ಮತದಾರರನನ್ನು ಸೆಳೆಯುತ್ತಿರುವ 63 ವಿಶೇಷ ಬೂತ್‌ಗಳು

| Published : May 07 2024, 01:01 AM IST

ಮತದಾರರನನ್ನು ಸೆಳೆಯುತ್ತಿರುವ 63 ವಿಶೇಷ ಬೂತ್‌ಗಳು
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಉತ್ತರದ ಎಂಸಿಸಿ ಬಿ ಬ್ಲಾಕ್‌ನ ಮತಗಟ್ಟೆ 208ರಲ್ಲಿ ಸಖಿ ಮತಗಟ್ಟೆ ಸ್ಥಾಪಿಸಿದ್ದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಪಂ ಸಿಇಓ ಸುರೇಶ ಇಟ್ನಾಳ್, ಎಸ್‌ಪಿ ಉಮಾ ಪ್ರಶಾಂತ್ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

18 ನೇ ಲೋಕಸಭಾ ಚುನಾವಣೆ ನಡೆಯುತ್ತಿದ್ದು ಪ್ರಜಾಪ್ರಭುತ್ವದ ಮತದಾನ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲು ಜಿಲ್ಲೆಯಾದ್ಯಂತ 63 ವಿಶೇಷ ಮತಗಟ್ಟೆ ಸ್ಥಾಪಿಸಿ ಮತದಾರರನ್ನು ಆಕರ್ಷಿಸಲಾಗುತ್ತಿದೆ.

ವಿಶೇಷ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿ ಇಂದ ನಿರ್ವಹಿಸಲ್ಪಡುವ 35 ಸಖಿ ಮತಗಟ್ಟೆಗಳು, ಧ್ಯೇಯ ಆಧಾರಿತ ಮತಗಟ್ಟೆಗಳಲ್ಲಿ ಅಡಿಕೆ, ಕೃಷಿ, ವೀಳ್ಯೆದೆಲೆ, ಸಂಚಾರ ನಿಯಂತ್ರಣ, ಜಲಸಂರಕ್ಷಣೆ, ಸ್ಕೌಟ್ಸ್‌ ಅಂಡ್ ಗೈಡ್ಸ್, ಅರಣ್ಯ, ಅಂಗನವಾಡಿ, ಸಾಂಪ್ರದಾಯಿಕ ಮತಗಟ್ಟೆಗಳಲ್ಲಿ ಪರಿಸರ ಸ್ನೇಹಿ, ಲಂಬಾಣಿ ಸಂಸ್ಕೃತಿ, ಯಾದವ ಸಂಪ್ರದಾಯ, ಅಕ್ಕಿಪಿಕ್ಕಿ ಸಂಪ್ರದಾಯ ಸೇರಿ ಜನಜೀವನದ ಬಗ್ಗೆ ಗಮನ ಸೆಳೆಯುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಯುವಕರಿಂದ ನಿರ್ವಹಿಸಲ್ಪಡುವ ಯುವ ಮತಗಟ್ಟೆಗಳು, ವಿಶೇಷಚೇತನರಿಂದ ನಿರ್ವಹಿಸಲ್ಪಡುವ ಮತಗಟ್ಟೆ ಸ್ಥಾಪಿಸಲಾಗಿದೆ.

ಸಾಂಪ್ರದಾಯಿಕ ಮತಗಟ್ಟೆ:

ದಾವಣಗೆರೆ ದಕ್ಷಿಣ ಕ್ಷೇತ್ರದ ಮತಗಟ್ಟೆ 169 ಜಾಲಿನಗರದ ಜನತಾ ವಿದ್ಯಾಲಯದಲ್ಲಿ ಪರಿಸರ ಸ್ನೇಹಿಗೆ ಒತ್ತು ನೀಡಲಾಗಿದೆ. ಇಲ್ಲಿ ಮಣ್ಣಿನಿಂದ ಮಾಡಿದ ಮನೆ, ಛಾವಣಿ ಮೇಲೆ ತೆಂಗಿನ ಗರಿ, ಮಣ್ಣಿನಿಂದ ಮಡಿಕೆಗಳ ಪ್ರದರ್ಶನ, ಬಾವಿ ಸಂರಕ್ಷಣೆ, ಪಕ್ಷಿಗಳಿಗೆ ನೀರುಣಿಸುವುದು, ಬಿದಿರಿನಿಂದ ತಯಾರಿಸಿದ ಬೀಸಣಿಕೆ, ಬುಟ್ಟಿ ಉಪಯೋಗ, ಪ್ಲಾಸ್ಟಿಕ್ ಬ್ಯಾಗ್ ಬದಲಾಗಿ ಬಟ್ಟೆ ಬ್ಯಾಗ್‌ಗಳ ಉಪಯೋಗ ಮಾಡುವ ಮೂಲಕ ಪರಿಸರ ಸಂರಕ್ಷಣೆ ವಿಷಯಾಧಾರಿತ ಮತಗಟ್ಟೆಯಾಗಿದೆ. ಇದನ್ನು ಚಿತ್ರಕಲಾ ಪರಿಷತ್ ಕಲಾವಿದರು ನಿರ್ಮಾಣ ಮಾಡಿರುವರು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಸಖಿ ಮತಗಟ್ಟೆಗೆ ಭೇಟಿ:

ದಾವಣಗೆರೆ ಉತ್ತರದ ಎಂಸಿಸಿ ಬಿ ಬ್ಲಾಕ್‌ನಲ್ಲಿನ ಮತಗಟ್ಟೆ 208ರಲ್ಲಿ ಸಖಿ ಮತಗಟ್ಟೆ ಸ್ಥಾಪಿಸಿದ್ದು ಇಲ್ಲಿ ಪಿಆರ್‌ಓ, ಎಪಿಆರ್‌ಓ, ಮತಗಟ್ಟೆ ಸಿಬ್ಬಂದಿ ಮಹಿಳೆಯರೇ ಆಗಿರುತ್ತಾರೆ. ಇಲ್ಲಿ 656 ಪುರುಷ, 671 ಮಹಿಳಾ ಮತದಾರರು ಸೇರಿ 1327 ಮತದಾರರಿದ್ದಾರೆ.

ದಾವಣಗೆರೆ ಉತ್ತರದ ಬೇತೂರು ಗ್ರಾಪಂನ 23ರ ಸಖಿ ಮತಗಟ್ಟೆಯಲ್ಲಿ 564 ಪುರುಷ, 593 ಮಹಿಳಾ ಮತದಾರರು ಸೇರಿ 1157 ಮತದಾರರಿದ್ದಾರೆ. ಇಲ್ಲಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಭೇಟಿ ನೀಡಿ ವೀಕ್ಷಣೆ ಮಾಡಿ ಸಿದ್ಧತೆ ಪರಿಶೀಲನೆ ನಡೆಸಿದರು.

ವಿಶೇಷ ಮತಗಟ್ಟೆಗಳ ವಿವರ:

ಜಗಳೂರು ತಾಲೂಕಿನ ಮುಸ್ಟೂರು 238ನೇ ಮತಗಟ್ಟೆಯಲ್ಲಿ ಧ್ಯೇಯ ಮಾದರಿ ಜಲಾನಯನ ಪ್ರಾತ್ಯಕ್ಷಿತೆ, ಮಳೆ ನೀರು ಸಂರಕ್ಷಣೆ ಮಾಡುವ ಬಗ್ಗೆ ವಿವರಿಸಲಾಗಿದೆ.

ದಾವಣಗೆರೆ ದಕ್ಷಿಣದ ಮತಗಟ್ಟೆ 139ರಲ್ಲಿ ಜಯದೇವ ಹಾಸ್ಟೆಲ್ ಆನಗೋಡು ಮಠ ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷಿ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ. ಇಲ್ಲಿ ಮೆಕ್ಕೆಜೋಳದ ಸ್ವಾಗತ ಕಮಾನು ನಿರ್ಮಾಣ, ಕೃಷಿ ಮಾಹಿತಿಯುಳ್ಳ ಫಲಕಗಳ ಅನಾವರಣ ಮಾಡಲಾಗಿದೆ.

ಹೊನ್ನಾಳಿ ತಾಲೂಕಿನ ಆಂಜನೇಯಪುರದಲ್ಲಿ ಲಂಬಾಣಿ ಸಾಂಪ್ರದಾಯಿಕ ಮತಗಟ್ಟೆ, ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿಯಲ್ಲಿ ಹಕ್ಕಿಪಿಕ್ಕಿ ಜನಾಂಗದ ಮತಗಟ್ಟೆ, ದಾವಣಗೆರೆ ನಗರದ ನೀರಾವರಿ ಇಲಾಖೆ ಮತಗಟ್ಟೆ 201ರಲ್ಲಿ ಸಂಚಾರಿ ನಿಯಮಗಳ ಜಾಗೃತಿಯುಳ್ಳ ಮತಗಟ್ಟೆ, ಹರಿಹರ ವೀಳ್ಯೆದೆಲೆ, ಚನ್ನಗಿರಿ ಪಟ್ಟಣ ಅಡಿಕೆ ಬೆಳೆ ಕುರಿತಂತೆ ಮತಗಟ್ಟೆ ವಿಶೇಷವಾಗಿ ಸಿದ್ಧಪಡಿಸಲಾಗಿದೆ.