ಕಾಲುವೆಗೆ ನೀರು ಹರಿಸಲು ಸಲಹಾ ಸಭೆಯಲ್ಲಿ ನಿರ್ಧಾರ

| Published : Jul 18 2024, 01:31 AM IST

ಸಾರಾಂಶ

ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಮುಂಗಾರು ಹಂಗಾಮಿಗೆ ಜು.17 ಬುಧವಾರದಿಂದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನೀರು ಹರಿಸಲು ಐಸಿಸಿ ಅಧ್ಯಕ್ಷರು ಹಾಗೂ ಸಚಿವ ಆರ್.ಬಿ. ತಿಮ್ಮಾಪೂರ ತೀರ್ಮಾನ ತೆಗೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಹುಣಸಗಿ/ಶಹಾಪುರ

ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಮುಂಗಾರು ಹಂಗಾಮಿಗೆ ಜು.17 ಬುಧವಾರದಿಂದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನೀರು ಹರಿಸಲು ಐಸಿಸಿ ಅಧ್ಯಕ್ಷರು ಹಾಗೂ ಸಚಿವ ಆರ್.ಬಿ. ತಿಮ್ಮಾಪೂರ ತೀರ್ಮಾನ ತೆಗೆದುಕೊಂಡಿದ್ದಾರೆ.

ಕೊಪ್ಪಳ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಜಿಲ್ಲೆಯಾದ್ಯಂತ ಅಚ್ಚುಕಟ್ಟು ಪ್ರದೇಶಕ್ಕೆ 120 ದಿನಗಳ ಕಾಲ ಕೃಷಿ ಬಳಕೆಗೆ ನೀರು ಹರಿಸಲು ಕನಿಷ್ಠ 80 ಟಿಎಂಸಿ ನೀರು ಬೇಕು. ಸದ್ಯ ಜಲಾಶಯದಲ್ಲಿ 517.99 ಮೀ, ನೀರು ಇದ್ದು, ಒಂದು ಲಕ್ಷ ಕ್ಯುಸೆಕ್ ಒಳಹರಿವು ಇದೆ. 123 ಟಿಎಂಸಿ ಪೈಕಿ, 97 ಟಿಎಂಸಿ ನೀರು ಆಲಮಟ್ಟಿಯಲ್ಲಿ ಸಂಗ್ರಹವಿದೆ. ಹಾಗೂ ನಾರಾಯಣಪುರ ಜಲಾಶಯದಲ್ಲಿ 21.26 ಟಿಎಂಸಿ ನೀರು ಸಂಗ್ರಹವಿದೆ.

- ರೈತರ ನಿರೀಕ್ಷೆ ಹೆಚ್ಚಸಿದ ಐಸಿಸಿ :

ಮಂಗಳವಾರ ನಡೆದ ಸಭೆಯಲ್ಲಿ ರೈತರ ಅನುಕೂಲಕ್ಕಾಗಿ ಬುಧವಾರದಿಂದಲೇ ಕಾಲುವೆಗೆ ನೀರು ಹರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಒಳಹರಿವು ಇರುವವರೆಗೆ ಯಾವುದೇ ವಾರಾಬಂಧಿ ಇರುವದಿಲ್ಲ. ಒಳ ಹರಿವು ಕಡಿಮೆ ಆದಾಗ, ಮತ್ತೊಮ್ಮೆ ತುರ್ತು ಸಭೆ ನಡೆಸಿ, ಅವಶ್ಯಕತೆ ಉಂಟಾದರೆ ಮಾತ್ರ ಮುಂಗಾರಿಗೆ ವಾರಾಬಂಧಿ ಅನುಸರಿಸಲಾಗುವುದು ಎಂಬ ತೀರ್ಮಾನಕ್ಕೆ ಬರಲಾಗಿದೆ.

ಸಭೆಯಲ್ಲಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ, ಶಿವಾನಂದ ಪಾಟೀಲ್, ಸಂಸದರಾದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಚೆನ್ನಾರೆಡ್ಡಿ ತುನ್ನೂರು, ರಾಜಾ ವೇಣುಗೋಪಾಲ ನಾಯಕ, ಮಾನಪ್ಪ ವಜ್ಜಲ್, ವ್ಯವಸ್ಥಾಪಕ ನಿರ್ದೇಶಕರಾದ ಕೆ.ಪಿ. ಮೋಹನರಾಜ, ನಾಲ್ಕು ವಲಯಗಳ ಮುಖ್ಯ ಅಭಿಯಂತರರು ಸೇರಿದಂತೆ ವಿಜಯಪುರ-ಬಾಗಲಕೋಟೆ, ಕಲಬುರಗಿ ಜಿಲ್ಲೆಗಳ ಶಾಸಕರುಗಳು ಸಭೆಯಲ್ಲಿ ಭಾಗವಹಿಸಿದ್ದರು.