ಸಾರಾಂಶ
ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಕಳೆದ ಹಲವಾರು ದಶಕಗಳಿಂದ ಬೆಳೆಯುತ್ತಿರುವ ಕಸದ ಬೆಟ್ಟ ಕರಗಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಯೋಜಿಸಿದ್ದ ಬಯೋ ಮೈನಿಂಗ್ ಯೋಜನೆ ಇನ್ನೂ ಟೆಂಡರ್ ಪ್ರಕ್ರಿಯೆಯಲ್ಲೇ ಇದೆ. ಮೂರೂವರೆ ವರ್ಷವಾದರೂ ಮುಂದೆ ಹೋಗುತ್ತಿಲ್ಲ. ಅತ್ತ ಬೆಟ್ಟ ಬೆಳೆಯುವುದು ಕಡಿಮೆಯಾಗುತ್ತಿಲ್ಲ. ಇದರಿಂದ ಡಂಪಿಂಗ್ ಯಾರ್ಡ್ ಸುತ್ತಮುತ್ತಲಿನ ಜನತೆ ನರಕಯಾತನೆಯೂ ಕಡಿಮೆಯಾಗುತ್ತಿಲ್ಲ.
ಹುಬ್ಬಳ್ಳಿಯ ಕಾರವಾರ ರಸ್ತೆ ಹಾಗೂ ಧಾರವಾಡದ ಹೊಸಯಲ್ಲಾಪುರದಲ್ಲಿ ಕಸವನ್ನು ಡಂಪ್ ಮಾಡಿಕೊಂಡು ಬರಲಾಗುತ್ತಿದೆ. ಕಳೆದ 5-6 ದಶಕಗಳಿಂದ ಕಸವನ್ನು ಈ ಪ್ರದೇಶದಲ್ಲಿ ಡಂಪ್ ಮಾಡಲಾಗುತ್ತಿದೆ. ಇದರಿಂದ 2 ಕಡೆಗಳಲ್ಲಿ ಕಸದ ರಾಶಿ ಅಕ್ಷರಶಃ ಬೆಟ್ಟದಂತೆ ಬೆಳೆದಿವೆ. ಹುಬ್ಬಳ್ಳಿಯಲ್ಲಿ 19.15 ಎಕರೆ, ಧಾರವಾಡದಲ್ಲಿ 9 ಎಕರೆ ಪ್ರದೇಶದಲ್ಲಿ ಈ ಕಸದ ರಾಶಿ ಇದೆ. ಕಸದ ರಾಶಿ ದಿನೇ ದಿನೇ ಬೆಳೆಯುತ್ತಲೇ ಸಾಗಿದೆ.ಎಷ್ಟಿದೆ ಕಸ?
ಹುಬ್ಬಳ್ಳಿಯಲ್ಲಿ 4.20 ಲಕ್ಷ ಟನ್, ಧಾರವಾಡದಲ್ಲಿ 1.32 ಲಕ್ಷ ಟನ್ ಸೇರಿ ಬರೋಬ್ಬರಿ 5.52 ಲಕ್ಷ ಟನ್ ಕಸದ ರಾಶಿ ಇದೆ. ಈ ಕಸದ ರಾಶಿಯನ್ನು ತೆರವುಗೊಳಿಸಲು ಮಧ್ಯಪ್ರದೇಶದ ಇಂದೋರ್ನಲ್ಲಿ ಅಳವಡಿಸಿರುವ ಬಯೋ ಮೈನಿಂಗ್ ಮಾಡಲು ಪಾಲಿಕೆ ನಿರ್ಧರಿಸಿತ್ತು. ಇದಕ್ಕಾಗಿ ಡ್ರೋಣ ಸಮೀಕ್ಷೆ ಕೂಡ ಮಾಡಿಸಲಾಗಿತ್ತು. ಕಸದ ರಾಶಿ ಎಷ್ಟು ವರ್ಷದಿಂದ ಡಂಪ್ ಮಾಡಲಾಗುತ್ತಿದೆ. ಎಷ್ಟು ಪ್ರಮಾಣದ ಕಸ ಸಂಗ್ರಹವಾಗಿದೆ. ಅದರಲ್ಲಿರುವ ಅಂಶಗಳೇನು? ಎಂಬ ಬಗ್ಗೆ ಈಗಾಗಲೇ ಸಮೀಕ್ಷೆ ಕೂಡ ಮಾಡಲಾಗಿದೆ. ಎಂಜಿನಿಯರಿಂಗ್ ತಂಡದಿಂದ ಕಸದಲ್ಲಿರುವ ಅಂಶ, ಅವನ್ನು ಮರುಬಳಕೆ ಮಾಡಿಕೊಳ್ಳಬಹುದು ಎಂಬ ವರದಿ ಕೂಡ ಸಿದ್ಧ ಪಡಿಸಲಾಗಿತ್ತು. ಇದೆಲ್ಲ ಆಗಿ ಆಗಲೇ ಮೂರೂವರೆ ವರ್ಷವೇ ಆಗಿದೆ.₹28.47 ಕೋಟಿ ಯೋಜನೆಯಿದು
₹28.47 ಕೋಟಿ ಮೌಲ್ಯದ ಯೋಜನೆಯಿದು. 2021ರ ಅಕ್ಟೋಬರ್ನಲ್ಲೇ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಎರಡು ವರ್ಷ ಇಟ್ಟುಕೊಂಡು ಕಳೆದ ವರ್ಷವಷ್ಟೇ ಒಪ್ಪಿಗೆ ನೀಡಿ ಕಳುಹಿಸಿದೆ. ಅಲ್ಲಿಂದ ಅನುಮೋದನೆ ಸಿಕ್ಕ ತಕ್ಷಣ ಟೆಂಡರ್ ಕರೆಯಬೇಕು ಎಂದರೆ ನೀತಿ ಸಂಹಿತಿ ಜಾರಿಯಾಗಿದ್ದರಿಂದ ಮತ್ತೆ 3 ತಿಂಗಳು ಯೋಜನೆಯ ಫೈಲ್ ಮೂಲೆ ಸೇರಿತ್ತು. ಅದಾದ ಬಳಿಕ ಆಗಸ್ಟ್ನಲ್ಲಿ ಮೊದಲ ಬಾರಿಗೆ ಟೆಂಡರ್ ಕರೆಯಲಾಗಿತ್ತು. ಆಗಲೂ ಯಾರೊಬ್ಬರು ಅರ್ಹರಾಗಿರುವವರು ಟೆಂಡರ್ ಹಾಕಲಿಲ್ಲ. ಮತ್ತೊಮ್ಮೆ ಟೆಂಡರ್ ಕರೆಯಲಾಗಿತ್ತು. ಆಗ ಕೆಲವರು ಟೆಂಡರ್ ಹಾಕಿದರೂ ದಾಖಲೆಗಳು ಸರಿಯಾಗಿ ಇಲ್ಲದ ಕಾರಣ ಅದು ರದ್ದಾಯಿತು. ಇದೀಗ ಮೂರನೆಯ ಬಾರಿಗೆ ಟೆಂಡರ್ ಕರೆಯಲಾಗಿದೆ.ಇದೀಗ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ಇಲ್ಲಿ ದಾಖಲೆಗಳೆಲ್ಲ ಸರಿಯಿವೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಬಳಿಕ ಟೆಕ್ನಿಕಲ್ ಕಮಿಟಿ ಇದಕ್ಕೆ ಒಪ್ಪಿಗೆ ನೀಡಬೇಕು. ಅಲ್ಲಿಂದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿ ಒಪ್ಪಿಗೆ ನೀಡಬೇಕು. ಅದಾದ ಬಳಿಕವಷ್ಟೇ ಕೆಲಸ ಶುರುವಾಗಲಿದೆ. ಹುಬ್ಬಳ್ಳಿಯಲ್ಲಿನ 4.20 ಲಕ್ಷ ಟನ್ ಕಸ ಕರಗಿಸಲು ₹22.47 ಕೋಟಿ, ಧಾರವಾಡದಲ್ಲಿನ 1.32 ಲಕ್ಷ ಟನ್ ಕಸ ಕರಗಿಸಲು ₹6 ಕೋಟಿ ವಿನಿಯೋಗಿಸಲಾಗುತ್ತಿದೆ.
ಇನ್ನು ಎಂಟ್ಹತ್ತು ದಿನಗಳಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಹೀಗಾದರೆ ಮತ್ತೆ ಟೆಕ್ನಿಕಲ್ ಕಮಿಟಿ ಎದುರಿಗೂ ಇದು ಬರಲ್ಲ. ಸಚಿವ ಸಂಪುಟ ಸಭೆಯೂ ನಡೆಯಲ್ಲ. ಹೀಗಾಗಿ ಮತ್ತೆ ಮೂರ್ನಾಲ್ಕು ತಿಂಗಳ ಕಾಲ ವಿಳಂಬವಾಗುವುದು ಗ್ಯಾರಂಟಿ. ಇನ್ನು ಬಯೋಮೈನಿಂಗ್ ಶುರುವಾದ ಬಳಿಕ ಬರೋಬ್ಬರಿ 18 ತಿಂಗಳ ಬಯೋ ಮೈನಿಂಗ್ ಮಾಡಿ ಕಸದ ಬೆಟ್ಟ ಕರಗಿಸಬೇಕು ಎಂಬುದು ಪಾಲಿಕೆಯ ಅಂಬೋಣ,.ಜನರ ಸಮಸ್ಯೆ ಏನು?
ಕಾರವಾರ ರಸ್ತೆಯಲ್ಲಿನ ಡಂಪಿಂಗ್ ಯಾರ್ಡ್ನಲ್ಲಿ ಪ್ರತಿದಿನ ಅಲ್ಲಿನ ಕಸದ ರಾಶಿಗೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ದುರ್ವಾರ್ಸನೆ ವಿಪರೀತವಾಗಿ ಬೀರುತ್ತಿದೆ. ಹೊಗೆ ಇಡೀ ವಾತಾವರಣವನ್ನೇ ಕೆಡಿಸುತ್ತಿದೆ. ಸಾಂಕ್ರಾಮಿಕ ರೋಗಗಳ ತಾಣವಾಗಿದೆ. ಇಲ್ಲಿದ್ದರೆ ದಮ್ಮು- ಕೆಮ್ಮು ಮಾಮೂಲಿ ಎಂಬಂತಾಗಿದೆ ಎಂಬುದು ನಿವಾಸಿಗಳ ಆರೋಪ.ಈ ಕಾರಣದಿಂದ ಈ ಕಸದ ಬೆಟ್ಟ ಕರಗಿಸಿ ಪುಣ್ಯಕಟ್ಕೊಳ್ಳಿ. ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡಿ ಎಂಬ ಬೇಡಿಕೆ ಇಲ್ಲಿನ ನಿವಾಸಿಗಳದ್ದು. ಈ ಹಿನ್ನೆಲೆಯಲ್ಲಿ ಜನರೆಲ್ಲ ನಿರಂತರ ಧರಣಿ ನಡೆಸುತ್ತಿದ್ದಾರೆ.
ಏನಿದು ಬಯೋ ಮೈನಿಂಗ್?ಬಯೋ ಮೈನಿಂಗ್ ಎಂದರೆ ಜೈವಿಕ ಗಣಿಗಾರಿಕೆ ಎಂದರ್ಥ. ಸಾಮಾನ್ಯವಾಗಿ ಮಿಶ್ರ ತ್ಯಾಜ್ಯಗಳನ್ನು, ಜೈವಿಕ ವಿಘಟನೀಯ ಮತ್ತು ಜೈವಿಕ ವಿಘಟನೀಯವಲ್ಲದ ಕಸಗಳನ್ನು ಡಂಪ್ ಯಾರ್ಡ್ನಲ್ಲಿ ಸುರಿಯಲಾಗುತ್ತದೆ. ಈ ತ್ಯಾಜ್ಯದ ರಾಶಿಯನ್ನು ಯಂತ್ರಗಳ ಸಹಾಯದಿಂದ ಅಗೆಯುವುದು. ಕಸವನ್ನು ಜೈವಿಕ ಜೀವಿಗಳು ಅಥವಾ ನೈಸರ್ಗಿಕ ಅಂಶಗಳಾದ ಗಾಳಿ ಮತ್ತು ಸೂರ್ಯನ ಬೆಳಕಿನಿಂದ ಸಂಸ್ಕರಿಸುವ ಮೂಲಕ ತ್ಯಾಜ್ಯದಲ್ಲಿನ ಜೈವಿಕ ವಿಘಟನೆಯ ಅಂಶಗಳು ಕಾಲಾನಂತರದಲ್ಲಿ ಒಡೆಯುತ್ತವೆ.
ಇದನ್ನು ಬಯೋರೆಮಿಡಿಯೇಶನ್ ಮೂಲಕ ಸ್ಥಿರಗೊಳಿಸುವುದು (ಬಯೋರೆಮಿಡಿಯೇಶನ್ ಎನ್ನುವುದು ನೀರು, ಮಣ್ಣು ಮತ್ತು ಭೂಗರ್ಭದ ವಸ್ತುಗಳನ್ನು ಒಳಗೊಂಡಂತೆ ಕಲುಷಿತ ಮಾಧ್ಯಮಕ್ಕೆ ಚಿಕಿತ್ಸೆ ನೀಡಲು ಬಳಸುವ ಪ್ರಕ್ರಿಯೆ). ಅಗೆದ ತ್ಯಾಜ್ಯವನ್ನು ಬೇರ್ಪಡಿಸುವುದು. ಬಳಿಕ ಮರುಬಳಕೆ, ಸಹ-ಸಂಸ್ಕರಣೆ ಮತ್ತು ಅದರ ಸುರಕ್ಷಿತ ವಿಲೇವಾರಿ ಮೂಲಕ ಸಮರ್ಥನೀಯ ನಿರ್ವಹಣೆ ಮಾಡುವುದು. ಇಂಧೋರ್ನಲ್ಲಿ ಈ ಬಗೆಯ ವೈಜ್ಞಾನಿಕ ರೀತಿ ಅಳವಡಿಸಿಕೊಂಡು ಬರೋಬ್ಬರಿ 15 ಲಕ್ಷ ಮೆಟ್ರಿಕ್ ಟನ್ ತ್ಯಾಜ್ಯವನ್ನು ಸ್ವಚ್ಛಗೊಳಿಸಿತ್ತು.