ಸುಂಟಿಕೊಪ್ಪ: ಜನ್ಮ ಸಾರ್ಥಕವಾಗಲು ಸಂಸ್ಕಾರಯುತ ಜೀವನ ಮುಖ್ಯ ಎಂದು ಅರಸಿಕೇರೆ ಹರ‍್ನಳ್ಳಿ ಶ್ರೀ ಕೋಡಿಮಠದ ಶ್ರೀ ಡಾ.ಶಿವಾನಂದ ಶಿವಯೋಗಿ ಮಹಾಸ್ವಾಮೀಜಿ ಹೇಳಿದರು.

ಶುಕ್ರವಾರ ಜಂಬೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ೧೨ನೇ ವರ್ಷದ ಪುನರ್‌ತಿಷ್ಠಾಪನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಮನುಕುಲ ಶ್ರೇಷ್ಠವಾದುದು ದೇವರ ಸಾಕ್ಷ್ಯಾತ್ಕಾರದಿಂದ ಜೀವನದಲ್ಲಿ ನೆಮ್ಮದಿ ಸಮೃದ್ಧಿ ಸಿಗಲಿದೆ. ಗಳಿಕೆಯ ಕಡೆ ಹೆಚ್ಚಿನ ಚಿಂತನೆ ನಡೆಸದೆ ಸಂಸ್ಕಾರ ಸಹಿತವಾದ ಸ್ವಾರ್ಥ ರಹಿತ ಬದುಕನ್ನು ಕಟ್ಟಿಕೊಳ್ಳಬೇಕು. ದೇವಾಲಯ ಶ್ರದ್ಧಾ ಭಕ್ತಿಯ ಕೇಂದ್ರವೆಂದು ಕಂಡುಕೊಳ್ಳಬೇಕು. ಹುಟ್ಟಿದಾಗ ಮಗು ಆಳುತ್ತದೆ. ಕುಟುಂಬಸ್ಥರು ನಗುತ್ತಾರೆ. ಹಾಗೆಯೇ ಮಗು ಬೆಳೆಯುತ್ತಿದ್ದಂತೆ ಇನ್ನೊಂದು ಮಗು ಜನಿಸಿದ ಕೂಡಲೇ ನಗುತ್ತಾನೆ. ಮನುಷ್ಯ ಸ್ವಾರ್ಥಕ್ಕಾಗಿ ಜೀವನ ನಡೆಸದೆ ಪರ ಹಿತಕ್ಕಾಗಿಯೂ ಬದುಕನ್ನು ಸಖ್ಯಗೊಳಿಸಬೇಕು. ದೇಗುಲ, ಮಠ ಮಂದಿರ ಮನಷ್ಯನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು. ಧಾರ್ಮಿಕ ಪ್ರವಚನ ನೀಡಿದ ಶನಿವಾರಸಂತೆ ಮುದ್ದಿನಕಟ್ಟೆ ಮಠದ ಶ್ರೀ.ಅಧೀನವ ಸಿದ್ಧಲಿಂಗಾ ಶಿವಚಾರ್ಯ ಸ್ವಾಮೀಜಿ ಮಾತನಾಡಿ ಮೊದಲು ಮಾನವರಾಗಿ ಬದುಕಲು ಕಲಿಯಬೇಕು. ಪಾಪ ಕಾರ್ಯದಲ್ಲಿ ಅಸಕ್ತಿ ಹೊಂದದೆ ಪುಣ್ಯ ಕೈಂಕರ್ಯದಲ್ಲಿ ಬದುಕಿನ ಮೌಲ್ಯಗಳನ್ನು ರೂಢಿಸಿಕೊಂಡು ಶಾಂತಿ ನೆಮ್ಮದಿಯ ಸಗ್ಧತಿಯ ಕಡೆಗೆ ಬದುಕನ್ನು ಕೊಂಡೊಯ್ಯಬೇಕು ಮಹಿಳೆಯರು ಮಕ್ಕಳಿಗೆ ಸಂಸ್ಕೃತಿ ಆಚಾರ ವಿಚಾರವನ್ನು ಕಲಿಸಲು ಮುಂದಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್, ಪ್ರತಿ ಊರಿನಲ್ಲಿ ದೇವಾಲಯ ಸ್ಥಾಪನೆಯಾಗಬೇಕು ನಮ್ಮ ಆಚಾರ ವಿಚಾರ ಸಂಸ್ಕೃತಿಯನ್ನು ಉಳಿಸಲು ಮಠಾಧೀಶರುಗಳೊಂದಿಗೆ ಕೈಜೋಡಿಸಬೇಕು. ಹಿಂದೂ ಧರ್ಮದ ಬಗ್ಗೆ ಮಕ್ಕಳಲ್ಲಿ ಆರಿವು ಮೂಡಿಸುವ ಕಾರ್ಯವಾಗಬೇಕು, ಹಾಗೆಯೇ ಜಂಬೂರು ಗ್ರಾಮದ ಬಸವೇಶ್ವರ ದೇವಸ್ಥಾನ ಅಭಿವೃದ್ದಿಯಾಗಲೆಂದು ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶ್ರೀ ಮಲಿಕಾರ್ಜುನ ಸ್ವಾಮೀಜಿ ಮಾತನಾಡಿ ಅಂತರಂಗದ ದಾರಿದ್ರ್ಯ ಹೋಗಲಾಡಿಸುವ ಆತ್ಮಸ್ಥೈರ್ಯ ಬೆಳೆಸಿಕೊಂಡು ಸಮಾಜಕ್ಕೆ ದೇಶಕ್ಕೆ ಪ್ರತಿಯೊಬ್ಬರೂ ತನ್ನ ಕೊಡುಗೆಯನ್ನು ನೀಡಬೇಕೆಂದು ಕರೆ ನೀಡಿದರು. ವೇದಿಕೆಯಲ್ಲಿ ಮಾದಾಪುರದ ವಿಶ್ವ ಶಾಂತಿ ನಿಲಯದ ಸ್ವಾಮಿ ಸೋಮನಾಥ ನಂದಪುರಿ, ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ, ಜಿ.ಪಂ.ಮಾಜಿ ಸದಸ್ಯ ಟಿ.ಪಿ.ಸಂದೇಶ, ಮಾದಾಪುರ ಗ್ರಾ.ಪಂ. ನಿಕಟಪೂರ್ವ ಉಪಾಧ್ಯಕ್ಷ ಸುರೇಶ್‌ಬಾವೆ, ಸದಸ್ಯ ಪಿ.ಆಡಿ.ಅಂತೋಣಿ, ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಸ್.ಕಾವೇರಪ್ಪ, ಉಪಾಧ್ಯಕ್ಷ ಪಿ.ಎಸ್.ರತೀಶ, ಪ್ರಧಾನ ಕಾರ್ಯದರ್ಶಿ ಮಂಜು, ಕಾರ್ಯದರ್ಶಿ ತಿಲಕ್ ಕುಮಾರ್, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಜೆ.ಜೆ. ಸೇರಿದಂತೆ ಮತ್ತಿತರರು ಇದ್ದರು.

ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ೧೨ನೇ ವರ್ಷದ ಪುನಾರ್ ಪ್ರತಿಷ್ಠಾಪನಾದ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.