ಪುತ್ತೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಉಪ್ಪಿನಂಗಡಿಯಲ್ಲಿ ಶಾಸಕ ಅಶೋಕ್ ರೈ ವಿರುದ್ಧ ರಾಜಕೀಯ ಹೇಳಿಕೆ ನೀಡಿ ಲೇವಡಿ ಮಾಡಿದ್ದರು. ಇದಕ್ಕೆ ಶಾಸಕರು ಕೂಡ ರಾಜಕೀಯ ಹೇಳಿಕೆ ಮೂಲಕ ಪ್ರತ್ಯುತ್ತರ ನೀಡಿದ್ದಾರೆಯೇ ಹೊರತು ಎಲ್ಲೂ ಕೂಡ ಅವರು ದಲಿತ ಸಮುದಾಯವನ್ನು ನಿಂದಿಸುವ ಹೇಳಿಕೆ ನೀಡಿಲ್ಲ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಬಾಬು ಮರಿಕೆ ತಿಳಿಸಿದ್ದಾರೆ.

ಅವರು ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಶಾಸಕ ಅಶೋಕ್ ರೈ ಅವರು ತಮ್ಮ ಮಾತಿನಲ್ಲಿ ಎಲ್ಲೂ ದಲಿತ ಶಬ್ಧವನ್ನು ಉಲ್ಲೇಖ ಮಾಡಿಲ್ಲ. ನಾಯಿಗಳು ಒಳ್ಳೆಯವರನ್ನು ಕಂಡರೂ ಬೊಗಳುತ್ತವೆ. ಕೆಟ್ಟವರನ್ನು ಕಂಡರೂ ಬೊಗಳುತ್ತವೆ. ಅದಕ್ಕೆ ಉತ್ತರ ನೀಡಬೇಕಾಗಿಲ್ಲ. ನಾರಾಯಣ ಸ್ವಾಮಿ ಅವರು ನಾಲಾಯಕ್ ಸ್ವಾಮಿ ಎಂದು ಅಶೋಕ್ ರೈ ಹೇಳಿದ್ದಾರೆ. ಈ ಮಾತು ಚಲವಾದಿ ನಾರಾಯಣ ಸ್ವಾಮಿ ಅವರು ಶಾಸಕರ ವಿರುದ್ಧ ನೀಡಿರುವ ರಾಜಕೀಯ ಹೇಳಿಕೆಗೆ ಪ್ರತಿ ಹೇಳಿಕೆಯಾಗಿದೆ. ಇಲ್ಲಿ ಎಲ್ಲೂ ದಲಿತ ಸಮುದಾಯದ ಹೆಸರು ಉಲ್ಲೇಖಿಸಿಲ್ಲ. ನಾರಾಯಣ ಸ್ವಾಮಿ ಪ್ರತಿಪಕ್ಷದ ನಾಯಕ ಎಂಬ ಕಾರಣಕ್ಕೆ ಅವರನ್ನು ಪುತ್ತೂರಿನ ಬಿಜೆಪಿಗರು ಭಾಷಣ ಮಾಡಲು ಕರೆದಿದ್ದರೇ ಹೊರತು ದಲಿತ ಮುಖಂಡ ಎಂಬ ಕಾರಣಕ್ಕಲ್ಲ. ಅದೇ ರೀತಿ ತಮ್ಮ ವಿರುದ್ಧ ಮಾತನಾಡಿದ ಕಾರಣ ಶಾಸಕರು ಕೂಡ ರಾಜಕೀಯ ಉತ್ತರ ನೀಡಿದ್ದಾರೆ. ಅವರು ಎಲ್ಲಿಯೂ ದಲಿತ ಶಬ್ಧ ಉಲ್ಲೇಖ ಮಾಡಿಲ್ಲ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಹಿರಿಯ ಮುಖಂಡ ಸೋಮನಾಥ್, ನಾಯಕರಾದ ಮುಕೇಶ್ ಕೆಮ್ಮಿಂಜೆ, ಪ್ರಕಾಶ್ ಹಾರಾಡಿ, ರಾಮಣ್ಣ ಪಿಲಿಂಜ ಉಪಸ್ಥಿತರಿದ್ದರು.