ಸಾರಾಂಶ
ಪ್ರತ್ಯೇಕ ಮೂರು ಚೆಕ್ಪೋಸ್ಟ್ಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ, ಸರಿಯಾದ ದಾಖಲೆ ಹೊಂದಿರದ 6.89 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ಧಾರವಾಡ:
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಿರುವ ಜಿಲ್ಲೆಯ 24 ಚೆಕ್ ಪೋಸ್ಟ್ಗಳಲ್ಲಿ ಪ್ರತಿ ವಾಹನಗಳ ತೀವ್ರ ತಪಾಸಣೆ ಮಾಡುತ್ತಿದ್ದು, ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗೆ ವರೆಗೆ ಪ್ರತ್ಯೇಕ ಮೂರು ಚೆಕ್ಪೋಸ್ಟ್ಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ, ಸರಿಯಾದ ದಾಖಲೆ ಹೊಂದಿರದ ₹ 6.89 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಕುಂದಗೋಳ ಕ್ರಾಸ್ ಹತ್ತಿರ ತೆರೆದಿರುವ ಚೆಕ್ಪೋಸ್ಟ್ನಲ್ಲಿ ಗುರುವಾರ ರಾತ್ರಿ ಅದರಗುಂಚಿಯಿಂದ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ಕೆಎ-63 ಎನ್- 3173 ಎರಟಿಗಾ ಕಾರನ್ನು ತಪಾಸಣೆ ಮಾಡಿದಾಗ ಅದರಲ್ಲಿ ಪ್ರಯಾಣಿಸುತ್ತಿದ್ದ ಅದರಗುಂಚಿ ಗ್ರಾಮದ ಮಲ್ಲಿಕಾರ್ಜುನ ಶಿವಪ್ಪ ಬೇಗೂರ ಬಳಿ ದಾಖಲೆ ಇಲ್ಲದ ₹ 2.10 ಲಕ್ಷ ಪತ್ತೆಯಾಗಿದೆ. ಈ ಕುರಿತು ವಿಚಾರಣೆ ನಡೆಸಿದಾಗ ಸಮಂಜಸ ಉತ್ತರ ನೀಡದಿರುವುದರಿಂದ ಅವರ ಹಣವನ್ನು ಜಪ್ತಿ ಮಾಡಲಾಗಿದೆ. ಗ್ರಾಮೀಣ ಸಿಪಿಐ ಮುರಗೇಶ ಚನ್ನನವರ, ಎಂಸಿಸಿ ನೋಡಲ್ ಅಧಿಕಾರಿ ಎಸ್.ವಿ. ಕುಲಕರ್ಣಿ ಹಾಗೂ ಅಶೋಕ ಕಲಕೇರಿ ಇದ್ದರು.ಹುಬ್ಬಳ್ಳಿ- ಕಾರವಾರ ರಸ್ತೆಯ ಸಂಗಟಿಕೋಪ್ಪ ಚೆಕ್ಪೋಸ್ಟ್ನಲ್ಲಿ ಗುರುವಾರ ರಾತ್ರಿ ಕಾರವಾರದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಇನ್ನೋವಾ ಕ್ರಿಸ್ಟಾ ಕಾರು ಜಿಎ-06 ಇ-4482 ವಾಹನ ತಪಾಸಣೆ ಮಾಡಿದಾಗ ಅದರಲ್ಲಿ ಪ್ರಯಾಣಿಸುತ್ತಿದ್ದ ಶಿರಸಿಯ ಸತ್ಯಂ ಎಸ್.ವಿ. ಬಳಿ ₹ 1.9 ಲಕ್ಷ ನಗದು ಪತ್ತೆ ಆಗಿದ್ದು, ತಪಾಸಣೆ ಸಮಯದಲ್ಲಿ ಇದಕ್ಕೆ ಸರಿಯಾದ ದಾಖಲೆ ತೋರಿಸಿಲ್ಲ. ತಕ್ಷಣ ಎಸ್ಎಸ್ಟಿ ಮ್ಯಾಜಿಸ್ಟ್ರೇಟ್ ದೇವರಾಜ ಸದರಿ ಹಣವನ್ನು ಜಪ್ತಿ ಮಾಡಿದ್ದಾರೆ.
ಅದೇ ರೀತಿ ಶುಕ್ರವಾರ ಬೆಳಗ್ಗೆ 10ಕ್ಕೆ ಇಲ್ಲಿಯ ಕೃಷಿ ವಿಶ್ವವಿದ್ಯಾಲಯ ಬಳಿ ಸ್ಥಾಪಿಸಿರುವ ಚೆಕ್ಪೋಸ್ಟ್ನಲ್ಲಿ ಅಥಣಿಯಿಂದ ಧಾರವಾಡಕ್ಕೆ ಹೋಗುತ್ತಿದ್ದ ಬೋಲೆರೊ ಕೆಎ-71 ಎಂ-0969 ವಾಹನವ ಮಲ್ಲಿಕಾರ್ಜುನ ಬಶೆಟ್ಟೆಪ್ಪ ಹೊಳ್ಳದಮಳ ಬಳಿ ದಾಖಲೆ ಇಲ್ಲದ ₹ 3.70 ಲಕ್ಷ ನಗದು ಪತ್ತೆ ಆಗಿದೆ. ತಕ್ಷಣ ಎಸ್.ಎಸ್.ಟಿ ಮ್ಯಾಜಿಸ್ಟ್ರೇಟ್ ಎಂ.ಎಚ್. ಹೊನ್ಯಾಳ ಸದರಿ ಹಣವನ್ನು ವಶಪಡಿಸಿಕೊಂಡಿದ್ದಾರೆ.ಈ ವೇಳೆ ಸಹಾಯಕ ಚುನಾವಣಾಧಿಕಾರಿ ಶಾಲಂ ಹುಸೇನ್, ತಹಸೀಲ್ದಾರ್ ದೊಡ್ಡಪ್ಪ ಹೂಗಾರ, ಎಂಸಿಸಿ ನೋಡಲ್ ಅಧಿಕಾರಿ ಶಿವಪುತ್ರಪ್ಪ ಹೊಸಮನಿ ಇದ್ದರು.