ಸಾರಾಂಶ
ತುಮಕೂರು : ರಾಜ್ಯದ ಕೊಬ್ಬರಿ ಬೆಳೆಗಾರರಿಗೆ ಕೇಂದ್ರ ಸರ್ಕಾರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸಿಹಿ ಸುದ್ದಿ ನೀಡಿದ್ದಾರೆ. ಸಚಿವ ವಿ.ಸೋಮಣ್ಣ ಅವರ ಮಧ್ಯಸ್ಥಿಕೆಯಿಂದ 7500 ಮೆಟ್ರಿಕ್ ಟನ್ ಹೆಚ್ಚುವರಿ ಕೊಬ್ಬರಿ ಖರೀದಿಗೆ ಕೇಂದ್ರ ಸರ್ಕಾರದ ಒಪ್ಪಿಗೆ ದೊರಕಿದೆ. 2024ನೇ ಸಾಲಿನಲ್ಲಿ ಮಿಲ್ಲಿಂಗ್ ಕೋಪ್ರ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ 2999 ಮೆಟ್ರಿಕ್ ಟನ್ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು.
ರಾಜ್ಯ ಸರ್ಕಾರ ಈ ಸೌಲಭ್ಯವನ್ನು ದಕ್ಷಿಣ ಕನ್ನಡ, ಹಾಸನ, ಉಡುಪಿ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಅತಿ ಹೆಚ್ಚು ಕೊಬ್ಬರಿ ಬೆಳೆಯುವ ಜಿಲ್ಲೆಯಾದ ತುಮಕೂರು, ರಾಮನಗರ, ಮಂಡ್ಯ ಜಿಲ್ಲೆಗಳೊಂದಿಗೆ ಇತರೆ ಜಿಲ್ಲೆಗಳು ಈ ಸೌಲಭ್ಯದಿಂದ ವಂಚಿತವಾಗಿದ್ದವು. ಇದನ್ನು ಮನಗಂಡು ಸಚಿವ ಸೋಮಣ್ಣ ರಾಜ್ಯ ಸರ್ಕಾರಕ್ಕೆ ಈ ವಿಷಯವನ್ನು ಮನವರಿಕೆ ಮಾಡಿ ಹೊಸ ಪ್ರಸ್ತಾವನೆಯನ್ನು ಸಲ್ಲಿಸಲು ತಿಳಿಸಿದರು.
ಅದರಂತೆ ರಾಜ್ಯ ಸರ್ಕಾರ ತಮಕೂರು, ರಾಮನಗರ, ಚಿತ್ರದುರ್ಗ, ಚಿಕ್ಕಮಗಳೂರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಈ ಸೌಲಭ್ಯ ವಿಸ್ತರಿಸುವ ಸಲುವಾಗಿ 2024ನೇ ಸಾಲಿನ ಖರೀದಿ ಮಿತಿಯನ್ನು 2999 ಮೆಟ್ರಿಕ್ ಟನ್ನಿಂದ 10000 ಮೆಟ್ರಕ್ ಟನ್ಗಳಿಗೆ ಏರಿಸುವಂತೆ ಕೋರಿದ ಪ್ರಸ್ತಾವನೆ ಸಲ್ಲಿಸಿತು.
ಸಚಿವ ವಿ.ಸೋಮಣ್ಣ ಅವರು ಸದರಿ ಪ್ರಸ್ತಾವನೆಗೆ ಕೂಡಲೇ ಒಪ್ಪಿಗೆ ನೀಡುವಂತೆ ಕೇಂದ್ರ ಸರ್ಕಾರದ ಕೃಷಿ ಸಚಿವರೊಂದಿಗೆ ಮಾಡಿದ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ 2024 ನೇ ಸಾಲಿಗೆ ಮಿಲ್ಲಿಂಗ್ ಕೋಪ್ರ ಖರೀದಿ ಮಿತಿಯನ್ನು 10000 ಮೆಟ್ರಿಕ್ ಟನ್ಗಳಿಗೆ ಏರಿಸಿ ಆದೇಶ ಹೊರಡಿಸಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ರಾಜ್ಯದ ರೈತರ ಹಿತಾಸಕ್ತಿಗೆ ಪೂರಕವಾದ ನಿರ್ಣಯವನ್ನು ತುರ್ತಾಗಿ ಕೈಗೊಂಡ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಗೂ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ರವರಿಗೆ ಸಚಿವ ವಿ.ಸೋಮಣ್ಣ ವಂದನೆ ತಿಳಿಸಿದ್ದಾರೆ.ಫೋಟೋ: ವಿ.ಸೋಮಣ್ಣ..