ಕನ್ನಡಪ್ರಭ ವಾರ್ತೆ ಪಾಂಡವಪುರ
ಭರತನಾಟ್ಯ ಹಾಗೂ ಸಂಗೀತ ಕಲೆಯನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡರೆ ಉತ್ತಮ ಭವಿಷ್ಯ ಕಂಡುಕೊಳ್ಳಬಹುದು ಎಂದು ಕಲಾವೃಂದ ಸಂಗೀತ ನೃತ್ಯ ಶಾಲೆಯ ಸಂಸ್ಥಾಪಕ ಪಿ.ಎಸ್.ಶಶಿಕಾಂತ್ ಹೇಳಿದರು.ಪಟ್ಟಣದ ವಿಜಯ ಕಾಲೇಜಿನ ಕೃಷ್ಣಕುಮಾರ್ ಸಭಾಂಗಣದಲ್ಲಿ ಕಲಾವೃಂದ ಸಂಗೀತ ನೃತ್ಯ ಶಾಲೆಯಿಂದ ನಡೆದ ನೃತ್ಯ ಕಲೋತ್ಸವ 6ನೇ ವರ್ಷದ ವಾರ್ಷಿಕೋತ್ಸವದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು ಮಾಡಬೇಕು. ನೃತ್ಯ ಕಲೆ ಶ್ರೀಮಂತವಾದ ಕಲೆಯಲ್ಲ, ಪ್ರತಿಯೊಬ್ಬ ಮಕ್ಕಳಿಗೂ ದಕ್ಕುವಂತಹ ಕಲೆ. ಆದರೆ, ಆಸಕ್ತಿ ಮುಖ್ಯ. ಸಂಗೀತ, ಭರತ ನಾಟ್ಯದಲ್ಲಿ ತೊಡಗಿಸಿಕೊಂಡಿರುವ ಸಾಕಷ್ಟು ಮಂದಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸಿದ್ದಾರೆ ಎಂದರು.ಪಟ್ಟಣದಲ್ಲಿ 8 ವರ್ಷದಿಂದ ನೃತ್ಯ ಶಾಲೆ ನಡೆಸುತ್ತಿದ್ದು, 400 ಕ್ಕೂ ಅಧಿಕ ವಿದ್ಯಾರ್ಥಿಗಳು ಭರತ ನಾಟ್ಯ ಕಲಿತಿದ್ದಾರೆ. ಈ ಕಲೆ ಕಲಿಯಲು ವಯೋಮಿತಿ ಇಲ್ಲ, ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಭರತನಾಟ್ಯ ಕಲಾವಿದೆ ವಿದುಷಿ ನಾಗಶ್ರೀ ಫಣೀಂದ್ರಕುಮಾರ್ ಮಾತನಾಡಿ, ಪೋಷಕರು ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸುವ, ನೃತ್ಯ-ಸಂಗೀತ ಕಲೆಯನ್ನು ಕಲಿಸುವ ಮೂಲಕ ಕಲೆಗೆ ಹೆಚ್ಚು ಉತ್ತೇಜನ ನೀಡಬೇಕು ಎಂದರು.
ಇದೇ ವೇಳೆ ಕನ್ನಡ ಜಾನಪದ ಪರಿಷತ್ ರಾಜಾಧ್ಯಕ್ಷ ಎಸ್.ಬಾಲಾಜಿ. ಕನ್ನಡ ಜನಪದ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ವಿಜಯಕೊಪ್ಪ, ರಾಮನಾಗರ ಕನ್ನಡ ಜನಪದ ಪರಿಷತ್ ಜಿಲ್ಲಾಧ್ಯಕ್ಷ ಕೆ.ಸಿ.ಕಾಂತಪ್ಪ, ಡಾ.ಶೃತಿ ರಂಜಿನಿ, ರೈತ ಮುಖಂಡ ವಿಜಯಕುಮಾರ್, ದೀಲಿಪ್ ಹಾಗೂ ಎನ್.ಕೆ.ಶ್ರೀನಿವಾಸ್, ಭಾರತಿ ಇತರರಿದ್ದರು.