ಬೈಲಹೊಂಗಲ: ಶನಿವಾರ ತಡರಾತ್ರಿ ರಾತ್ರಿ ಸುರಿದ ಧಾರಾಕಾರ ಮಳೆಯ ವೇಳೆ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದಿದೆ. ಗ್ರಾಮದ ರಾಜೇಶ್ವರಿ ಜಕ್ಕಪ್ಪನವರ ಎಂಬುವರ ಮನೆಯ ಮುಂಭಾಗದಲ್ಲಿದ್ದ ತೆಂಗಿನ ಮರಕ್ಕೆ ರಾತ್ರಿ 2 ಗಂಟೆ ಸುಮಾರಿನಲ್ಲಿ ಸಿಡಿಲು ಬಡಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ವೇಳೆ ಭಾರೀ ಮಳೆ ಹಾಗೂ ಗಾಳಿಯೊಂದಿಗೆ ಸಿಡಿಲಿನ ತೀವ್ರ ಶಬ್ದ ಕೇಳಿ ಬಂದಿದ್ದು, ಸುತ್ತಮುತ್ತಲಿನ ನಿವಾಸಿಗಳು ಕ್ಷಣಕಾಲ ಆತಂಕಗೊಂಡಿದ್ದರು. ಸಿಡಿಲು ಬಡಿದ ಪರಿಣಾಮ ತೆಂಗಿನ ಮರದ ದಿಂಡು ಭಾಗದಲ್ಲಿ ಬಿರುಕು ಉಂಟಾಗಿ, ಕೆಲವು ಭಾಗಗಳು ಸುಟ್ಟು ಹೋಗಿವೆ. ಘಟನೆಯ ನಂತರ ಮರದ ಸುತ್ತಮುತ್ತ ಬೆಂಕಿಯ ಕಿಡಿಗಳಂತಹ ಬೆಳಕು ಕಂಡುಬಂದಿದ್ದು, ಕೆಲಕಾಲ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಅದೃಷ್ಟವಶಾತ್ ಸಮೀಪವೇ ಮನೆಯಿದ್ದರೂ ಯಾವುದೇ ಅಪಾಯ ಸಂಭವಿಸಿಲ್ಲ. ಸಿಡಿಲಿನ ಪರಿಣಾಮದಿಂದ ಮನೆಗೆ ಅಥವಾ ಇತರ ಆಸ್ತಿಗೆ ಹಾನಿ ಉಂಟಾಗಿಲ್ಲ ಎಂದು ತಿಳಿದುಬಂದಿದೆ.ಮಳೆಗಾಲದಲ್ಲಿ ಸಿಡಿಲು ಬಡಿತದ ಅಪಾಯ ಹೆಚ್ಚಿರುವುದರಿಂದ ಸಾರ್ವಜನಿಕರು ಮರಗಳ ಕೆಳಗೆ ಆಶ್ರಯ ಪಡೆಯದಿರಲು, ಅಗತ್ಯವಿಲ್ಲದ ವೇಳೆ ಹೊರಗೆ ಹೋಗದಿರಲು ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.