ಜಮೀನಿಗಾಗಿ ತಮ್ಮನನ್ನೇ ಕೊಂದ ಸಹೋದರ

| Published : Jun 16 2024, 01:48 AM IST / Updated: Jun 16 2024, 01:49 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಜಮೀನು ಮಾರಾಟ ಮಾಡುವುದು ಬೇಡ ಎಂದಿದ್ದ ತಮ್ಮನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಹೋದರ, ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು 8 ಜನರನ್ನು ಹಾರೂಗೇರಿ ಪೊಲೀಸರು ಬಂಧಿಸಿದ್ದಾರೆ.ರಾಯಬಾಗ ತಾಲೂಕಿನ ಸುಲ್ತಾನಪೂರ ಗ್ರಾಮದ ಈರಪ್ಪಾ ಅಲಗೊಂಡ ಚೌಗಲಾ ಹತ್ಯೆಗೀಡಾದ ವ್ಯಕ್ತಿ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಮೀನು ಮಾರಾಟ ಮಾಡುವುದು ಬೇಡ ಎಂದಿದ್ದ ತಮ್ಮನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಹೋದರ, ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು 8 ಜನರನ್ನು ಹಾರೂಗೇರಿ ಪೊಲೀಸರು ಬಂಧಿಸಿದ್ದಾರೆ.ರಾಯಬಾಗ ತಾಲೂಕಿನ ಸುಲ್ತಾನಪೂರ ಗ್ರಾಮದ ಈರಪ್ಪಾ ಅಲಗೊಂಡ ಚೌಗಲಾ ಹತ್ಯೆಗೀಡಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ ವ್ಯಕ್ತಿ ಹಿರಿಯ ಸಹೋದರ ಶ್ರೀಶೈಲ ಅಲಗೊಂಡ ಚೌಗಲಾ (39), ಕಪ್ಪಲಗುದ್ದಿ ಗ್ರಾಮದ ಭರಮಪ್ಪ ಬಾಳಪ್ಪ ನಾಯಿಕ (34), ಮೂಡಲಗಿಯ ಪಡಿಯಪ್ಪ ಅಲಿಯಾಸ್‌ ಪ್ರದೀಪ ಶಿವಬಸು ಸುಣಗಾರ (27), ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದ ಚಂದನ ರಾಮಪ್ಪ ಮಾದರ (22), ಮೂಡಲಗಿಯ ರಮೇಶ ಶಿವಬಸು ಚಿಪ್ಪಲಕಟ್ಟಿ (22), ದಸ್ತಗೀರ ಮರಮಸಾಬ ಹುಣಶ್ಯಾಳ ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರು ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ಮೂಡಲಗಿಯ ಶಾನೂರ ಅಬ್ದುಲ್‌ ಪೆಂಡಾರಿ (33) ಪರಾರಿಯಾಗಿದ್ದಾನೆ.

ಕೊಲೆಯಾಗಲು ಕಾರಣವೇನು?:

ರಾಯಬಾಗ ತಾಲೂಕಿನ ಸುಲ್ತಾನಪೂರ ಗ್ರಾಮಕ್ಕೆ ಹೊಂದಿಕೊಂಡಂತೆ ಒಂದು ಎಕರೆ ಜಮೀನಿದೆ. ಅದನ್ನು ಮಾರಲು ಶ್ರೀಶೈಲ ಚೌಗಲಾ ಮುಂದಾಗಿದ್ದ. ಅಲ್ಲದೇ, ಬೇರೆಯವರ ಬಳಿ ಲಕ್ಷಾಂತರ ರು. ಹಣವನ್ನು ಮುಂಗಡವಾಗಿ ಪಡೆದಿದ್ದ. ಈ ವಿಷಯ ಕಿರಿಯ ಸಹೋದರ ಈರಪ್ಪಾ ಚೌಗಲಾ ಗಮನಕ್ಕೆ ಬಂದಿದೆ. ಆಗ ಯಾವುದೇ ಕಾರಣಕ್ಕೂ ಜಮೀನು ಮಾರಾಬೇಡ ಎಂದು ತಗಾದೆ ತೆಗೆದಿದ್ದಾನೆ. ಈ ವಿಷಯವಾಗಿ ಶ್ರೀಶೈಲ ಹಾಗೂ ಈರಪ್ಪ ನಡುವೆ ಜಗಳವಾಗಿದೆ. ಹೀಗಾಗಿ ಜಮೀನು ಮಾರಲು ಶ್ರೀಶೈಲ ಹಠಕ್ಕೆ ಬಿದ್ದಿದ್ದರಿಂದ ಈರಪ್ಪಾ ನ್ಯಾಯಾಲಯದ ಮೊರೆ ಹೋಗಿ ಜಮೀನು ಪರಬಾರೆ ಮಾಡದಂತೆ ಆದೇಶ ತಂದಿದ್ದಾನೆ.

ಇದರಿಂದ ಅಸಮಾಧಾನಗೊಂಡ ಶ್ರೀಶೈಲ ಸ್ವಂತ ತಮ್ಮನನ್ನು ಹತ್ಯೆ ಮಾಡುವ ಕುರಿತು ಸಂಚು ರೂಪಿಸಿ, ಇನ್ನುಳಿದ ಆರೋಪಿಗಳಿಗೆ ಸುಪಾರಿ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಜೂ.4 ರಂದು ರಾತ್ರಿ ಮನೆಯಿಂದ ಹೊರಗೆ ಹೋದ ಈರಪ್ಪ ಮರಳಿ ಮನೆಗೆ ಬರುತ್ತಿದ್ದ ಸಮಯದಲ್ಲಿ ಅಪಹರಣ ಮಾಡಿದ್ದಾರೆ. ಬಳಿಕ ಉಸಿರಿಗಟ್ಟಿಸಿ ಕೊಲೆ ಮಾಡಿದ ಬಳಿಕ ಈರಪ್ಪನ ಮೃತದೇಹವನ್ನು ಬಾಗಲಕೋಟೆ ಜಿಲ್ಲೆಯ ಬೀಳಗಿ ಠಾಣೆ ವ್ಯಾಪ್ತಿಯ ಕೋರ್ತಿ ಕೊಲ್ಹಾರ ಸೇತುವೆ ಮೇಲಿಂದ ಕೃಷ್ಣಾ ನದಿಗೆ ಎಸೆದು ಪರಾರಿಯಾಗಿದ್ದರು.

ಕೊನೆಗೂ ಪ್ರಕರಣ ಬೇಧಿಸಿದ ಖಾಕಿ:

ಜೂ.4 ರಂದು ರಾತ್ರಿ ಮನೆಯಲ್ಲಿ ಹೊರಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಈರಪ್ಪ ಚೌಗಲಾ ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಜೂ.6 ರಂದು ಮೃತ ಈರಪ್ಪನ ತಂದೆ ಅಲಗೊಂಡ ಚೌಗಲಾ ಹಾರೂಗೇರಿ ಠಾಣೆಗೆ ತೆರಳಿ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದರು.

ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಹಾರೂಗೇರಿ ವೃತ್ತ ನಿರೀಕ್ಷಕ ಡಿ.ರವಿಚಂದ್ರನ ಹಾಗೂ ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ ನೇತೃತ್ವದ ಪೊಲೀಸರ ತಂಡ ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ಹಲವು ಮಾಹಿತಿ ಕಲೆ ಹಾಕಿದ್ದ ಪೊಲೀಸರಿಗೆ ಬೀಳಗಿ ಠಾಣೆ ವ್ಯಾಪ್ತಿಯ ಕೊಲ್ಹಾರ ಸೇತುವೆ ಬಳಿ ಅಪರಿಚಿತ ಶವ ಪತ್ತೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಅಲ್ಲಿಯೂ ತೆರಳಿ ಪರಿಶೀಲನೆ ನಡೆಸಿದ ಸಮಯದಲ್ಲಿ ಕಾಣೆಯಾದ ಈರಪ್ಪನಿಗೂ ಹಾಗೂ ಮೃತದೇಹಕ್ಕೂ ತಾಳೆಯಾಗಿದೆ. ಈ ಪ್ರಕರಣದ ಹಿಂದೆ ಕುಟುಂಬಸ್ಥರ ಕೈವಾಡ ಇರುವ ಕುರಿತು ಮತ್ತಷ್ಟು ಅನುಮಾನಗೊಂಡ ಪೊಲೀಸರು, ಸಹೋದರ ಶ್ರೀಶೈಲ ಚೌಗಲಾನನ್ನು ತಮ್ಮದೇ ರೀತಿಯಲ್ಲಿ ವಿಚಾರಿಸಿದ್ದಾರೆ. ಈ ವೇಳೆ ಸಹೋದರನ ಕೊಲೆಯ ಹಿಂದೆ ಕೈವಾಡ ಇರುವ ಕುರಿತು ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಈ ಕೃತ್ಯದಲ್ಲಿ ಭಾಗಿಯಾದವರ ಕುರಿತು ಮಾಹಿತಿ ನೀಡಿದ್ದಾನೆ.

--------ಕೋಟ್‌

ಮೊದಲಿಗೆ ವ್ಯಕ್ತಿ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ ಆಸ್ತಿ ವಿಚಾರವಾಗಿ ಸಹೋದರ ಸೇರಿದಂತೆ ಒಟ್ಟು 9 ಜನರು ಕೊಲೆಯಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗುತ್ತಿದಂತೆ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರು ಸೇರಿದಂತೆ ಒಟ್ಟು 8 ಜನರನ್ನು ಬಂಧಿಸಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಕೊಲೆ ಪ್ರಕರಣ ಬೇಧಿಸಿದ ಹಾರೂಗೇರಿ ಪೊಲೀಸರ ಕಾರ್ಯ ಶ್ಲಾಘನೀಯ.

- ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬೆಳಗಾವಿ