ಕನ್ನಡಪ್ರಭ ವಾರ್ತೆ ಬೆಂಗಳೂರುಇತ್ತೀಚೆಗೆ ಆರ್ಟ್‌ ಆಫ್‌ ಲಿವಿಂಗ್‌ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರು ಸಾಗುವ ಮಾರ್ಗದಲ್ಲಿ ಸ್ಫೋಟಕವಾಗದ ಜಿಲೆಟಿನ್‌ ಕಡ್ಡಿಗಳು ಪತ್ತೆಯಾದ ಪ್ರಕರಣದ ಸಂಬಂಧ ಆರು 6 ಮಂದಿ ಪೊಲೀಸರನ್ನು ಅನಮಾನತುಗೊಳಿಸಲಾಗಿದೆ.

ಕರ್ತವ್ಯಲೋಪ ಹಿನ್ನೆಲೆಯಲ್ಲಿ ತಲಾ ಒಬ್ಬ ಪಿಎಸ್​ಐ, ಎಎಸ್‌ಐ ಹಾಗೂ ನಾಲ್ವರು ಕಾನ್ಸ್​​ಟೇಬಲ್​ಗಳನ್ನು ಅಮಾನತು ಮಾಡಲಾಗಿದೆ. ಇವರೆಲ್ಲರನ್ನೂ ಮೇ 10 ರಂದು ಪ್ರಧಾನಿಯವರ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಸ್ಫೋಟಕವಾದ ಜಿಲೆಟಿನ್‌ ಕಡ್ಡಿ ಪತ್ತೆಯಾದ ಸ್ಥಳದ ಬಳಿಯೇ ಇವರು ಭದ್ರತೆ ನೋಡಿಕೊಳ್ಳುತ್ತಿದ್ದರು. ಅಲರ್ಟ್​ ಆಗಿ​ ಇರಲಿಲ್ಲ ಮತ್ತು ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಕಾರಣ ನೀಡಿ 6 ಮಂದಿಯನ್ನು ಅಮಾನತು ಮಾಡಿ ಬೆಂಗಳೂರು ದಕ್ಷಿಣ ಎಸ್​.ಪಿ. ಶ್ರೀನಿವಾಸ್ ಗೌಡ ಆದೇಶಿಸಿದ್ದಾರೆ.

ಪ್ರಕರಣದ ವಿವರ:

ಮೇ 10 ರಂದು ಪ್ರಧಾನಿ ಮೋದಿ ಅವರು ‘ಆರ್ಟ್ ಆಫ್ ಲಿವಿಂಗ್’ ಆಶ್ರಮದ ಕಾರ್ಯಕ್ರಮಕ್ಕೆ ಹೋಗಬೇಕಿದ್ದ ಎರಡು ಗಂಟೆ ಮುನ್ನ ತಾತಗುಣಿ ಸಮೀಪದ ವಡೇರಹಳ್ಳಿ ಗೇಟ್ ಸಮೀಪ ಅನುಮಾನಾಸ್ಪದ ಬಾಕ್ಸ್ ಒಂದು ಪತ್ತೆಯಾಗಿತ್ತು. ಭದ್ರತೆಗೆ ನಿಯೋಜನೆಗೊಂಡಿದ್ದ ಕಾನ್‌ಸ್ಟೇಬಲ್‌ ಈ ಬಾಕ್ಸ್ ಗಮನಿಸಿ ಮಾಹಿತಿ ನೀಡಿದ್ದರು. ಸುದ್ದಿ ತಿಳಿದ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಅದರಲ್ಲಿ ಜಿಲೆಟಿನ್‌ ಕಡ್ಡಿಗಳು ಕಂಡುಬಂದಿತ್ತು.ಜಿಲೆಟಿನ್‌ ಕಡ್ಡಿಗಳನ್ನು ವಶಕ್ಕೆ ಪಡೆದ ಪೊಲೀಸರು, ಇಡೀ ಮಾರ್ಗವನ್ನು ಮತ್ತೊಮ್ಮೆ ತೀವ್ರ ತಪಾಸಣೆಗೆ ಒಳಪಡಿಸಿದ ಬಳಿಕವೇ ಪ್ರಧಾನಿ ಸಂಚಾರಕ್ಕೆ ಅವಕಾಶ ನೀಡಿದ್ದರು.