ಎರಡು ತಿಂಗಳಲ್ಲಿ 85 ಮಂದಿಗೆ ಹಾವಿನ ಕಡಿತ

| Published : Mar 17 2025, 12:32 AM IST

ಸಾರಾಂಶ

ಈಗ ಎಲ್ಲಡೆ ಬಿರುಬಿಸಿಲು, ಮನುಷ್ಯರು ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಿಯಾದರೂ, ದೇಹ ಹಾಗೂ ಮನಸ್ಸನ್ನು ತಂಪಾಗಿಸಿಕೊಳ್ಳುತ್ತಾರೆ. ಆದರೆ ಹುತ್ತಗಳು ಮತ್ತು ಬಿಲಗಳ ಒಳಗೆ ಇರುವ ಹಾವುಗಳು ಹುತ್ತ ಮತ್ತು ಬಿಲಗಳಿಂದ ಆಚೆ ಬರುತ್ತಿವೆ. ಜಿಲ್ಲೆಯಲ್ಲಿ ಹಾವುಗಳ ಹಾವಳಿ ಹೆಚ್ಚಾಗಿದ್ದು, ಅದರಲ್ಲೂ ಗ್ರಾಮಾಂತರ ಮತ್ತು ನೂತನ ಬಡಾವಣೆಗಳಲ್ಲಿ ಹೆಚ್ಚಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ಬೇಸಿಗೆಯ ಉಷ್ಣತೆ ಏರಿಕೆಯಿಂದಾಗಿ ಹಾವುಗಳ ಕಾಟ ಹೆಚ್ಚಾಗಿದೆ. ಕಳೆದ ಎರಡು ತಿಂಗಳಲ್ಲಿ 85 ಜನರಿಗೆ ಹಾವುಗಳು ಕಚ್ಚಿದ್ದು, ಕಳೆದ ಒಂದು ವರ್ಷದಲ್ಲಿ 4 ಜನರು ಹಾವಿನ ಕಡಿತಕ್ಕೆ ಬಲಿಯಾಗಿದ್ದಾರೆ. ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದು, ಹಾವು ಕಚ್ಚುವಿಕೆಯಿಂದ ತಕ್ಷಣ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದೆ.

ಈಗ ಎಲ್ಲಡೆ ಬಿರುಬಿಸಿಲು, ಮನುಷ್ಯರು ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಿಯಾದರೂ, ದೇಹ ಹಾಗೂ ಮನಸ್ಸನ್ನು ತಂಪಾಗಿಸಿಕೊಳ್ಳುತ್ತಾರೆ. ಆದರೆ ಹುತ್ತಗಳು ಮತ್ತು ಬಿಲಗಳ ಒಳಗೆ ಇರುವ ಹಾವುಗಳು ಹುತ್ತ ಮತ್ತು ಬಿಲಗಳಿಂದ ಆಚೆ ಬರುತ್ತಿವೆ. ಜಿಲ್ಲೆಯಲ್ಲಿ ಹಾವುಗಳ ಹಾವಳಿ ಹೆಚ್ಚಾಗಿದ್ದು, ಅದರಲ್ಲೂ ಗ್ರಾಮಾಂತರ ಮತ್ತು ನೂತನ ಬಡಾವಣೆಗಳಲ್ಲಿ ಹೆಚ್ಚಾಗಿದೆ.

ಉಷ್ಣಾಂಶ ಹೆಚ್ಚಳ ಕಾರಣ

ಜಿಲ್ಲೆಯಲ್ಲಿ ನಾಯಿಗಿಂತ ಹಾವುಗಳ ಕಾಟ ಹೆಚ್ಚಾಗಿದೆ. ಈಗ ಬಿರು ಬಿಸಿಲು ಹಿನ್ನೆಲೆ ಹುತ್ತ, ಬಿಲಗಳ ಒಳಗೆ ರಕ್ಷಣಾತ್ಮಕವಾಗಿ ಇರುತ್ತಿದ್ದ ಹಾವುಗಳು, ಈಗ ಬಿಸಿಲ ಬೇಗೆ ತಾಳಲಾರದೆ, ರಸ್ತೆ, ಮನೆ, ಶೌಚಾಲಯಗಳು, ಪಾರ್ಕ್​​ಗಳು, ಹೊಲ,ಗದ್ದೆ,ತೋಟಗಳು,ಬಾವಿಗಳು,ಕೆರೆ-ಕುಂಟೆಗಳು, ಕೃಷಿ ಹೊಂಡಗಳು, ನೀರಿನ ಸಂಪಿನಲ್ಲಿ ಕಾಣಿಸುತ್ತಿವೆ. ಜನರು ಒಡಾಡುವಾಗ ಸ್ವಲ್ಪ ಯಾಮಾರಿ ತುಳಿದರೆ, ಸಿಕ್ಕಸಿಕ್ಕವರೆಗೆ ಹಾವು ಕಚ್ಚುತ್ತಿವೆ. ಎರಡು ತಿಂಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ 85 ಜನರಿಗೆ ಹಾವು ಕಚ್ಚಿದ್ದು, ಈ 85 ಜನರಿಗೂ ನಾಗರ ಹಾವುಗಳೇ ಕಚ್ಚಿರುವುದು ವಿಪರ್ಯಾಸ.

ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ ಕಳೆದ ವರ್ಷ 813 ಜನರಿಗೆ ಹಾವು ಕಚ್ಚಿದ್ದು, ನಾಲ್ಕು ಜನ ಮೃತಪಟ್ಟಿದ್ದಾರೆ. ಈಗ ಬೇಸಿಗೆ ಹಿನ್ನೆಲೆ ಹಾವು ಕಡಿತಗಳು ಹೆಚ್ಚಾಗುವ ಸಂಭವ ಇರುವ ಕಾರಣ ಆರೋಗ್ಯ ಇಲಾಖೆ ಜಿಲ್ಲೆಯ ಪ್ರತಿಯೊಂದು ಪ್ರಾಥಮಿಕ ಆಸ್ಪತ್ರೆಗಳಲ್ಲಿ ತಲಾ 10 ಹಾವಿನ ವಿಷ ನಿರೋಧಕ ಚುಚ್ಚು ಮದ್ದುಗಳನ್ನು ಸಂಗ್ರಹಿಸಿದೆ.

ಮೃತರಿಗೆ ಪರಿಹಾರ ಮೊತ್ತ ಹೆಚ್ಚಿಸಿ

ಆನೆ, ಚಿರತೆ ಮತ್ತಿತರ ಕಾಡು ಪ್ರಾಣಿಗಳ ದಾಳಿಯಿಂದ ಮೃತ ಪಟ್ಟ ಕುಟುಂಬಗಳಿಗೆ 5 ಲಕ್ಷ ರೂ.ಪರಿಹಾರ ನೀಡಲಾಗುತ್ತಿದೆ. ಆದರೆ, ಹಾವು ಕಡಿತದಿಂದ ಮೃತಪಟ್ಟವರಿಗೆ ಕೇವಲ ಒಂದು ಲಕ್ಷ ರೂ. ನೀಡಲಾಗುತ್ತಿದೆ. ಒಬ್ಬ ರೈತನ ಸಾವಿನಿಂದ ಇಡೀ ಕುಟುಂಬ ಬೀದಿಗೆ ಬರುತ್ತದೆ. ಹೀಗಾಗಿ, ಪರಿಹಾರವನ್ನು 5 ಲಕ್ಷ ರೂ,ಗೆ ಏರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶೇ.70 ರಷ್ಟು ಹಾವುಗಳು ವಿಷಪೂರಿತವಲ್ಲ. ಹಾವು ಕಡಿತಕ್ಕೊಳಗಾದವರು ಆತಂಕ ಪಡಬೇಕಿಲ್ಲ. ಹಾವು ಕಡಿದರೆ ಮಂತ್ರ ಹಾಕಿ, ಗುಣಪಡಿಸಬಹುದು ಎಂಬುದು ಮೂಢನಂಬಿಕೆ. ವಿಷಪೂರಿತ ಹಾವು ಕಡಿದಾಗ ಚಿಕಿತ್ಸೆ ತಡವಾದಲ್ಲಿ ಔಷಧ ನೀಡಿದರೂ ಜೀವ ಉಳಿಸಲು ಸಾಧ್ಯವಿಲ್ಲ. ಇನ್ನು ಮಂತ್ರದಿಂದ ಜೀವ ಉಳಿಸಲು ಸಾಧ್ಯವೇ. ಮಂತ್ರ ತಂತ್ರವನ್ನು ನಂಬುವುದು, ಕಚ್ಚಿದ ಹಾವನ್ನು ಹುಡುಕುತ್ತ ಸಮಯ ವ್ಯರ್ಥ ಮಾಡುವುದು ಇವೆಲ್ಲ ಸಾವಿಗೆ ಕಾರಣವಾಗುತ್ತದೆ. ಹಾವು ಕಡಿದ 30 ನಿಮಿಷದಿಂದ 3 ಗಂಟೆಯೊಳಗೆ ಸಾವು ಸಂಭವಿಸಲಿದ್ದು, ಅಷ್ಟರೊಳಗೆ ಅಗತ್ಯ ಚಿಕಿತ್ಸೆ ಪಡೆದರೆ, ಪ್ರಾಣ ಹಾನಿ ಸಂಭವಿಸುವುದಿಲ್ಲ ಎನ್ನುತ್ತಾರೆ ವೈದ್ಯರು.