ ಹಾಗೂ ಸ್ಪಟಿಕ ಸುನಿಲ್‌ಕುಮಾರ ಅವರ ಜತೆ ಅಯೋಧ್ಯೆಗೆ ತೆರಳಿದರು.

ಇದಕ್ಕೂ ಪೂರ್ವದಲ್ಲಿ ಇಲ್ಲಿಯ ರಾಮಾಂಜನೇಯ ದೇವಸ್ಥಾನದಲ್ಲಿ ಸ್ಥಳೀಯ ತೆಗ್ಗಿನಮಠದ ವರಸದ್ಯೋಜಾತ ಸ್ವಾಮಿಗಳ ಸಾನ್ನಿಧ್ಯದಲ್ಲಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಮೆರವಣಿಗೆಗೆ ಚಾಲನೆ ನೀಡಿದರು.

ಬಿಜೆಪಿ ಮುಖಂಡ ಜಿ. ನಂಜನಗೌಡ, ಪೂಜಾರ ಚಂದ್ರಶೇಖರ, ಡಿಶ್‌ ವೆಂಕಟೇಶ, ಎ.ಎಂ. ವಿಶ್ವನಾಥ ಚಂದ್ರಾಧರಭಟ್‌ ಸೇರಿದಂತೆ ಭಾವಸಾರ ಕ್ಷತ್ರಿಯ, ಆರ್ಯವೈಶ್ಯ, ಬಜರಂಗದಳ, ಆರ್‌ಎಸ್‌ಎಸ್‌, ವಿಎಚ್‌ಪಿ, ಸವಿತಾ ಸಮಾಜದವರು ಉಪಸ್ಥಿತರಿದ್ದರು.ಅರ್ಪಣೆ: ಭಗವಾಧ್ವಜ ಅಯೋಧ್ಯೆಯ ರಾಮಮಂದಿರಕ್ಕೆ ಸಲ್ಲಿಸಲು ನಮ್ಮಮನವಿಗೆ ಅಲ್ಲಿಯ ಟ್ರಸ್ಟ್‌ನವರು ಒಪ್ಪಿಗೆ ಸೂಚಿಸಿದ್ದರು. ಈ ಹಿನ್ನೆಲೆ 51 ಅಡಿ ಉದ್ದದ ಭಗವಾ ಧ್ವಜದೊಂದಿಗೆ ತೆರಳುತ್ತಿದ್ದೇವೆ ಎಂದು ಶಶಿಕಾಂತ ಸ್ಪಟಿಕ ತಿಳಿಸಿದರು.