ಸಾರಾಂಶ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಇಲ್ಲಿನ ಮಾರುತಿ ನಗರದ ತುಂಗಾಜಲ ಶ್ರೀ ಚೌಡೇಶ್ವರಿದೇವಿ ಉತ್ಸವ ಮೂರ್ತಿಗೆ ಸೋಮವಾರ ಬೆಳಗ್ಗೆ ಶಾಸಕ ಪ್ರಕಾಶ ಕೋಳಿವಾಡ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.ಮಾರುತಿ ನಗರದ ಚೌಕಿಮನಿಯ ಮೂಲ ದೇವಸ್ಥಾನದಿಂದ ದೇವಿಯ ಉತ್ಸವ ಮೂರ್ತಿಯನ್ನು ಶೃಂಗರಿಸಿದ ರಥದಲ್ಲಿ ಕುಳ್ಳಿರಿಸಿ ಮಾರುತಿ ನಗರದ ಮುಖ್ಯ ರಸ್ತೆ, ಸಿದ್ದೇಶ್ವರ ದೇವಸ್ಥಾನ ರಸ್ತೆ, ಹಳೆ ಪಿ.ಬಿ. ರಸ್ತೆ ನಾಡಿಗ್ಗೇರ ಓಣಿ, ಕಾಕಿ ಗಲ್ಲಿ, ಕುರುಬಗೇರಿ, ನೆಹರು ಮಾರ್ಕೇಟ್, ಎಂ.ಜಿ. ರಸ್ತೆ, ದೊಡ್ಡಪೇಟೆ, ರೊಡ್ಡನವರ ಓಣಿ, ಸುಭಾಷ ಚೌಕ್, ಗೌಳಿ ಓಣಿ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಂದು ಬೆಂಚಿ ತುಂಗಾಜಲ ಚೌಡೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.
ಮೆರವಣಿಗೆಯಲ್ಲಿ ಬಾಜಾ ಭಜಂತ್ರಿ, ಡೊಳ್ಳು, ಸಮಾಳ ವಾದ್ಯ, ಕೀಲು ಕುದುರೆ ಕುಣಿತ, ಜಾಂಜ್ ಮೇಳ, ಆರ್ಕೆಸ್ಟ್ರಾದವರು ತಮ್ಮ ಕಲಾ ಪ್ರಾವಿಣ್ಯ ಪ್ರದರ್ಶಿಸಿದರು. ಕರಡಿ ವೇಷ, ಬೊಂಬೆಗಳ ಮುಖವಾಡ ಧರಿಸಿದವರು ಜನರ ಗಮನ ಸೆಳೆದರು. ಮೆರವಣಿಗೆ ಸಾಗಿಬರುವ ದಾರಿಯುದ್ದಕ್ಕೂ ಮಹಿಳೆಯರು ರಸ್ತೆ ಮೇಲೆ ನೀರು ಹಾಕಿ ಮನೆಗಳ ಮುಂದೆ ಚಿತ್ತಾಕರ್ಷಕ ರಂಗೋಲಿ ಚಿತ್ತಾರಗಳನ್ನು ಬೀಡಿಸಿದ್ದರು. ಭಕ್ತರು ದೇವಿಗೆ ವಿವಿಧ ತರಹದ ಹೂಮಾಲೆಗಳು, ಹಣ್ಣು ಕಾಯಿ ನೈವೆದ್ಯ ಅರ್ಪಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ತುಂಗಾಜಲ ಚೌಡೇಶ್ವರಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ, ಚೋಳಪ್ಪ ಕಸವಾಳ, ಹನುಮಂತಪ್ಪ ಮುಕ್ತೇನಹಳ್ಳಿ, ಸುಮಾ ಹುಚಗೊಂಡರ, ಶಿವಾನಂದ ಸಾಲಗೇರಿ, ಬಸವರಾಜ ಹುಚಗೊಂಡರ, ಕುಮಾರ ಶಾವಿ, ಲಕ್ಷ್ಮಣ ಸಾಲಿ, ಕುಮಾರ ಮಡಿವಾಳರ, ರಮೇಶ ಕರಡೆಣ್ಣನವರ, ಸೋಮಶೇಖರ ಗೌಡಶಿವಣ್ಣನವರ, ಪುಟ್ಟಪ್ಪ ಮರಿಯಮ್ಮನವರ, ಜಯಶ್ರೀ ಪಿಸೆ, ಆನಂದ ಹುಲ್ಬನಿ ಸೇರಿದಂತೆ ಸಹಸ್ರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.