ತ್ಯಾಗರ್ತಿ: ಗ್ರಿಡ್ ಕಾಮಗಾರಿಯನ್ನು ತ್ವರಿತಗೊಳಿಸಬೇಕೆಂದು ಜುಲೈ 2ರಂದು ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ತ್ಯಾಗರ್ತಿ ಸಂಪೂರ್ಣ ಬಂದ್‍ಗೆ ಕರೆ ನೀಡಲಾಗಿದೆ ಎಂದು ವಿದ್ಯುತ್ ಗ್ರಿಡ್ ಹೋರಾಟ ಸಮಿತಿಯ ಮುಖಂಡರಾದ ಕುಮಾರಸ್ವಾಮಿ ಕೊಪ್ಪ, ಶ್ರೀನಾಥ್ ನೀಚಡಿ, ಕೃಷ್ಣಮೂರ್ತಿ ಹೊಸಂತೆ ಪತ್ರಿಕಾ ಹೇಳಿಕೆ ನೀಡಿದ್ದಾರೆ. ತ್ಯಾಗರ್ತಿಯ ಮೆಸ್ಕಾಂ ಕಚೇರಿ ಆವರಣದಲ್ಲಿ ಗ್ರೀಡ್ ಹೋರಾಟ ಸಮಿತಿಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ತ್ಯಾಗರ್ತಿ, ಬರೂರು, ಹಿರೇಬಿಲಗುಂಜಿ, ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಕೃಷಿ ಚಟುವಟಿಕೆಗಳಿಗೆ ಅಸಮರ್ಪಕ ವಿದ್ಯುತ್ ಲಭಿಸುತ್ತಿದ್ದು, ಈ ಅವ್ಯವಸ್ಥೆಯನ್ನು ಸರಿಪಡಿಸಲು ತ್ಯಾಗರ್ತಿಯಲ್ಲಿ 110 ಕೆವಿ ಗ್ರಿಡ್ ಸ್ಥಾಪಿಸಲಾಗುತ್ತಿದೆ. ಗ್ರಿಡ್ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದ್ದು, ಇದೇ ರೀತಿ ಮುಂದುವರೆದರೆ ಹಲವು ವರ್ಷ ಕಳೆದರೂ ಈ ಕಾಮಗಾರಿ ಪೂರ್ಣಗೊಳ್ಳುವ ಸೂಚನೆ ಕಂಡುಬರುತ್ತಿಲ್ಲ. ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ರೈತರ ಕೃಷಿ ಚಟುವಟಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಹೇಳಿದರು. ಈ ಪ್ರತಿಭಟನೆಗೆ ರೈತರು, ವರ್ತಕರು, ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಹಕರಿಸಬೇಕೆಂದು ಹೋರಾಟ ಸಮಿತಿಯು ಕರೆ ನೀಡಿದೆ.