ಕನ್ನಡಪ್ರಭ ವಾರ್ತೆ ಗುಬ್ಬಿ

ಮಹಿಳೆಯರು ಹಾಗೂ ಬಾಲಕಿಯರಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿರುವ ಎಚ್‌ಪಿವಿ ಲಸಿಕೆಯು ಆರೋಗ್ಯ ಕಾಪಾಡುವಲ್ಲಿ ಮಹತ್ವಪಾತ್ರ ವಹಿಸುತ್ತದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮಾವೈರಸ್) ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕದಲ್ಲಿ 6,89,620 ಈ ಮಕ್ಕಳಿದ್ದು ಅದರಲ್ಲಿ 254000 ಮಕ್ಕಳಿಗೆ ಲಸಿಕೆ ಕೇಂದ್ರ ಸರ್ಕಾರಿ ದಿಂದ ಕಳಿಸಲಾಗಿದೆ. ತುಮಕೂರು ಜಿಲ್ಲೆಗೆ 15900 ವ್ಯಾಕ್ಸಿನ್ ಬಂದಿದೆ. ಆದರೆ ಆರೋಗ್ಯ ಇಲಾಖೆಯು ಇಲ್ಲಿಯವರೆಗೂ 6000 ವ್ಯಾಕ್ಸಿನ್ ಮಾತ್ರ ಹಾಕಲಾಗಿದೆ. ಅಧಿಕಾರಿಗಳು ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳನ್ನ ಸಮರ್ಪಕವಾಗಿ ನಿರ್ವಹಿಸದಿದ್ದರೆ ಯೋಜನೆಯ ಫಲ ಎಲ್ಲರಿಗೂ ದೊರೆಯುತ್ತದೆ. ಈ ವ್ಯಾಕ್ಸಿನ್ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ಇಲ್ಲದಿರುವುದು ಬೇಸರದ ಸಂಗತಿ ಆಗಿದೆ. ಒಂದು ವ್ಯಾಕ್ಸಿನ್ ಬೆಲೆ 5000ರು. ಸಾಮಾನ್ಯ ಜನರು ಖಾಸಗಿ ಆಸ್ಪತ್ರೆಯಲ್ಲಿ ಹಾಕಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇಂತಹ ಯೋಜನೆಯನ್ನು ಅಧಿಕಾರಿಗಳು ಜನರಿಗೂ ಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.ಎಚ್.ಪಿ.ವಿ ವೈರಸ್ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ. ಈ ಲಸಿಕೆ ಆ ವೈರಸ್ ವಿರುದ್ಧ ಹೋರಾಡಲು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗರ್ಭಕಂಠದ ಕ್ಯಾನ್ಸರ್ ಮಾತ್ರವಲ್ಲದೆ, ಜನನಾಂಗದ ಗಡ್ಡೆಗಳ ವಿರುದ್ಧವೂ ರಕ್ಷಣೆ ನೀಡುತ್ತದೆ. ಲಸಿಕೆಯನ್ನು 9 ರಿಂದ 14 ವರ್ಷದೊಳಗಿನ ಎಲ್ಲಾ ಹೆಣ್ಣುಮಕ್ಕಳು ಲಸಿಕೆಯನ್ನು ಪಡೆದುಕೊಳ್ಳಬಹುದು. ಕಾರ್ಯಕ್ರಮದಲ್ಲಿ ಡಿಎಚ್ಒ ಚಂದ್ರಶೇಖರ್, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ರವಿ ಹೆಬ್ಬಾಕ, ದಿಶಾ ಸಮಿತಿಯ ನವ್ಯಬಾಬು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಮುಖಂಡರಾದ ಎಸ್.ಡಿ. ದಿಲೀಪ್ ಕುಮಾರ್, ಜಿ.ಎನ್. ಬೆಟ್ಟಸ್ವಾಮಿ, ಬಿ.ಎಸ್.ನಾಗರಾಜು, ಚಂದ್ರಶೇಖರ ಬಾಬು, ಟಿಎಚ್ಒ ಬಿಂದುಮಾಧವ್, ಆಡಳಿತ ಅಧಿಕಾರಿ ಕೇಶವರಾಜ್, ತಹಸೀಲ್ದಾರ್ ಆರತಿ ಬಿ, ಇಒ ರಂಗನಾಥ್, ಬಿಇಒ ಎಂ.ಎಸ್.ನಟರಾಜು, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮಂಜುಳಾದೇವಿ, ರಾಜಕೀಯ ಮುಖಂಡರು, ಸಾರ್ವಜನಿಕರು ಇತರರು ಇದ್ದರು.