ಸಾರಾಂಶ
ಕನ್ನಡಪ್ರಭ ವಾರ್ತೆ ಐಗಳಿ
ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ 2006ರಲ್ಲಿ ಅಥಣಿ ತಾಲೂಕಿನ ಐಗಳಿ, ಮದಭಾವಿ, ಬಳ್ಳಿಗೇರಿ 3 ಸಂಯುಕ್ತ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, ರಾಜ್ಯಕ್ಕೆ ಮಾದರಿ ಹಾಗೂ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ಸಮೀಪದ ಐಗಳಿ ಕ್ರಾಸ್ ಜಲ ಶುದ್ಧೀಕರಣ ಘಟಕದಲ್ಲಿ ₹24.98 ಕೋಟಿ ವೆಚ್ಚದ ಸಂಯುಕ್ತ ಕುಡಿಯುವ ನೀರಿನ ಪುನಶ್ಚೇತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 160 ಸಂಯುಕ್ತ ಕುಡಿಯುವ ನೀರಿನ ಯೋಜನೆಗಳಿದ್ದು, 2400 ಹಳ್ಳಿಗಳು ಒಳಪಟ್ಟಿವೆ. ಈಗ ಈ ಮೂರು ಯೋಜನೆಗಳಿಗೆ ₹68 ಕೋಟಿ ಪುನಶ್ಚೇತನಕ್ಕೆ ಮಂಜೂರಾಗಿದೆ. ಅದರಲ್ಲಿ 220 ಮೆ.ವ್ಯಾ ನೀರೆತ್ತುವ ಮೋಟರ್ಪಂಪ್, ಅಲ್ಲಲ್ಲಿ 30 ಕಿ.ಮೀ ಪೈಪಲೈನ್ ಸೇರಿದಂತೆ ಸರಾಗವಾಗಿ ನೀರು ಸರಬರಾಜಿಗೆ ಅನುಕೂಲವಾಗುವಂತೆ ಎಲ್ಲ ಸೌಕರ್ಯಗಳನ್ನು ನೂತನ ತಂತ್ರಜ್ಞಾನದೊಂದಿಗೆ ಮಾಡಲಾಗುವುದು. ಬರಗಾಲದ ಬವಣೆ ನೀಗಿಸಿ ರೈತರ ನೆಮ್ಮದಿ ಬದುಕಿಗೆ ಶ್ರಮಿಸಿ ಯಶಸ್ವಿಯಾದ ತೃಪ್ತಿ ನನಗಿದೆ. 8 ರಿಂದ 10 ತಿಂಗಳಲ್ಲಿ ಗುಣಮಟ್ಟದ ಕಾಮಗಾರಿ ಮಾಡಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಸಿದರು.2006 ಅಗಷ್ಟನಲ್ಲಿ ತಾಲೂಕಿನಲ್ಲಿ ಒಂದೆಡೆ ಕೃಷ್ಣಾ ನದಿ ಪ್ರವಾಹ ಬಂದು ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಕೆಲಸ ಭರದಿಂದ ಸಾಗಿದರೆ ಇದೇ, ತಾಲೂಕಿನ ತೆಲಸಂಗ ಹಾಗೂ ಅನಂತಪುರ ಹೋಬಳಿಗಳಲ್ಲಿ 2 ಕಿ.ಮೀ ದೂರ ಹೋಗಿ ಕುಡಿಯಲು ನೀರು ತರುವ ಭೀಕರ ಪರಿಸ್ಥಿತಿ ಎದುರಾಗಿತ್ತು. ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ನಾನು ಶಾಸಕನಾಗಿ ಆಯ್ಕೆಯಾದೆ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ ಅವರಿಗೆ ಪರಿಸ್ಥಿತಿ ವಿವರಿಸಿ ಮನದಟ್ಟು ಮಾಡಿದ ಮೇಲೆ ₹15 ಕೋಟಿ ವೆಚ್ಚದ 3 ಸಂಯುಕ್ತ ಕುಡಿಯುವ ನೀರು ಯೋಜನೆಗಳು ಅನುಷ್ಠಾನಕ್ಕೆ ಬಂದ ಫಲವಾಗಿ ಕುಡಿಯುವ ನೀರಿನ ಸಮಸ್ಯೆ ತಿಳಿಯಾಯಿತು ಎಂದರು.
ಅಥಣಿ ಗ್ರಾಮಿಣ ಮತ್ತು ನೈರ್ಮಲ್ಯ ಇಲಾಖೆ ಸ.ಕಾ.ನಿ.ಅಭಿಯಂತರ ರವೀಂದ್ರ ಮುರಗಾಲಿ ಮಾತನಾಡಿ, ಕಕಮರಿ, ಐಗಳಿ, ಅಡಹಳ್ಳಿ, ಕೊಟ್ಟಲಗಿ, ತೆಲಸಂಗ, ಕೊಹಳ್ಳಿ, ಕನ್ನಾಳ, ಬನ್ನೂರ, ಬಾವನದಡ್ಡಿ, ಬಾಡಗಿ ಗ್ರಾಮಗಳಿಗೆ ಈ ಯೋಜನೆಯಿಂದ ಹೊಸ ತಂತ್ರಜ್ಞಾನ ಮೂಲಕ ಪ್ರತಿದಿನ ವ್ಯಕ್ತಿಗೆ 55 ಲೀ. ನೀರು ಪೂರೈಸಲು ಸಹಕಾರಿಯಾಗಲಿದೆ ಎಂದರು.ಈ ವೇಳೆ ಸಿ.ಎಸ್.ನೇಮಗೌಡ, ಸಿದ್ದರಾಯ ಯಲಡಗಿ, ಶ್ಯಾಮ ಪೂಜಾರಿ, ಸುಶೀಲಕುಮಾರ ಪತ್ತಾರ, ಪ್ರಲ್ಹಾದ ಪಾಟೀಲ, ಗುರು ದಾಶ್ಯಾಳ, ನೂರಅಹ್ಮದ ಡೊಂಗರಗಾಂವ, ಬೆಂಗಳೂರ ಮಾಲೂ ಕನ್ಸಟ್ರಕ್ಷನ್ನ ನವೀನ್, ಗ್ರಾಪಂ ಅಧ್ಯಕ್ಷೆ ಶಕುಂತಲಾ ಪಾಟೀಲ, ಬಸವಂತ ಗುಡ್ಡಾಪುರ, ನಾನಾಗೌಡ ಪಾಟೀಲ, ವೆಂಕಣ್ಣಾ ಅಸ್ಕಿ, ಎ.ಎಸ್.ಪಾಟೀಲ, ಬಸಗೌಡ ಬಿರಾದಾರ ಸೇರಿ ಅನೇಕರಿದ್ದರು. ಕೆ.ಎಸ್.ಬಿರಾದಾರ ನಿರೂಪಿಸಿ, ರವಿ ಮೂರಗಾಲಿ ಸ್ವಾಗತಿಸಿ, ವಂದಿಸಿದರು.