ಕನ್ನಡಪ್ರಭ ವಾರ್ತೆ ಸಿದ್ದಾಪುರ

ಹುಸೂರು ಗ್ರಾಮದ ಕೃಷ್ಣ ದ್ಯಾವ ನಾಯ್ಕರ ಅರಣ್ಯ ಸಾಗುವಳಿ ಕ್ಷೇತ್ರ ಒಕ್ಕಲೆಬ್ಬಿಸಲು ಒಕ್ಕಲೆಬ್ಬಿಸುವ ಕ್ಷೇತ್ರದ ನಿರ್ದಿಷ್ಟ ಗಡಿರೇಖೆ ಇಲ್ಲದ ಆದೇಶದೊಂದಿಗೆ ನೂರೈವತ್ತಕ್ಕೂ ಮಿಕ್ಕಿ ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ ಅರಣ್ಯವಾಸಿಗಳು ಸಾಗುವಳಿ ಕ್ಷೇತ್ರ ದೃಡೀಕರಣಕ್ಕೆ ಒತ್ತಾಯಿಸಿ, ಒಕ್ಕಲೆಬ್ಬಿಸಲು ಪ್ರಯತ್ನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ಹುಸೂರಿನಲ್ಲಿ ಜರುಗಿದೆ.

೨೬ ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿ, ಮಾನಸಿಕ ಅಸ್ವಸ್ಥ ಆಗಿರುವ ಅರಣ್ಯವಾಸಿ ಕೃಷ್ಣ ದ್ಯಾವ ನಾಯ್ಕಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಾಧಿಕಾರದಿಂದ ಜು. ೨೭ರಂದು ತಕ್ಷಣ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕೆಂದು ಆದೇಶ ನೀಡಿದ ಹಿನ್ನೆಲೆ ಮೇಲಿನ ಪ್ರಕ್ರಿಯೆ ಜರುಗಿತ್ತು.

ಕ್ಷೇತ್ರ ದೃಢೀಕರಣಕ್ಕೆ ಸಾಕಷ್ಟು ಸಮಯ ನೀಡದಕ್ಕೆ ಆಕ್ಷೇಪ, ವಾದ-ವಿವಾದಗಳು ಅರಣ್ಯವಾಸಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ನಡುವೆ ಜರುಗಿತು. ಈ ಸಂದರ್ಭ ಅರಣ್ಯ ಭೂಮಿ ಹೋರಾಟಗಾರರ ವೇದಿಕೆಯ ಜಿಲ್ಲಾ ಸಂಚಾಲಕ ಮಹಾಬಲೇಶ್ವರ ನಾಯ್ಕ, ಸಂಕೇತ ನಾಯ್ಕ, ಮಂಜುನಾಥ ನಾಯ್ಕ ಸುಂಕತ್ತಿ, ಕಾರ್ಲುಯಿಸ್ ಮಾವಿನಗುಂಡಿ, ರವಿ ನಾಯ್ಕ ಹಲಗೇರಿ, ಪ್ರಕಾಶ ನಾಯ್ಕ ಹೊಸೂರು, ರಾಜು ಹೊಸೂರು, ದಯಾನಂದ ಹೊಸೂರು ಮುಂತಾದವರು ಕಾನೂನು ಅನುಸರಿಸದೇ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಡಿವೈಎಸ್ಪಿ ಗೀತಾ ಪಾಟೀಲ್ ಸ್ಥಳ ಪರಿಶೀಲಿಸಿದರು. ಶಿರಸಿ ಎಸಿಎಫ್ ಅಮಿತ್, ಆರ್‌ಎಫ್‌ಓ ಉಷಾ ಕಬ್ಬೇರ, ಸಿಪಿಐ ಸೀತಾರಾಮ, ಪಿಎಸ್ಐ ಶಾಂತಿನಾಥ ಪಾಸಾನೆ ಹಾಗೂ ನಾಗಪ್ಪ ಭೋವಿ, ಉಪ ತಹಶೀಲ್ದಾರ ಡಿ.ಎಂ. ನಾಯ್ಕ, ಸರ್ವೆ ಇಲಾಖೆಯ ಗಣೇಶ ಇದ್ದರು.


ನಂತರದಲ್ಲಿ ಪೊಲೀಸ್ ಇಲಾಖೆಯ ಸಮಯೋಚಿತ ಸಲಹೆ, ಸೂಚನೆ ಮೇರೆಗೆ ವಾತಾವರಣ ತಿಳಿಗೊಂಡಿತ್ತು. ಅತಿಕ್ರಮಣ ಕ್ಷೇತ್ರದ ಬೇಲಿ ಗಿಡ ಮರ ಕಡಿಯದೇ ಸಾಗುವಳಿ ಕ್ಷೇತ್ರದ ಹೊರ ಪ್ರದೇಶದ ಕ್ಷೇತ್ರದಲ್ಲಿ ಅಗಳ ಹೊಡೆಯುವ ಕಾರ್ಯಕ್ಕೆ ಮಾತ್ರ ಒಕ್ಕಲೆಬ್ಬಿಸುವ ಪ್ರಕ್ರಿಯೆ ಸೀಮಿತವಾಗಿತ್ತು ಎಂದು ಹೋರಾಟಗಾರರ ವೇದಿಕೆಯ ನೇತೃತ್ವ ವಹಿಸಿದ ಮಹಾಬಲೇಶ್ವರ ನಾಯ್ಕ ಬೇಡ್ಕಣಿ ಮತ್ತು ತಾಲೂಕಾ ಸಂಚಾಲಕ ಸಂಕೇತ್ ನಾಯ್ಕ ತಿಳಿಸಿದರು.

ಸೈನಿಕನಾಗಿ ೨೬ ವರ್ಷ ದೇಶ ಸೇವೆ ಸಲ್ಲಿಸಿದ ಕುಟುಂಬದ ಸಾಗುವಳಿ ಕ್ಷೇತ್ರ ಒಕ್ಕಲೆಬ್ಬಿಸುವ ಪ್ರಕ್ರಿಯೆಯಲ್ಲಿ ಜರುಗಿದ ಘಟನೆ ಮತ್ತು ಅರಣ್ಯ ಇಲಾಖೆಯ ರೀತಿ ನೀತಿ, ಅತ್ಯಂತ ಮಾನವೀಯತೆಗೆ ಮೀರಿದ ಹೇಯ ಕೃತ್ಯವೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಖಂಡಿಸಿದ್ದಾರೆ.