ಸಾರಾಂಶ
ಯಲಬುರ್ಗಾ: ಸಹಕಾರಿ ರಂಗ ಬೆಳವಣಿಗೆ ಎಲ್ಲರ ಸಹಕಾರವಿದ್ದಾಗ ಮಾತ್ರ ಸಮಗ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಗುತ್ತಿಗೆದಾರ ಬಾಲಚಂದ್ರ ಸಾಲಭಾವಿ ಲಿಂಗನಬಂಡಿ ಹೇಳಿದರು.ಪಟ್ಟಣದಲ್ಲಿ ಕನಕದಾಸ ಸೌಹಾರ್ದ ಸಹಕಾರಿ ಸಂಘದ ಆರನೇ ಶಾಖೆ ನೂತನ ಯಲಬುರ್ಗಾ ಶಾಖಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಹಕಾರಿ ರಂಗದ ಎಲ್ಲ ಪ್ರತಿನಿಧಿಗಳು ನಿಸ್ವಾರ್ಥ ಸೇವಾ ಮನೋಭಾವದಿಂದ ದುಡಿದಾಗ ಸಹಕಾರಿ ಸಂಘ ತಾನಾಗಿಯೇ ಏಳ್ಗೆಯಾಗುತ್ತದೆ ಎಂದರು.
ಕನಕದಾಸ ಸೌಹಾರ್ದ ಸಹಕಾರಿ ಸಂಘ ಹನುಮಸಾಗರ ಸೇರಿದಂತೆ ವಿವಿಧೆಡೆ ಶಾಖೆಗಳನ್ನು ತೆರೆದು ಉತ್ತಮ ಕೆಲಸ ಮಾಡುತ್ತಿದೆ. ಅದರಂತೆ ನೂತನ ಯಲಬುರ್ಗಾ ಶಾಖೆ ಒಳ್ಳೆಯ ಕೆಲಸ ಮಾಡಿ ಇಡೀ ಜಿಲ್ಲೆಯಲ್ಲಿಯೇ ಉತ್ತಮವಾಗಿ ಕಾರ್ಯ ನಿರ್ವಹಿಸಿ ಜನರಿಗೆ ಮಾದರಿಯಾಗಲಿ ಎಂದು ಹೇಳಿದರು.ಮುಖಂಡ ಹನುಮಂತಪ್ಪ ಕುರಿಯವರ ಮಾತನಾಡಿ, ಸಹಕಾರ ಚಳವಳಿಯ ಜನಕ, ಸಹಕಾರಿ ರಂಗದ ಪಿತಾಮಹ ಸಿದ್ದನಗೌಡ ಪಾಟೀಲ ಕಣಗಿನಹಾಳ ಹೆಸರಿನಲ್ಲಿ ಸರ್ಕಾರ ಸಹಕಾರ ವಿಶ್ವವಿದ್ಯಾಲಯ ಆರಂಭಿಸಲು ಮುಂದಾಗಬೇಕು.
ಸಹಕಾರ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದರು.ಹಾಲುಮತ ಸಮಾಜದ ತಾಲೂಕು ಅಧ್ಯಕ್ಷ ವೀರನಗೌಡ ಪೋಲಿಸಪಾಟೀಲ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯಲ್ಲಿ ಆಡಳಿತ ನಡೆಸುವಂತಹವರು ಕರ್ತವ್ಯ ನಿಷ್ಠೆ ಹಾಗೂ ಪರಿಶುದ್ಧ ವ್ಯಕ್ತಿತ್ವ ಹೊಂದುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಅಳವಡಿಸಿಕೊಂಡು ನೂತನ ಶಾಖೆಯ ಸದಸ್ಯರು ಗ್ರಾಹಕರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಗ್ರಾಹಕರಿಗೊಂದಿಗೆ ವ್ಯವಹರಿಸುವತ್ತ ಮುಂದಾಗಬೇಕು ಎಂದರು.
ಸಂಸ್ಥಾನ ಹಿರೇಮಠದ ಪೀಠಾಧಿಪತಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀಧರ ಮುರುಡಿ ಹಿರೇಮಠದ ಪೀಠಾಧಿಪತಿ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹನುಮಸಾಗರ ಕೇಂದ್ರ ಕಚೇರಿ ಅಧ್ಯಕ್ಷ ಹನುಮಂತಪ್ಪ ಬಿಂಗಿ, ಉಪಾಧ್ಯಕ್ಷ ನಾಗರಾಜ ಹಕ್ಕಿ, ಸತ್ಯಪ್ಪ ರಾಜೂರು, ವ್ಯವಸ್ಥಾಪಕದ್ಯಾಮಣ್ಣ ಬಿಂಗಿ, ಹನುಮಂತಪ್ಪ ಕುರಿ, ಶಂಕ್ರಪ್ಪ ಬಾಗಲಿ, ಭರಮಪ್ಪ ಬಿಂಗಿ, ಡಾ.ಬಸವರಾಜ ಅಕ್ಕಿ, ಯರಗಪ್ಪ ಗಡೇಕಾರ, ಯಲಬುರ್ಗಾ ಶಾಖಾ ಅಧ್ಯಕ್ಷ ಶಿವು ರಾಜೂರು ಇದ್ದರು.