ಸಾರಾಂಶ
ಬಿತ್ತನೆ ಬೀಜ ಖರೀದಿಸುವಾಗ ಕಡ್ಡಾಯವಾಗಿ ರಶೀದಿ ಪಡೆಯುವ ಜತೆಗೆ ಬೀಜೋಪಚಾರ ಕೈಗೊಂಡು ಬಿತ್ತನೆ ಮಾಡಬೇಕು. ಇದರಿಂದ ಬೆಳೆಗಳಲ್ಲಿ ಕೀಟ ಮತ್ತು ರೋಗಭಾದೆ ತಡೆಯಬಹುದು. ಅಲ್ಲದೆ ಮಣ್ಣಿನ ಆರೋಗ್ಯ ಕಾಪಾಡಬಹುದು.
ಅಮರೇಶ್ವಸ್ವಾಮಿ ಕಂದಗಲ್ಲಮಠ
ಕುಕನೂರು:ಉತ್ತಮ ಮಳೆ ಸುರಿದಿದ್ದರಿಂದ ಕೃಷಿ ಚಟುವಟಿಕೆ ವೇಗ ಪಡೆದಿವೆ. ಯಲಬುರ್ಗಾ ತಾಲೂಕಿನಲ್ಲಿ ೫೭,೫೦೦ ಹೆಕ್ಟೇರ್ ಹಾಗೂ ಕುಕನೂರು ತಾಲೂಕಿನಲ್ಲಿ ೩೦,೧೦೬ ಹೆಕ್ಟೇರ್ ಬಿತ್ತನೆ ಕ್ಷೇತ್ರ ಹೊಂದಿದ್ದು ೮೭,೭೧೪ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಪೂರ್ವ ಮುಂಗಾರಿನಲ್ಲಿ ಯಲಬುರ್ಗಾ ಹೋಬಳಿ ೮೨೦೦ ಹೆಕ್ಟೇರ್, ಕುಕನೂರ ಹೋಬಳಿ ೧೦,೪೪೪ ಹೆಕ್ಟೇರ್ ಹೆಸರು ಬೆಳೆ ಬಿತ್ತನೆ ಗುರಿ ಹೊಂದಿದೆ.ಬಿತ್ತನೆ ಬೀಜ ವಿತರಣೆ:
ಯಲಬುರ್ಗಾ ಹಾಗೂ ಹಿರೇವಂಕಲಕುಂಟಾ ರೈತ ಸಂಪರ್ಕ ಕೇಂದ್ರಗಳ ಜತೆಗೆ ಬೇವೂರು, ಗುನ್ನಾಳ, ಕುಕನೂರು ಹಾಗೂ ಮಂಗಳೂರು ಆರ್ಎಸ್ಕೆ ಜತೆಗೆ ತಳಕಲ್, ಮಸಬಹಂಚನಾಳದಲ್ಲಿ ಹೆಚ್ಚುವರಿ ಬೀಜ ವಿತರಣಾ ಕೇಂದ್ರ ಸ್ಥಾಪಿಸಲಾಗಿದೆ. ಯಲಬುರ್ಗಾ ಕೃಷಿ ಇಲಾಖೆಯಿಂದ ೨೫೨ ಕ್ವಿಂಟಲ್ ಹೆಸರು, ೧೨೫ ಕ್ವಿಂಟಲ್ ತೊಗರಿ, ೩೫೦೦ ಕ್ವಿಂಟಲ್ ಮೆಕ್ಕೆಜೋಳ, ೩೦೦ ಕ್ವಿಂಟಲ್ ಸಜ್ಜೆ, ಜೋಳ ೫.೫೦ ಹಾಗೂ ಸೂರ್ಯಕಾಂತಿ ೧೫೨ ಕ್ವಿಂಟಲ್ಗಳ ಬೇಡಿಕೆ ಸಲ್ಲಿಸಲಾಗಿದೆ. ಇಲಾಖೆಯಿಂದ ಈಗಾಗಲೇ ವಿವಿಧ ಕಂಪನಿಗಳಿಗೆ ಪೂರೈಕೆ ಆದೇಶ ನೀಡಲಾಗಿದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜದ ದಾಸ್ತಾನು ಮಾಡಲಾಗುತ್ತಿದೆ. ವಿವಿಧ ಮಾರಾಟ ಮಳಿಗೆಗಳಲ್ಲಿ ಯೂರಿಯಾ, ಡಿಎಪಿ, ಪೋಟ್ಯಾಷ್ ಹಾಗೂ ಸಂಯುಕ್ತ ರಸಗೊಬ್ಬರಗಳ ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.ಎಷ್ಟು ಪ್ರಮಾಣದಲ್ಲಿ ಬೆಳೆ ಬಿತ್ತನೆ:
ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಮೆಕ್ಕೆಜೋಳ ೩೩೪೮೭ ಹೆಕ್ಟೇರ್, ಸಜ್ಜೆ ೧೯೮೦೩ ಹೆಕ್ಟೇರ್, ತೊಗರಿ ೩೯೧೪, ಹೆಸರು ೧೧೫೫೦, ಅಲಸಂದಿ ೫೭೦, ಶೇಂಗಾ ೪೨೩೭ ಹಾಗೂ ಇತರ ೧೪೧೫೩ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಹೆಸರು ೮೭ ಕ್ವಿಂಟಲ್, ತೊಗರಿ ೪೨ ಕ್ವಿಂಟಲ್, ಮೆಕ್ಕೆಜೋಳ ೩೭೮ ಕ್ವಿಂಟಲ್, ಸಜ್ಜೆ ೧೩೦ ಕ್ವಿಂಟಲ್, ಸೂರ್ಯಕಾಂತಿ ೪.೨೦ ಕ್ವಿಂಟಲ್ ಸೇರಿ ಒಟ್ಟು ೬೩೮ ಕ್ವಿಂಟಲ್ ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗುತ್ತದೆ.ರಸಗೊಬ್ಬರ:
ಡಿಎಪಿ ೯೫ ಟನ್, ಯೂರಿಯಾ ೬೯೬, ಕಾಂಪ್ಲೆಕ್ಸ್ ೯೪೨, ಎಂಒಪಿ ೮೯ ಟನ್ ರಸಗೊಬ್ಬರ ದಾಸ್ತಾನು ಮಾಡಲು ಸಂಬಂಧಿಸಿದ ಕಂಪನಿಗಳಿಗೆ ಕೃಷಿ ಇಲಾಖೆಯಿಂದ ಪೂರೈಕೆ ಆದೇಶ ನೀಡಲಾಗಿದೆ.ಬಿತ್ತನೆ ಬೀಜ ಖರೀದಿಸುವಾಗ ಕಡ್ಡಾಯವಾಗಿ ರಶೀದಿ ಪಡೆಯುವ ಜತೆಗೆ ಬೀಜೋಪಚಾರ ಕೈಗೊಂಡು ಬಿತ್ತನೆ ಮಾಡಬೇಕು. ಇದರಿಂದ ಬೆಳೆಗಳಲ್ಲಿ ಕೀಟ ಮತ್ತು ರೋಗಭಾದೆ ತಡೆಯಬಹುದು. ಅಲ್ಲದೆ ಮಣ್ಣಿನ ಆರೋಗ್ಯ ಕಾಪಾಡಬಹುದು.ಪ್ರಮೋದ ತುಂಬಳ ಸಹಾಯಕ ಕೃಷಿ ನಿರ್ದೇಶಕ, ಯಲಬುರ್ಗಾಉತ್ತಮ ಮಳೆಯಾಗಿದ್ದು, ಹೆಸರು ಬೆಳೆ ಸೇರಿದಂತೆ ಈರುಳ್ಳಿ, ಮೆಕ್ಕೆಜೋಳ, ಶೇಂಗಾ ಬೆಳೆಗಳ ಬಿತ್ತನೆಗೆ ಭೂಮಿ ಸಿದ್ಧಪಡಿಸಲಾಗುತ್ತಿದೆ. ಎರಡ್ಮೂರು ಬಾರಿ ಭೂಮಿ ಉಳುಮೆ ಮಾಡಿ ಬಿತ್ತನೆ ಕಾರ್ಯ ಮಾಡುತ್ತೇವೆ. ಇದರಿಂದ ಕಸ ನಿರ್ವಹಣೆ ಸಹ ಆಗಲಿದೆ.
ಅಂದಪ್ಪ ಕೋಳೂರು ರೈತ, ಯರೇಹಂಚಿನಾಳ