ಗೊಬ್ಬರಕ್ಕಾಗಿ ಕೈ ಹರಿದುಕೊಂಡ ರೈತ

| Published : Aug 09 2025, 12:01 AM IST

ಸಾರಾಂಶ

ಮಂಗಳೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರು ಪರದಾಡಿದರು. ಬೆಳಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸರದಿಯಲ್ಲಿ ನಿಂತಿದ್ದರು. ಹಣ ಕಟ್ಟುವ ಕೌಂಟರ್‌ ಬಳಿ ಗದ್ದಲ ಏರ್ಪಟ್ಟಿದ್ದರಿಂದ ಹನುಮಂತಪ್ಪ ಆಟದ ಎಂಬುವವರ ಕೈ ಕೌಂಟರ್ ಕಿಟಕಿಗೆ ಸಿಲುಕಿ ಹರಿದು ರಕ್ತ ಚೆಲ್ಲಿತು.

ಕುಕನೂರು:

ತಾಲೂಕಿನ ಮಂಗಳೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರು ಪರದಾಡಿದರು. ಬೆಳಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸರದಿಯಲ್ಲಿ ನಿಂತಿದ್ದರು. ಹಣ ಕಟ್ಟುವ ಕೌಂಟರ್‌ ಬಳಿ ಗದ್ದಲ ಏರ್ಪಟ್ಟಿದ್ದರಿಂದ ಹನುಮಂತಪ್ಪ ಆಟದ ಎಂಬುವವರ ಕೈ ಕೌಂಟರ್ ಕಿಟಕಿಗೆ ಸಿಲುಕಿ ಹರಿದು ರಕ್ತ ಚೆಲ್ಲಿತು.

ಬೆಂಬಿಡದೆ ಸುರಿದು ಮಳೆಗೆ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಅತೀ ತೇವಾಂಶದಿಂದ ಬೆಳೆ ಕೆಂಪಾಗಿವೆ. ಯೂರಿಯಾ ಗೊಬ್ಬರ ಹಾಕಿದರೆ ಬೆಳೆ ಉಳಿಯುತ್ತವೆ ಎಂದು ರೈತರು ಗೊಬ್ಬರಕ್ಕಾಗಿ ಮುಗಿ ಬೀಳುತ್ತಿದ್ದಾರೆ.

90 ಟನ್ ಹಂಚಿಕೆ:

ಕುಕನೂರು ಹಾಗೂ ಯಲಬುರ್ಗಾ ತಾಲೂಕಿಗೆ 90 ಟನ್ ಯೂರಿಯಾ ಬಂದಿದ್ದು, ಅವಳಿ ತಾಲೂಕಿನ ವಿವಿಧೆಡೆ ಹಂಚಿಕೆ ಆಗುತ್ತಿದೆ.ಯೂರಿಯಾ ಗೊಬ್ಬರವನ್ನು ಯಾರಿಗೂ ತೊಂದರೆ ಆಗದಂತೆ ಸಮರ್ಪಕವಾಗಿ ವಿತರಿಸಬೇಕು. ಗೊಬ್ಬರ ಸಿಗುವುದಿಲ್ಲ ಎಂದು ಗೊಬ್ಬರಕ್ಕಾಗಿ ರೈತರು ಮುಗಿಬೀಳುತ್ತಿದ್ದಾರೆ. ಅಗತ್ಯವಾದ ಗೊಬ್ಬರ ತರಿಸಿ ನೀಡಬೇಕು.

ಅಂದಪ್ಪ ಹುರುಳಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ, ಇಟಗಿ ಗ್ರಾಮ