ಸಾರಾಂಶ
ಕುಕನೂರು:
ಕಲ್ಯಾಣ ಕರ್ನಾಟಕದ ಬಹುಪಾಲು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ತಾಲೂಕಿನ ದ್ಯಾಂಪೂರು ಗ್ರಾಮದಲ್ಲಿ ನೂತನ ಸರ್ಕಾರಿ ಪ್ರೌಢಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 46 ಸಾವಿರ ಶಾಲೆ, 57 ಲಕ್ಷ ಮಕ್ಕಳಿದ್ದು, ಶಿಕ್ಷಣ ಇಲಾಖೆಯಿಂದ ಸಕಲ ಸವಲತ್ತು ಕಲ್ಪಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಹಣ ಶಿಕ್ಷಣಕ್ಕೆ ಬಳಕೆ ಆಗುತ್ತಿದೆ ಎಂದರು.
ಶಾಸಕ ಬಸವರಾಜ ರಾಯರಡ್ಡಿ ಅವರು ನನ್ನ ಇಲಾಖೆಯಿಂದ ಬರುವ ಹಣಕ್ಕಿಂತ ತಮ್ಮ ಕ್ಷೇತ್ರದಲ್ಲಿ ಬಹುಪಾಲು ಕಲ್ಯಾಣ ಕರ್ನಾಟಕ ಹಣವನ್ನು ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ ಎಂದ ಅವರು, ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಹೊಂದಿದರೆ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದರು.ಈ ಹಿಂದೆ ಮಕ್ಕಳು ನಕಲು ಮಾಡಿ ತೇರ್ಗಡೆಯಾಗುತ್ತಿದ್ದರು. ಅದಕ್ಕೆ ನಾನು ಬ್ರೇಕ್ ಹಾಕಿದ್ದರಿಂದ ಸಾಕ್ಷರತಾ ಪ್ರಮಾಣ ಹೆಚ್ಚಾಗಿದೆ ಎಂದ ಅವರು, ಹಿಂದಿನ ಸರ್ಕಾರ ಶಿಕ್ಷಕರ ಕೊರತೆ ನೇಮಕ ಮಾಡಲಿಲ್ಲ. ನಾನು ಬಂದ ಬಳಿಕ 13000 ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಶೇ. 80ರಷ್ಟು ಶಿಕ್ಷಕರ ಕೊರತೆ ನೀಗಿದೆ ಎಂದು ಹೇಳಿದರು.
ಅಗತ್ಯವಿರುವ ಕೆಪಿಎಸ್ಸಿ ಶಾಲೆಗಳಿಗೆ ಶಾಲಾ ವಾಹನ ವ್ಯವಸ್ಥೆ ಮಾಡಲಾಗುವುದು. ಶೀಘ್ರದಲ್ಲಿ ಶಿಕ್ಷಕರ ಹಾಜರಾತಿ ಡಿಜಿಟಿಲಿಕರಣ ಮಾಡಿ ಫೇಸ್ ಹಾಜರಾತಿ ಕಡ್ಡಾಯಗೊಳಿಸಲಾಗುವುದು ಎಂದು ಸಚಿವರು ಹೇಳಿದರು.ಇದೇ ವೇಳೆ ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ರಾಜ್ಯಪಾಲರಿಂದ 16 ಚಿನ್ನದ ಪದಕ ಪಡೆದ ತಳಬಾಲಿನ ಭೀಮವ್ವ ಅವರನ್ನು ಸನ್ಮಾನಿಸಲಾಯಿತು. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಬಿಇಒ ಸೋಮಶೇಖರಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಮಂಜುಳಾ, ಚಂದ್ರಶೇಖರಯ್ಯ ಹಿರೇಮಠ, ಕೆರಿಸಬಪ್ಪನಿಡಗುಂದಿ, ಮಂಜುನಾಥ ಕಡೇಮನಿ, ಖಾಸಿಂಸಾಬ್ ತಳಕಲ್, ಬಸವರಾಜ ಮಾಸೂರು, ಅಂದಾನಗೌಡ, ಈರಪ್ಪ ಕುಡಗುಂಟಿ, ಕ್ಷರಭಯ್ಯ ಇದ್ದರು.