ಸಾರಾಂಶ
ನಗರದ ನಿಮ್ಹಾನ್ಸ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್ಜಿಯುಎಚ್ಎಸ್)ದ 27ನೇ ಘಟಿಕೋತ್ಸವದಲ್ಲಿ 63,982 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ನಿಮ್ಹಾನ್ಸ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್ಜಿಯುಎಚ್ಎಸ್)ದ 27ನೇ ಘಟಿಕೋತ್ಸವದಲ್ಲಿ 63,982 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.ಒಟ್ಟು 93 ವಿದ್ಯಾರ್ಥಿಗಳಿಗೆ 109 ಚಿನ್ನದ ಪದಕ ಹಾಗೂ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು. ಈ ಬಾರಿ ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ಅರ್ಹರಾಗಿರುವ 63,982 ವಿದ್ಯಾರ್ಥಿಗಳ ಪೈಕಿ ಕೆಲವರಿಗೆ ಸಾಂಕೇತಿಕವಾಗಿ ಗಣ್ಯರಿಂದ ಪದವಿ ಪ್ರದಾನ ಮಾಡಲಾಯಿತು. ಅಜೀಂ ಪ್ರೇಮ್ಜಿ ಫೌಂಡೇಷನ್ ಅಧ್ಯಕ್ಷ ಅಜೀಂ ಪ್ರೇಮ್ಜಿ ಹಾಗೂ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಪದವಿ ಪ್ರಮಾಣ ಪತ್ರ ವಿತರಿಸಿದರು.
ಇದೇ ವೇಳೆ ವಿಜ್ಞಾನಿ, ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್ ಕೇಂದ್ರದ ಮುಖ್ಯಸ್ಥ ಡಾ। ಹೊಂಬೇಗೌಡ ಶರತ್ಚಂದ್ರ, ಒಎಂಎಫ್ ಸರ್ಜನ್ ಡಾ। ಗಿರೀಶ್ ರಾವ್ ಮತ್ತು ನರರೋಗ ತಜ್ಞ ಡಾ। ಜಿ.ಟಿ.ಸುಭಾಷ್ ಅವರಿಗೆ ರಾಜ್ಯಪಾಲರು ಡಾಕ್ಟರ್ ಆಫ್ ಸೈನ್ಸ್ ಪ್ರದಾನ ಮಾಡಿ ಗೌರವಿಸಿದರು.ವೈದ್ಯಕೀಯ ಶಿಕ್ಷಣ ಸಚಿವ ಡಾ। ಶರಣ ಪ್ರಕಾಶ ಪಾಟೀಲ, ವಿಶ್ವವಿದ್ಯಾಲಯದ ಕುಲಪತಿ ಡಾ। ಬಿ.ಸಿ.ಭಗವಾನ್, ಕುಲಸಚಿವ ಪಿ.ಆರ್.ಶಿವಪ್ರಸಾದ್ ಉಪಸ್ಥಿತರಿದ್ದರು.ಕೊಳಗೇರಿವಾಸಿಗಳಿಗೆ ಸೇವೆ ನೀಡಿ:ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅಜೀಂ ಪ್ರೇಮ್ಜಿ, ನಗರ ಪ್ರದೇಶ, ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಕೂಡ ತಮ್ಮ ಸಮಯದ ಒಂದು ಭಾಗವನ್ನಾದರೂ ಕೊಳಗೇರಿ ನಿವಾಸಿಗಳು, ಗ್ರಾಮೀಣ ಭಾಗದ ಜನರ ಸೇವೆಗೆ ಮೀಸಲಿಡಬೇಕು ಎಂದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ದೇಶದ ಅಭಿವೃದ್ಧಿ ಹಾಗೂ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪ್ರಾಮುಖ ಪಾತ್ರವಹಿಸುತ್ತವೆ. ಇಲ್ಲಿ ಕಾರ್ಯನಿರ್ವಹಿಸುವವರು ಪ್ರಮಾಣಿಕತೆ, ಸಮಗ್ರತೆ ಮತ್ತು ನೈತಿಕತೆಯನ್ನು ಕಾಪಾಡಿಕೊಳ್ಳಬೇಕಿದೆ. ಹೀಗಾಗಿ ವೈದ್ಯರು ದುರ್ಬಲ ವರ್ಗದ ಜನರು ವಾಸಿಸುವ ಕೊಳಗೇರಿಗಳು ಹಾಗೂ ಆರೋಗ್ಯ ಸೇವೆ ಸಮರ್ಪಕವಾಗಿಲ್ಲದ ಗ್ರಾಮೀಣ ಭಾಗಗಳಲ್ಲಿ ಸೇವೆಗಾಗಿ ಮಹಾನಗರ ಅಥವಾ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರೂ ಕೂಡ ತಮ್ಮ ಸಮಯದ ಒಂದು ಭಾಗವನ್ನಾದರೂ ಮೀಸಲಿಡಬೇಕು. ವೈದ್ಯಕೀಯ ವೃತ್ತಿಯನ್ನು ಕೇವಲ ವ್ಯಾವಹಾರದ ದೃಷ್ಟಿಯಿಂದಷ್ಟೇ ನೋಡದೆ, ಸೇವಾ ಮನೋಭಾವದಿಂದಲೂ ನೋಡಿದರೆ ಒಳ್ಳೆಯ ವೈದ್ಯರಾಗಬಹುದು ಎಂದು ಹೇಳಿದರು.