ಸಾರಾಂಶ
ಕುಕನೂರು: ಸಹಕಾರಿ ಕ್ಷೇತ್ರವು ಸರ್ಕಾರಕ್ಕೇ ಸೆಡ್ಡು ಹೊಡೆಯುವ ಪ್ರಮುಖ ಕ್ಷೇತ್ರವಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಪಟ್ಟಣದ ಎಪಿಎಂಸಿಯಲ್ಲಿ ಜರುಗಿದ ಸಹಕಾರಿ ಜಾಗೃತಿ ಸಮಾವೇಶದಲ್ಲಿ ಸಹಕಾರಿ ವಾರಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಹಕಾರಿ ರಂಗ ಈ ಭಾಗದಲ್ಲಿ ಬೆಳೆಯಬೇಕಿದೆ. ಮುಂಬೈ ಕರ್ನಾಟಕ ಭಾಗದಲ್ಲಿ ಸಹಕಾರಿ ಕ್ಷೇತ್ರ ಬಲಿಷ್ಠವಾಗಿದೆ ಎಂದು ಹೇಳಿದರು.
ಕಣಗಿನಹಾಳದಲ್ಲಿ ಮೊದಲ ಸೊಸೈಟಿ ಆರಂಭವಾಯಿತು. ಆದರೂ ಈ ಭಾಗದಲ್ಲಿ ಸೊಸೈಟಿಗಳ ಅಭಿವೃದ್ಧಿ ಆಗಿಲ್ಲ. ಸಹಕಾರ ರಂಗದಲ್ಲಿ ಸಾಧನೆ ಮಾಡಿದವರ ಮೊಮ್ಮಕ್ಕಳು ಸಹಕಾರಿ ಕ್ಷೇತ್ರದಲ್ಲಿಲ್ಲ. ಅವರು ಅಜ್ಜಂದಿರ ಹೆಸರು ಹೇಳುತ್ತಾ ದೊಡ್ಡ ದೊಡ್ಡ ಹುದ್ದೆ ಕೇಳುತ್ತಾ ಬರುತ್ತಿರುವುದು ವಿಪರ್ಯಾಸ. ಯುವಕರನ್ನು ಸಹಕಾರ ರಂಗ ಆಕರ್ಷಿತರನ್ನಾಗಿಸಬೇಕು. ಇದೊಂದು ಸಹಕಾರಿ ಕ್ಷೇತ್ರಕ್ಕೆ ದೊಡ್ಡ ಸವಾಲು. ಜಮೀನ್ದಾರರಿಗೆ ಮಾತ್ರ ಸಹಕಾರಿ ಕ್ಷೇತ್ರ ಸೀಮಿತವಾಗಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಕಾರಿ ಕ್ಷೇತ್ರ ತಲುಪಬೇಕಿದೆ. ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ಬಗ್ಗೆ ಧ್ವನಿ ಎತ್ತಲಾಗಿದೆ ಎಂದರು.
ಖಾಸಗಿ ಕ್ಷೇತ್ರ ರಕ್ತ ಹೀರಿ ಮಾಂಸ ತಿನ್ನುವ ರೀತಿ ಸಾಲಗಾರರನ್ನು ಹಿಂಡುತ್ತಿದೆ. ಆದರೆ ಅದೇ ಸಹಕಾರಿ ಕ್ಷೇತ್ರ ಸಾಲಗಾರರ ಜತೆಯಿದ್ದು ಅವರ ಸಹಕಾರದಲ್ಲಿದೆ. ಸಹಕಾರಿ ಕ್ಷೇತ್ರ ಖಾಸಗಿಯವರ ಹಿಡಿತದಿಂದ ಶಕ್ತಿಯುತವಾಗಿ ಉಳಿಯುತ್ತಿಲ್ಲ. ಇದು ದೂರಾಗಬೇಕು ಎಂದರು.
ಸರ್ಕಾರದಿಂದ ಮನ್ನಾ ಆಗಿರುವ ದುಡ್ಡು ಸಂಘಗಳಿಗೆ ಜಮೆ ಆಗಲು ವರ್ಷಗಳೇ ಬೇಕಾಗುತ್ತಿದೆ. ಹಾಗಾಗಿ ಪತ್ತಿನ ಸಹಕಾರಿ ಸಂಘಗಳು ಅಶಕ್ತವಾಗಿವೆ. ಸಹಕಾರಿ ಕ್ಷೇತ್ರದಲ್ಲಿ ಮೂರು ನಿರ್ಣಗಳಾಗಬೇಕಿವೆ. ಅವು ಸಾಮಾಜಿಕ ನ್ಯಾಯ ಹಾಗೂ ಯುವಕರನ್ನು ಸಹಕಾರಿ ಕ್ಷೇತ್ರದತ್ತ ಆಕರ್ಷಿಸಿಸುವುದು. ಪಂಚಾಯಿತಿಯಲ್ಲಿ ಸಹಕಾರಿ ಸಂಘಗಳಿಗೆ ಪ್ರಾತಿನಿಧ್ಯ ನೀಡುವುದು. ಸರಿಯಾದ ಸಮಯಕ್ಕೆ ಕೊಡಬೇಕಾದ ಸಾಲಮನ್ನಾ, ಬಡ್ಡಿ ಮನ್ನಾ ಹಣ ನೀಡುವ ಕಾರ್ಯ ಆಗಬೇಕು ಎಂದರು.
ಬಾಕಿ ಇರುವ ಬಿಲ್ : ಸಹಕಾರ ಇಲಾಖೆಗೆ ಸರ್ಕಾರದಿಂದ ಬರಬೇಕಾದ ಬಾಕಿ ಇರುವ ಹಣವನ್ನು ಒಂದೇ ಹಂತದಲ್ಲಿ ಈ ಸಲ ಬಜೆಟ್ನಲ್ಲಿ ನೀಡಲು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಸಿಎಂ ಅವರಿಗೆ ಸಲಹೆ ನೀಡಲಿ. ಇದರಿಂದ ಸಹಕಾರ ಸಂಘಗಳ ಬಲವರ್ಧನೆ ಸಾದ್ಯ ಎಂದು ಸಚಿವ ಎಚ್.ಕೆ ಪಾಟೀಲ್ ಹೇಳಿದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ್ ಮಾತನಾಡಿ, ಅಪ್ರಾಮಾಣಿಕತೆ ಸಹಕಾರಿ ಕ್ಷೇತ್ರದಲ್ಲಿ ಸದ್ಯ ಕಾಲಿಟ್ಟಿದೆ. ಇದು ಹೋಗಬೇಕು. ಸಹಕಾರಿ ಸಂಘದಲ್ಲಿ ತೆಗೆದುಕೊಂಡ ಸಾಲವನ್ನು ರೈತರು ಸಹ ಕಟ್ಟಬೇಕು. ಸಂಘಗಳು ಸಾಲಕ್ಕೆ ಸರ್ಕಾರದ ಮೊರೆ ಹೋಗಬಾರದು. ಈಗಿನ ಸಹಕಾರಿ ಸಂಘದ ಸಾಲದಲ್ಲಿ ರೈತರು ಶೇ.3ರನ್ನಾದರೂ ಸಾಲ ಕಟ್ಟಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಆರ್ಥಿಕ ಆಲೋಚನೆಗಾರ. ಅವರಿಗೂ ಮನಸ್ಸಿಲ್ಲದೆ ಗ್ಯಾರಂಟಿ ನೀಡಿದ್ದಾರೇನೋ ಅನ್ನುವ ಹಾಗಾಗಿದೆ. ಆರ್ಥಿಕ ಜ್ಞಾನ ಸಿದ್ದರಾಮಯ್ಯ ಅವರಿಗೆ ಬಹಳ ಇದೆ. ರಾಯರಡ್ಡಿ ಸಹ ಅಭಿವೃದ್ಧಿ ಕಾರ್ಯ ಮಾಡುವಲ್ಲಿ ನಿಸ್ಸೀಮರು. ಸಹಕಾರಿ ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯ ಆಗಲಿ ಎಂದರು.