ಕನ್ನಡಪ್ರಭ ವಾರ್ತೆ ನವದೆಹಲಿ
ದೆಹಲಿ ಪ್ರವಾಸದಲ್ಲಿರುವ ಕರ್ನಾಟಕ ಕಾಂಗ್ರೆಸ್ನ ಹಿರಿಯ ಶಾಸಕರು ಅಯೋಧ್ಯೆಯ ರಾಮಮಂದಿರಕ್ಕೆ ತೆರಳಿ, ರಾಮಲಲ್ಲಾನ ದರ್ಶನ ಪಡೆದಿದ್ದಾರೆ.ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಭೇಟಿ ಸಾಧ್ಯವಾಗದ ಕಾರಣ 15 ಮಂದಿ ಶಾಸಕರು ಬುಧವಾರ ಬೆಳಗ್ಗೆ 8 ಗಂಟೆಗೆ ವಿಮಾನದ ಮೂಲಕ ಅಯೋಧ್ಯೆಗೆ ತೆರಳಿ, ದೇವರ ದರ್ಶನ ಪಡೆದರು. ದರ್ಶನ ಮುಗಿಸಿ ಮತ್ತೆ ದೆಹಲಿಗೆ ವಾಪಸ್ ಆದರು.
ಬಳಿಕ ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಟಿ.ಬಿ.ಜಯಚಂದ್ರ, ನಾವು 15 ಮಂದಿ ಶಾಸಕರು ಅಯೋಧ್ಯೆಯ ಶ್ರೀರಾಮನ ದರ್ಶನ ಪಡೆದಿದ್ದೇವೆ. ಅಯೋಧ್ಯೆಯ ಶ್ರೀರಾಮನಿಗೂ, ಕರ್ನಾಟಕದ ಹನುಮಾನನಿಗೂ ಹತ್ತಿರದ ಸಂಬಂಧವಿದೆ. ಅಯೋಧ್ಯೆಯ ರಾಮನ ವಿಗ್ರಹ ಕೆತ್ತಿದ್ದು, ನಮ್ಮ ಕನ್ನಡಿಗ ಅರುಣ್ ಯೋಗಿರಾಜ್ ಎಂದರು.ಹೈ ಭೇಟಿ ವಿಶ್ವಾಸ:ಗುರುವಾರ ಮತ್ತಷ್ಟು ಶಾಸಕರು ದೆಹಲಿಗೆ ಬರುವವರಿದ್ದಾರೆ. ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ ಸೇರಿ ಹೈಕಮಾಂಡ್ ನಾಯಕರ ಭೇಟಿಗೆ ಕಾಯುತ್ತಿದ್ದೇವೆ. ಭೇಟಿಗೆ ಅವಕಾಶ ಸಿಗುವ ವಿಶ್ವಾಸವಿದೆ.
-ಟಿ.ಬಿ.ಜಯಚಂದ್ರ, ಶಾಸಕ.