ಜುಲೈಗೆ ದಾವಣಗೆರೆಯಲ್ಲಿ ವಿಪ್ರ ಅಡುಗೆಯವರ ಸಮಾವೇಶ: ಗುರುರಾಜ ಚಳ್ಳಾರೆ

| Published : Apr 12 2025, 12:49 AM IST

ಸಾರಾಂಶ

ಅಡುಗೆದಾರರು, ಅಡುಗೆ ಸಹಾಯಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರ್ಪಡೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶ್ರೀ ಅನ್ನಪೂರ್ಣೇಶ್ವರಿ ಉತ್ಸವವನ್ನು (ಸಮಾವೇಶ) ಜು.4 ಮತ್ತು 5ರಂದು ದಾವಣಗೆರೆಯ ರಾಜನಹಳ್ಳಿ ಹನುಮಂತಪ್ಪ ಧರ್ಮಶಾಲೆಯಲ್ಲಿ ನಡೆಸಲಾಗುವುದು

ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರ್ಪಡೆ, ಸೌಲಭ್ಯಕ್ಕೆ ಒತ್ತಾಯ

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಡುಗೆದಾರರು, ಅಡುಗೆ ಸಹಾಯಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರ್ಪಡೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶ್ರೀ ಅನ್ನಪೂರ್ಣೇಶ್ವರಿ ಉತ್ಸವವನ್ನು (ಸಮಾವೇಶ) ಜು.4 ಮತ್ತು 5ರಂದು ದಾವಣಗೆರೆಯ ರಾಜನಹಳ್ಳಿ ಹನುಮಂತಪ್ಪ ಧರ್ಮಶಾಲೆಯಲ್ಲಿ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ವಿಪ್ರ ಅಡುಗೆದಾರರು ಹಾಗೂ ಅಡುಗೆ ಸಹಾಯಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಗುರುರಾಜ ಚಳ್ಳಾರೆ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಲ್ಕೂವರೆ ವರ್ಷದೆ ಸ್ಥಾಪನೆಯಾದ ಸಂಘವು ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಉತ್ಸವ ಆಚರಿಸುವ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರ, ಜನ ಪ್ರತಿನಿಧಿ, ಅಧಿಕಾರಿಗಳಿಗೆ ಒತ್ತಾಯಿಸುತ್ತಿದ್ದು, ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ವಿಪ್ರ ಅಡುಗೆಯವರ ಸಮಾವೇಶ ನಡೆಸಲಾಗುತ್ತಿದೆ ಎಂದರು.

ರಾಜ್ಯಾದ್ಯಂತ 18-20 ಸಾವಿರ ಅಡುಗೆ ಮತ್ತು ಅಡುಗೆ ಸಹಾಯಕರು ಸಂಘದ ಸದಸ್ಯತ್ವ ಪಡೆದಿದ್ದಾರೆ. ದಾವಣಗೆರೆ ಸಮಾವೇಶದಲ್ಲಿ ಸುಮಾರು ನಾಲ್ಕೈದು ಸಾವಿರ ಜನ ಸೇರುವ ನಿರೀಕ್ಷೆ ಇದೆ. ವಿಪ್ರ ಅಡುಗೆದಾರರು ಹಾಗೂ ಅಡುಗೆ ಸಹಾಯಕರ ಹಲವಾರು ಬೇಡಿಕೆಗಳ ಬಗ್ಗೆ ಚರ್ಚಿಸಿ, ಸರ್ಕಾರಗ ಗಮನ ಸೆಳೆಯಲಾಗುವುದು. ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಸಹಸಮಾವೇಶದ ವೇಳೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಅನೇಕ ವರ್ಷದಿಂದಲೂ ಅಡುಗೆದಾರು, ಅಡುಗೆ ಸಹಾಯಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ, ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಅಡುಗೆದಾರರು ಹಾಗೂ ಅಡುಗೆ ಸಹಾಯಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರ್ಪಡೆ ಮಾಡಬೇಕು, ಪ್ರತಿ ತಾಲೂಕು, ಜಿಲ್ಲಾ ಕೇಂದ್ರದಲ್ಲಿ ಸಮುದಾಯ ಭವನ ಕಲ್ಪಿಸಬೇಕು, 60 ವರ್ಷ ಮೇಲ್ಪಟ್ಟವರಿಗೆ ಸೂಕ್ತ ಮಾಸಾಶನ ನೀಡಬೇಕು ಎಂದು ಒತ್ತಾಯಿಸಿದರು.

ಆಶ್ರಯ ಸೇರಿದಂತೆ ಸರ್ಕಾರದ ವಸತಿ ಯೋಜನೆಗಳಡಿ ಸೂರು ಕಲ್ಪಿಸಬೇಕು. ಅಡುಗೆದಾರರು, ಅಡುಗೆ ಸಹಾಯಕರ ಮಕ್ಕಳಿಗೆ ವಿಶೇಷವಾದ ವಿದ್ಯಾರ್ಥಿ ವೇತನ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪ್ರೋತ್ಸಾಹಧನ, ಕೆಲವಾರು ಸೌಲಭ್ಯಗಳನ್ನು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಲ್ಲಿ ಒಂದು ಸ್ಥಾನ ಮೀಸಲಿಡುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಸಂಘ ಒತ್ತಾಯಿಸಿದ್ದು, ದಾವಣಗೆರೆ ಸಮಾವೇಶದ ಮೂಲಕ ಮತ್ತೆ ಒತ್ತಡ ಹೇರಲಿದ್ದೇವೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಕಿಶನ್ ರಾವ್‌ ಕುಲಕರ್ಣಿ, ಗೌರವಾಧ್ಯಕ್ಷ ಕಲ್ಯಾಣ ಜೋಷಿ, ಉಪಾಧ್ಯಕ್ಷ ಪ್ರವೀಣ ಕುಲಕರ್ಣಿ, ಜಿಲ್ಲಾಧ್ಯಕ್ಷ ಆರ್.ಗುರುರಾಜ, ಆರ್.ಪ್ರಸನ್ನ, ಕೆ.ರಾಜೇಶ್ವರಿ, ನಾಗರಾಜ ಎನ್.ಕುಲಕರ್ಣಿ, ಆರ್.ಪ್ರಸನ್ನ ಇತರರು ಇದ್ದರು.