ಸಾರಾಂಶ
ಕರ್ನಾಟಕ ಸ್ವಿಮ್ಮಿಂಗ್ ಎಸೋಸಿಯೇಶನ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ಪ್ರಥಮ ಬಾರಿಗೆ 77ನೆ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್ಶಿಪ್ ಸೆ.10ರಿಂದ 13ರವರೆಗೆ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ನಡೆಯಲಿದೆ ಎಂದು ಸಂಘಟನಾ ಕಾರ್ಯದರ್ಶಿ ಸತೀಶ್ ಕುಮಾರ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಕರ್ನಾಟಕ ಸ್ವಿಮ್ಮಿಂಗ್ ಎಸೋಸಿಯೇಶನ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ಪ್ರಥಮ ಬಾರಿಗೆ 77ನೆ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್ಶಿಪ್ ಸೆ.10ರಿಂದ 13ರವರೆಗೆ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ನಡೆಯಲಿದೆ ಎಂದು ಸಂಘಟನಾ ಕಾರ್ಯದರ್ಶಿ ಸತೀಶ್ ಕುಮಾರ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಿಮ್ಮಿಂಗ್ ಎಸೋಸಿಯೇಶನ್ ಅಧ್ಯಕ್ಷ ಗೋಪಾಲ್ ಬಿ. ಹೊಸೂರ್ ಮೇಲುಸ್ತುವಾರಿಯಲ್ಲಿ ಚಾಂಪಿಯನ್ಶಿಪ್ ನಡೆಯಲಿದೆ. 4 ದಿನಗಳ ಈ ಚಾಂಪಿಯನ್ಶಿಪ್ನಲ್ಲಿ 31 ರಾಜ್ಯಗಳ ಖ್ಯಾತ ಈಜುಪಟುಗಳು ಭಾಗವಹಿಲಿದ್ದಾರೆ. ಭಾರತೀಯ ಸ್ವಿಮ್ಮಿಂಗ್ ಫೆಡರೇಶನ್ ಸಹಕಾರದಲ್ಲಿ ನಡೆಯಲಿರುವ ಈಜು ಸ್ಪರ್ಧೆಯಲ್ಲಿ ದೇಶದ ಈಜು ಸ್ಪರ್ಧಿಗಳು ಮಾತ್ರವಲ್ಲದೆ, ಕರ್ನಾಟಕದ ಒಲಿಂಪಿಯನ್ ಹಾಗೂ ಬ್ಯಾಕ್ಸ್ಟ್ರೋಕ್ ಈಜುಪಟು ಶ್ರೀಹರಿ ನಟರಾಜ್, ಬ್ಯಾಕ್ಸ್ಟ್ರೋಕ್ ಸ್ಟ್ರಿಂಟರ್ ಲಿಕಿತ್ ಎಸ್.ಪಿ. , ರಾಷ್ಟ್ರೀಯ ದಾಖಲೆ ಪಟು ಮತ್ತು ಫ್ರೀಸ್ಟೈಲ್ ಸ್ಪೆಷಲಿಸ್ಟ್ ಅನೀಶ್ ಗೌಡ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ದೇಶದ ಭರವಸೆಯ ಈಜುಪಟುಗಳಾದ ಎಸ್.ಸಿವ, ಪೃಥ್ವಿ, ಆನಂದ್ ಎ.ಎಸ್., ಮಿಹಿರ್ ಅಂಬ್ರೆ, ರಿಷಬ್ ದಾಸ್, ದೇವಾಂಶ್ ಪರ್ಮಾರ್, ಧನುಷ್ ಎಸ್., ಸೋನು ದೆಬ್ನಾತ್ ಮತ್ತು ಯುಗ್ ಚೆಲಾನಿ ಭಾಗವಹಿಸಲಿದ್ದಾರೆ. ಮಹಿಳಾ ಈಜು ಪಟುಗಳಾದ ಹರ್ಷಿತಾ ಜಯರಾಂ, ಮನವಿ ವರ್ಮಾ, ಪ್ರತಿಷ್ಠಾ ದಾಂಗಿ, ಆಸ್ತಾ ಚೌಧುರಿ, ವೃಟ್ಟಿ ಅಗರ್ವಾಲ್, ಅಂತಿಕಾ ಚವಾನ್, ಶಿವಾಂಗಿ ಶರ್ಮಾ ಮತ್ತು ಭವ್ಯಾ ಸಹದೇವ್ ಅವರು ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಭಾರತದ ಅತಿ ದೊಡ್ಡ ಈಜು ಚಾಂಪಿಯನ್ ಇದಾಗಿದ್ದು, 2021ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಚಾಂಪಿಯನ್ಶಿಪ್ನ ಆತಿಥ್ಯವನ್ನು ಕರ್ನಾಟಕ ವಹಿಸಿಕೊಂಡಿತ್ತು. ಮಂಗಳೂರಿನಲ್ಲಿ ಪ್ರಥಮ ಬಾರಿಗೆ ರಾಷ್ಟ್ರ ಮಟ್ಟದ ಈ ಚಾಂಪಿಯನ್ಶಿಪ್ ನಡೆಯುತ್ತಿದೆ ಎಂದರು.ಪ್ರಮುಖರಾದ ಕಮಲೇಶ್ ನಾನಾವತಿ, ರಾಜ್ ಕುಮಾರ್, ನವೀನ್, ಶಿವಾನಂದ ಗಟ್ಟಿ ಇದ್ದರು.