ಸಾರಾಂಶ
ಬೆಂಗಳೂರು : ಕರ್ನಾಟಕದಲ್ಲಿ ಈ ವರ್ಷ ಮಾರ್ಚ್ನಿಂದ ಪೂರ್ವ ಮುಂಗಾರು ಮಳೆ ಆರಂಭಗೊಂಡಿದೆ. ರಾಜ್ಯದಲ್ಲಿ ವಾಡಿಕೆ ಪ್ರಕಾರ ಸರಾಸರಿ 8.8 ರಷ್ಟು ಮಳೆಯಾಗಬೇಕು. ಆದರೆ, ಈ ಬಾರಿ 14.8 ಸೆಂ.ಮೀ. ನಷ್ಟು ಮಳೆಯಾಗುವ ಮೂಲಕ ವಾಡಿಕೆ ಪ್ರಮಾಣಕ್ಕಿಂತ ಶೇ.69 ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕರಾವಳಿಯಲ್ಲಿ ಶೇ.49ರಷ್ಟು ಮಳೆ ಹೆಚ್ಚಾಗಿದ್ದರೆ, ಉತ್ತರ ಒಳನಾಡಿನಲ್ಲಿ ಕೇವಲ ಶೇ.5 ರಷ್ಟು ಮಳೆ ಸುರಿದಿದೆ. ದಕ್ಷಿಣ ಒಳನಾಡಿನಲ್ಲಿ ಶೇ.107ರಷ್ಟು ಮಳೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 12 ಜಿಲ್ಲೆಗಳಲ್ಲಿ ಇನ್ನೂ
ಒಂದು ವಾರ ಮಳೆ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇನ್ನೂ ಒಂದು ವಾರ ಮುಂಗಾರು ಪೂರ್ವ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆಯಾಗುತ್ತಿದ್ದು, ಕೆಲ ಕಡೆ ಉತ್ತಮ ಮಳೆಯಾಗಿದೆ. ಇನ್ನೂ ಒಂದು ವಾರ ಕರಾವಳಿಯ ಮೂರು ಜಿಲ್ಲೆ, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಯಲ್ಲಿ ಏ.3ವರೆಗೆ ಹಗುರ ಮಳೆಯಾಗಲಿದೆ.
ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಹವಾಮಾನ ವರದಿ ಪ್ರಕಾರ, ಕೊಡಗಿನ ನಾಪೋಕ್ಲುದಲ್ಲಿ ಅತಿ ಹೆಚ್ಚು 5 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಬೈಲಹೊಂಗಲ 4, ಶಿವಮೊಗ್ಗದ ಹಂಚದಕಟ್ಟೆ, ಸೋಮವಾರ ಪೇಟೆ, ಭಾಗಮಂಡಲ, ಹಾರಂಗಿಯಲ್ಲಿ ತಲಾ 3, ಶೃಂಗೇರಿ, ಬಾಳೆಹೊನ್ನೂರು, ಖಾನಾಪುರ, ಸಂಕೇಶ್ವರದಲ್ಲಿ ತಲಾ 2, ಬೆಳಗಾವಿ, ಗದಗ, ಕೊಣನೂರು ಹಾಗೂ ಹಗರಿಬೊಮ್ಮನಹಳ್ಳಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.