‘ಶೌಚಾಲಯ’ ಅಭಿಯಾನ ನಡೆಸಿದ್ದ ಎಸ್‌ಐ ಶಾಂತಪ್ಪಗೆ 644ನೇ ರ್‍ಯಾಂಕ್‌

| Published : Apr 17 2024, 02:08 AM IST

ಸಾರಾಂಶ

ಬೆಂಗಳೂರಿನ ಶ್ರೀರಾಮಪುರ ಪೊಲೀಸ್‌ ಠಾಣೆಯ ಪಿಎಸ್‌ಐ ಶಾಂತಪ್ಪ ಕುರುಬರ ತಮ್ಮ 4ನೇ ಪ್ರಯತ್ನದಲ್ಲಿ 644ನೇ ರ್‍ಯಾಂಕ್‌ ಪಡೆದಿದ್ದಾರೆ. ವಿಶೇಷವೆಂದರೆ ಶಾಂತಪ್ಪ ಅವರು ಕನ್ನಡ ಮಾಧ್ಯಮದಲ್ಲೇ ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ್ದು, ಯಾವುದೇ ಕೋಚಿಂಗ್‌ ಸೆಂಟರ್‌ ತರಬೇತಿ ಇಲ್ಲದೆ ತಮ್ಮ ಸ್ವಂತ ಪರಿಶ್ರಮದಲ್ಲೇ ಈ ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರಿನ ಶ್ರೀರಾಮಪುರ ಪೊಲೀಸ್‌ ಠಾಣೆಯ ಪಿಎಸ್‌ಐ ಶಾಂತಪ್ಪ ಕುರುಬರ ತಮ್ಮ 4ನೇ ಪ್ರಯತ್ನದಲ್ಲಿ 644ನೇ ರ್‍ಯಾಂಕ್‌ ಪಡೆದಿದ್ದಾರೆ. ವಿಶೇಷವೆಂದರೆ ಶಾಂತಪ್ಪ ಅವರು ಕನ್ನಡ ಮಾಧ್ಯಮದಲ್ಲೇ ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ್ದು, ಯಾವುದೇ ಕೋಚಿಂಗ್‌ ಸೆಂಟರ್‌ ತರಬೇತಿ ಇಲ್ಲದೆ ತಮ್ಮ ಸ್ವಂತ ಪರಿಶ್ರಮದಲ್ಲೇ ಈ ಸಾಧನೆ ಮಾಡಿದ್ದಾರೆ.

ಮಾಧ್ಯಮಗಳಿಗೆ ತಮ್ಮ ಅನುಭವ ಹಂಚಿಕೊಂಡಿರುವ ಶಾಂತಪ್ಪ ಅವರು, ತಮ್ಮದು ಮೂಲತಃ ಬಳ್ಳಾರಿ ಜಿಲ್ಲೆಯ ಗೆಣಿಕೆಹಾಳ್‌ ಗ್ರಾಮ. ಶಾಲಾ ದಿನದಿಂದಲೂ ಕನ್ನಡ ಮಾಧ್ಯಮದಲ್ಲೇ ಓದಿ ಯುಪಿಎಸ್ಸಿ ಪರೀಕ್ಷೆಯನ್ನೂ ಕನ್ನಡದಲ್ಲೇ ಬರೆದಿದ್ದೇನೆ. ಸಂದರ್ಶನವನ್ನೂ ಕೂಡ ಕನ್ನಡದಲ್ಲೇ ಎದುರಿಸಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯೋದು ತುಂಬ ಕಷ್ಟ. ಯುಪಿಎಸ್ಸಿಗೆ ಕನ್ನಡದಲ್ಲಿ ಸಮರ್ಪಕ ಪಠ್ಯ ಸಿಗುವುದಿಲ್ಲ. ಆದರೂ ಈ ಸಾಹಸವನ್ನು ಮಾಡಿದೆ. ನಾನು ಪಿಯುಸಿ ಫೇಲ್ ಆಗಿದ್ದ ಅಭ್ಯರ್ಥಿ. ನಂತರ ಪಾಸು ಮಾಡಿಕೊಂಡೆ. ಸೋಲೇ ನನಗೆ ಗೆಲುವಿನ ಮೆಟ್ಟಿಲು ಆಯಿತು ಎಂದಿದ್ದಾರೆ. ಯುಪಿಎಸ್ಸಿಗೆ ಓದಲು ಇಲಾಖೆಯಲ್ಲಿ ಸಾಕಷ್ಟು ಮಂದಿ ಪ್ರೋತ್ಸಾಹ ನೀಡಿದರು. ಸದ್ಯ ಪಡೆದಿರುವ ರ್‍ಯಾಂಕ್‌ನಿಂದ ಇಂಡಿಯನ್‌ ರೆವೆನ್ಯೂ ಸರ್ವಿಸ್‌ ಅಥವಾ ಐಪಿಎಸ್‌ ಹುದ್ದೆ ಸಿಗಬಹುದು. ನನಗೆ ಇನ್ನೂ ಒಂದು ಅವಕಾಶವಿದ್ದು, ರ್‍ಯಾಂಕ್‌ ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.ಮಕ್ಕಳಿಗೆ ಉಚಿತ ಟ್ಯೂಷನ್‌:

ಪೊಲೀಸ್‌ ವೃತ್ತಿಯಲ್ಲಿದ್ದುಕೊಂಡೇ ಶಾಂತಪ್ಪ ಅವರು ಸಾಮಾಜಿಕ ಕಳಕಳಿ ಮೆರೆದವರು. ತುಮಕೂರು ರಸ್ತೆಯ ಗೊರಗುಂಟೆ ಪಾಳ್ಯ ಜಂಕ್ಷನ್‌ನಲ್ಲಿ ಸಾರ್ವಜನಿಕ ಶೌಚಗೃಹ ಅಭಿಯಾನ ನಡೆಸಿ ತಾನೇ ಒಂದು ಶೌಚಾಲಯ ನಿರ್ಮಿಸಿದ ಕೀರ್ತಿ ಅವರದ್ದು. ಜೊತೆಗೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿದ್ದಾಗ ಸರ್ಕಾರಿ ಶಾಲೆಯ 10ನೇ ತರಗತಿ ಮಕ್ಕಳಿಗೆ ಉಚಿತ ಟ್ಯೂಷನ್‌ ಮಾಡುವ ಮೂಲಕ ಗಮನ ಸೆಳೆದಿದ್ದರು.