ಉತ್ತಮ ಆರೋಗ್ಯಕ್ಕೆ ಸಮತೋಲನ ಪರಿಸರ ಅಗತ್ಯ: ಸಂಜೀವಕುಮಾರ ನೀರಲಗಿ

| Published : Jun 09 2025, 12:40 AM IST / Updated: Jun 09 2025, 12:41 AM IST

ಉತ್ತಮ ಆರೋಗ್ಯಕ್ಕೆ ಸಮತೋಲನ ಪರಿಸರ ಅಗತ್ಯ: ಸಂಜೀವಕುಮಾರ ನೀರಲಗಿ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯ ಸಂಪತ್ತು ಎಲ್ಲ ಸಂಪತ್ತಿಗಿಂತ ಮಿಗಿಲಾಗಿದೆ. ನಾವು ನೆಮ್ಮದಿ ಬದುಕನ್ನು ನಡೆಸಲು ಉತ್ತಮ ಆರೋಗ್ಯ ಬೇಕು.

ಹಾವೇರಿ: ಜನತೆಯ ಉತ್ತಮ ಆರೋಗ್ಯಕ್ಕೆ ಸಮತೋಲನ ಪರಿಸರ ಅಗತ್ಯವಾಗಿದೆ. ಪರಿಸರ ನಮ್ಮೆಲ್ಲರ ಉಸಿರಾಗಿದ್ದು, ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಬದ್ಧರಾಬೇಕಾಗಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾರ್ಯಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿನ ಡಿಡಿಆರ್‌ಸಿ ಕಚೇರಿಯಲ್ಲಿ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ವತಿಯಿಂದ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರೋಗ್ಯ ಸಂಪತ್ತು ಎಲ್ಲ ಸಂಪತ್ತಿಗಿಂತ ಮಿಗಿಲಾಗಿದೆ. ನಾವು ನೆಮ್ಮದಿ ಬದುಕನ್ನು ನಡೆಸಲು ಉತ್ತಮ ಆರೋಗ್ಯ ಬೇಕು. ಪರಿಸರ ಉತ್ತಮವಾಗಿ ಇದ್ದರೆ ನಮ್ಮ ಬದುಕು ಉತ್ತಮವಾಗಲಿದೆ ಎಂದರು.

ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ಅಧಿಕಾರಿ ಡಾ. ಎಂ.ಎನ್. ನೀಲೇಶ ಮಾತನಾಡಿ, ಪ್ರತಿ ವರ್ಷವೂ ಸಾವಿರಾರು ಸಸಿಗಳನ್ನು ನೆಡುವ ಕೆಲಸವಾಗುತ್ತಿದೆ. ಸಸಿಗಳ ಬೆಳೆಯಲು ನಾವು ಕಾಳಜಿ ವಹಿಸಬೇಕು. ಉತ್ತಮ ಆರೋಗ್ಯ ರಕ್ಷಣೆಗೆ ಪರಿಸರ ಸಂರಕ್ಷಣೆ ಮಾಡಬೇಕು ಎಂದರು. ಇದೇ ಅವಧಿಗೆ ಟಿಬಿ ರೋಗ ಜಯಸಿದವರಿಂದ ಸಸಿಗಳನ್ನು ನೆಡಿಸಲಾಯಿತು.

ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಪ್ರಭು ಹಿಟ್ನಳ್ಳಿ, ಗೌರವ ಸಹಕಾರ್ಯದರ್ಶಿ ನಿಂಗಪ್ಪ ಆರೇರ, ಜಿಲ್ಲಾ ಸಮಿತಿ ಸದಸ್ಯರಾದ ಡಾ. ಪ್ರದೀಪ ದೊಡ್ಡಗೌಡ್ರ, ರವಿ ಇಂಚಿಗೇರಿ, ಉಡಚಪ್ಪ ಮಾಳಗಿ, ನೋಡಲ್ ಅಧಿಕಾರಿ ಪೂರ್ಣಿಮಾ ಮಠದ, ಡಾ. ಅಂಕಿತ ಆನಂದ, ಮಂಜುನಾಥ, ಇರ್ಶಾದಲಿ ದುಂಡಸಿ, ಫಕ್ಕಿರೇಶ, ಜಗದೀಶ, ನವೀನ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ಸಿಬ್ಬಂದಿ ಇದ್ದರು.ಪರಿಸರ ಕಡೆಗಣಿಸಿದರೆ ಭವಿಷ್ಯದಲ್ಲಿ ಆಪತ್ತು

ಹಾವೇರಿ: ಇಂದಿನ ಆಧುನಿಕ ದಿನಗಳಲ್ಲಿ ಹಲವಾರು ಹೊಸ ಸಂಪನ್ಮೂಲಗಳನ್ನು ಬಳಸುವ ಜತೆಗೆ ಬದಲಾಗುತ್ತಿರುವ ಜೀವನ ಶೈಲಿಯಿಂದ ಪರಿಸರ ಕಡೆಗಣಿಸುತ್ತಿದ್ದು, ಇದೇ ರೀತಿ ಮುಂದುವರಿದಲ್ಲಿ ಮುಂದೊಂದು ದಿನ ನಾವೆಲ್ಲ ಜಾಗತಿಕ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅನನ್ಯ ಇಂಟರ್‌ನ್ಯಾಷನಲ್‌ ಶಾಲೆಯ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ತಿಳಿಸಿದರು.ನಗರದ ಸಿ.ಡಿ. ಹಾವೇರಿ ಶಿಕ್ಷಣ ಸಂಸ್ಥೆಯ ಅನನ್ಯ ಇಂಟರ್‌ನ್ಯಾಷನಲ್‌ ಶಾಲೆ ಆವರಣದಲ್ಲಿ ಇತ್ತೀಚೆಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ಮಾತನಾಡಿದರು. ಪ್ರತಿಯೊಬ್ಬರೂ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ, ಪರಿಸರಸ್ನೇಹಿ ಸಂಪನ್ಮೂಲಗಳನ್ನು ಬಳಸಬೇಕು. ಇದು ನಮ್ಮೆಲ್ಲರ ಹೊಣೆಯಾಗಿದೆ. ಮಕ್ಕಳು ಪ್ರತಿ ಬಾರಿ ತಮ್ಮ ಜನ್ಮದಿನಾಚರಣೆ ಸಂದರ್ಭದಲ್ಲಿ ಮನೆ, ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವ ಮೂಲಕ ಆಚರಿಸಿಕೊಂಡಲ್ಲಿ ಪರಿಸರಕ್ಕೆ ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ನಾವು ಇನ್ನೊಬ್ಬರ ಜನ್ಮದಿನಕ್ಕೆ ಸಸಿಗಳನ್ನು ಉಡುಗೊರೆಯಾಗಿ ನೀಡಿದರೆ ಸಮಾಜ ಮತ್ತು ಪರಿಸರ ಸುಧಾರಣೆಯಾಗಲು ಸಾಧ್ಯ ಎಂದರು.ಶಾಲೆಯ ಪ್ರಾಂಶುಪಾಲ ಶಿವಶಂಕರ ಮೋಟಗಿ ಮಾತನಾಡಿ, ವಾಯುಮಾಲಿನ್ಯ ಕಡಿಮೆ ಮಾಡಲು ಆದಷ್ಟು ಪರಿಸರಸ್ನೇಹಿ ಇಂಧನಗಳನ್ನು ಹಾಗೂ ವಿದ್ಯುತ್‌ಚಾಲಿತ ವಾಹನಗಳನ್ನು ಬಳಸಿಕೊಂಡರೆ ಪರ್ಯಾಯವಾಗಿ ಒಂದು ಕೊಡುಗೆಯನ್ನು ಪರಿಸರಕ್ಕೆ ನೀಡಿದಂತಾಗುತ್ತದೆ. ಅನಗತ್ಯವಾಗಿ ನಾವು ಸ್ವಂತ ವಾಹನಗಳನ್ನು ಉಪಯೋಗಿಸುವ ಬದಲಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸಬೇಕು ಎಂದರು.

ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಸೌಮ್ಯಾ ಮಲ್ಲಿಕಾರ್ಜುನ ಹಾವೇರಿ, ಅನನ್ಯ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸುಮಾ ಬಾಲಕೃಷ್ಣ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಮಕ್ಕಳು ಹಾಗೂ ಪಾಲಕರು ಇದ್ದರು.