ಸಾರಾಂಶ
ಹರಪನಹಳ್ಳಿ: ಹರಪನಹಳ್ಳಿ ತಾಲೂಕಿನ 168 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸಚಿವರ ಕೋಟಾದಲ್ಲಿ ₹6 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.ಅವರು ತಾಲೂಕಿನ ತೆಲಿಗಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ತೆಲಿಗಿ ಹೋಬಳಿ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ಒಂದು ಶಾಲೆಗೆ ₹3.40 ಲಕ್ಷ ನಿಗದಿ ಮಾಡಲಾಗಿದೆ. ಜಿಲ್ಲಾ ಅನುದಾನದಲ್ಲಿ ₹1.30 ಲಕ್ಷರಂತೆ 10 ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.ಇದಲ್ಲದೆ ಇತರ ಅಭಿವೃದ್ಧಿ ಕೆಲಸಗಳಿಗೆ ಬಿಡುಗಡೆಯಾಗಿರುವ ಅನುದಾನ ಸೇರಿದಂತೆ ಒಟ್ಟು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ₹8 ಕೋಟಿ ಅನುದಾನ ಬಂದಂತಾಗುತ್ತದೆ ಎಂದು ಅವರು ತಿಳಿಸಿದರು.
ಶಾಲೆಗಳಿಗೆ ಶುದ್ಧ ಕುಡಿಯುುವ ನೀರಿನ ಘಟಕಗಳನ್ನು ಸ್ಥಾಪಿಸುವ ಜವಾಬ್ದಾರಿಯನ್ನು ರಾಜ್ಯ ಹ್ಯಾಬಿಟೇಟ್ ಕೇಂದ್ರಕ್ಕೆ ನೀಡಲಾಗಿದೆ ಎಂದು ಅವರು ಹೇಳಿದರು.ಜನಸಾಮಾನ್ಯರು ಜಿಲ್ಲಾ ಕೇಂದ್ರಕ್ಕೆ, ತಾಲೂಕು ಕೇಂದ್ರಕ್ಕೆ ಬರಲು ದೂರವಾಗುತ್ತದೆ ಎಂದು ಸರ್ಕಾರ ತಮ್ಮ ಮನೆಬಾಗಿಲಿಗೆ ಬಂದು ಸಮಸ್ಯೆ ನಿವಾರಣೆ ಮಾಡಬೇಕು ಎಂದು ಹೋಬಳಿ ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಅವರು ಕೋರಿದರು.
ವಿಜಯನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಅನುರಾಧಾ ಮಾತನಾಡಿ, ಸರ್ಕಾರದ ಯೋಜನೆಗಳು ಕಟ್ಟಕಡೆಯ ನಾಗರಿಕರಿಗೂ ಸಿಗಬೇಕು ಹಾಗೂ ಇರುವ ಯೋಜನೆಗಳ ಬಗ್ಗೆ ಸಹ ಜನರಿಗೆ ಮಾಹಿತಿ ದೊರಕಬೇಕು. ಆ ನಿಟ್ಟಿನಲ್ಲಿ ಜನತಾದರ್ಶನ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಅವರು ಹೇಳಿದರು.ತಹಸೀಲ್ದಾರ್ ಬಿ.ವಿ. ಗಿರೀಶಬಾಬು ಪ್ರಾಸ್ತಾವಿಕವಾಗಿ ಮಾತನಾಡಿ, ಕೆಲವೊಂದು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗುವುದು. ಇನ್ನೂ ಕೆಲವೊಂದು ಸಮಸ್ಯೆಗಳನ್ನು ನಿಗದಿತ ಸಮಯದಲ್ಲಿ ಬಗೆಹರಿಸಲಾಗುವುದು ಎಂದು ಹೇಳಿದರು.
157 ಅರ್ಜಿಗಳು ಸ್ವೀಕೃತ: ಜನತಾ ದರ್ಶನದಲ್ಲಿ ಕಂದಾಯ -57, ತಾಪಂ -4, ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ -8, ಶಿಕ್ಷಣ -7, ಪಂಚಾಯತ್ ರಾಜ್ ಎಂಜಿನಿಯರಿಂಗ್ -6, ಆರೋಗ್ಯ -3, ಬೆಸ್ಕಾಂ -5 ಹೀಗೆ ವಿವಿಧ ಇಲಾಖೆಗಳಿಗೆ 157 ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕೃತಗೊಂಡವು.ತೆಲಿಗಿ ಗ್ರಾಪಂ ಅಧ್ಯಕ್ಷೆ ರೇಖಾ ಕಪ್ಪೇರ, ಉಪಾಧ್ಯಕ್ಷ ಕೊಂಡಜ್ಜಿ ಲೋಕೇಶಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ತಾಪಂ ಇಒ ಚಂದ್ರಶೇಖರ, ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಣುಕಾದೇವಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಎಇಇ ನಾಗಪ್ಪ, ಆರ್ಎಫ್ಒ ಮಲ್ಲಪ್ಪ, ಬಿಇಒ ಬಸವರಾಜಪ್ಪ, ಸಹಾಯಕ ಕೃಷಿ ನಿರ್ದೇಶಕ ಉಮೇಶ, ತೋಟಗಾರಿಕೆ ಸಹಾಯಕ ನಿರ್ದೇಶಕ ಜಯಸಿಂಹ, ಪುರಸಭಾ ಸದಸ್ಯ ಲಾಟೀದಾದಾಪೀರ, ಅಕ್ಷರ ದಾಸೋಹದ ಸಹಾಯಕ ನಿರ್ದೆಶಕ ಜಯರಾಜ, ಇಸಿಒ ಗಿರಜ್ಜಿ ಮಂಜುನಾಥ, ಮತ್ತೂರು ಬಸವರಾಜ, ಪ್ರದೀಪ ಕೊಟ್ಟೂರು, ಎಲ್. ಮಂಜನಾಯ್ಕ, ಎಂ. ಶಂಕರ, ಇತರರು ಹಾಜರಿದ್ದರು.