ಸಾರಾಂಶ
ಕಂಪ್ಲಿ ಕೋಟೆಯ ಬಳಿ ಕೆಂಪು ಕೋತಿ ಹಾಗೂ ಕರಿ ಕೋತಿಗಳ ಉಪಟಳ ಹೆಚ್ಚಾಗಿದ್ದು, ಹೆಣ್ಣು ಮಕ್ಕಳು ಹಾಗೂ ಚಿಕ್ಕ ಮಕ್ಕಳು ಭಯದಲ್ಲಿಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಂಪ್ಲಿ ಕೋಟೆ ಭಾಗದಲ್ಲಿ ಹೆಚ್ಚಿದ ಕೋತಿಗಳು, ಸೆರೆಹಿಡಿಯಲು ಆಗ್ರಹ
ಕನ್ನಡಪ್ರಭ ವಾರ್ತೆ ಕಂಪ್ಲಿಕಂಪ್ಲಿ ಕೋಟೆಯ ಬಳಿ ಕೆಂಪು ಕೋತಿ ಹಾಗೂ ಕರಿ ಕೋತಿಗಳ ಉಪಟಳ ಹೆಚ್ಚಾಗಿದ್ದು, ಹೆಣ್ಣು ಮಕ್ಕಳು ಹಾಗೂ ಚಿಕ್ಕ ಮಕ್ಕಳು ಭಯದಲ್ಲಿಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಮಾರು ಎರಡು ಮೂರು ತಿಂಗಳಿನಿಂದ ಕೋಟೆಯಲ್ಲಿ ಕೆಂಪು ಹಾಗೂ ಕರಿ ಕೋತಿಗಳು ಬೀಡು ಬಿಟ್ಟಿವೆ. ಇದರಲ್ಲಿ ಕೆಂಪು ಕೋತಿಗಳು ಮನೆಗಳಿಗೆ ನುಗ್ಗಿ ದಿನಸಿ, ಹಾಲು, ಹಣ್ಣು ತರಕಾರಿಗಳನ್ನು ಹೊತ್ತೊಯ್ಯುತ್ತವೆ. ಇದರಿಂದ ಮನೆಯ ಬಾಗಿಲು ಹಾಕಿಯೇ ಒಳಗಡೆ ಕೂರಬೇಕಾದ ಪರಿಸ್ಥಿತಿ ಇದೆ. ಇನ್ನು ಚಿಕ್ಕ ಮಕ್ಕಳು ಹಾಗೂ ಹೆಣ್ಣು ಮಕ್ಕಳು ರಸ್ತೆಯಲ್ಲಿ ಓಡಾಡುವಾಗ ಕೋತಿಗಳು ಕೈಯಲ್ಲಿರುವ ವಸ್ತುಗಳನ್ನು ಕಸಿದುಕೊಳ್ಳುವುದು, ಬಟ್ಟೆ ಎಳೆಯುವುದು ಮಾಡುತ್ತವೆ. ಕೆಲವು ಕೋತಿಗಳು ಕಚ್ಚಲು ಬರುತ್ತವೆ. ಮಾರಂಬಿ, ಪಾರ್ವತಮ್ಮ, ಮದಿಯ, ಅಹ್ಮದ್ ಸಾಬ್ ಸೇರಿದಂತೆ ಈ ವರೆಗೂ 8ರಿಂದ 10 ಜನಕ್ಕೆ ಕೆಂಪು ಕೋತಿಗಳು ಕಚ್ಚಿ ಗಾಯಗೊಳಿಸಿವೆ. ಗಾಯಳುಗಳು ಸಾವಿರಾರು ರುಪಾಯಿ ಖರ್ಚು ಮಾಡಿ ಚಿಕಿತ್ಸೆ ಪಡೆದಿದ್ದಾರೆ.ಹೀಗೆ ಮುಂದುವರಿದರೆ ಓಣಿಗಳಲ್ಲಿ ಓಡಾಡುವುದಾದರೂ ಹೇಗೆ ಎಂಬುದು ಜನರ ಪ್ರಶ್ನೆ. ಅರಣ್ಯ ಇಲಾಖೆ ಅಧಿಕಾರಿಗಳು ಕೋತಿಗಳನ್ನು ಸೆರೆ ಹಿಡಿದು ಕಾಡಿಗೆ ಬಿಡಬೇಕು ಎಂದು ಕಂಪ್ಲಿ ಕೋಟೆ ನಿವಾಸಿಗಳಾದ ಸುರೇಶ, ಪಿ. ಖಾಜಾಸಾಬ್, ಮಹಮ್ಮದ್ ರಫಿ, ಅಹ್ಮದ್, ರೇಣುಕಾ, ಭಾಗ್ಯಮ್ಮ ಒತ್ತಾಯಿಸಿದ್ದಾರೆ.
ಕೋತಿಗಳ ಉಪಟಳ ಕುರಿತು ಪುರಸಭಾಧ್ಯಕ್ಷರ ಗಮನಕ್ಕೆ ತಂದು, ಕೋತಿಗಳ ಸೆರೆ ಹಿಡಿಸಿ ದೂರ ಸಾಗಿಸುವ ಕ್ರಮ ವಹಿಸಲಾಗುವುದು. ಈ ಕುರಿತು ಅರಣ್ಯ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಪುರಸಭೆ ವ್ಯವಸ್ಥಾಪಕ ಬಿ. ಮಲ್ಲಿಕಾರ್ಜುನ ತಿಳಿಸಿದ್ದಾರೆ.