ತನ್ನ ಪ್ರಾಣವನ್ನು ಲೆಕ್ಕಿಸದೆ ಹೋರಾಡಿ ರಾಜನಿಷ್ಠೆ ಮೆರೆದ ಓಬವ್ವ: ಡಾ ಎಚ್.ಎಲ್. ನಾಗರಾಜು

| Published : Nov 11 2024, 11:46 PM IST

ತನ್ನ ಪ್ರಾಣವನ್ನು ಲೆಕ್ಕಿಸದೆ ಹೋರಾಡಿ ರಾಜನಿಷ್ಠೆ ಮೆರೆದ ಓಬವ್ವ: ಡಾ ಎಚ್.ಎಲ್. ನಾಗರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಓಬವ್ವ ಯಾವುದೇ ವಿದ್ಯಾಭ್ಯಾಸ ಅಥವಾ ಹುದ್ದೆ ಪಡೆದವಳಲ್ಲ. ಆದರೂ ತನ್ನ ಪತಿ ಕರ್ತವ್ಯವನ್ನು ತನ್ನದೆಂದು ಭಾವಿಸಿ ವಿರಾವೇಶದಿಂದ ಶತ್ರು ನಾಶ ಮಾಡಿದ ಆಕೆ ಸಾಧನೆ ಎಲ್ಲರೂ ಮೆಚ್ಚುವಂತದ್ದು. ಸಾಮಾನ್ಯಳಾಗಿ ಹುಟ್ಟಿ ಅಸಾಮಾನ್ಯ ಸಾಧನೆ ಮಾಡಿದ ಓಬವ್ವ ಈ ನಾಡಿನ ಎಲ್ಲಾ ಹೆಣ್ಣು ಮಕ್ಕಳಿಗೂ ಸ್ಫೂರ್ತಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರತಿಯೊಬ್ಬ ಹೆಣ್ಣುಮಕ್ಕಳು ವೀರ ವನಿತೆ ಒನಕೆ ಓಬವ್ವನ ಆದರ್ಶಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಅವರಂತೆ ಧೈರ್ಯಶಾಲಿಯಾಗಿ ಬದುಕಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವೀರವನಿತೆ ಒನಕೆ ಓಬವ್ವ ಜಯಂತಿಯಲ್ಲಿ ಓಬವ್ವ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

18 ನೇ ಶತಮಾನದಲ್ಲಿ ಒಬ್ಬ ಪ್ರಸಿದ್ಧ ಮಹಿಳೆಯಾಗಿ ಕನ್ನಡ ನಾಡಿನ ಸ್ವಾಭಿಮಾನವನ್ನು ಎತ್ತಿಹಿಡಿದ ಒನಕೆ ಓಬವ್ವ ಸೇರಿದಂತೆ ಅನೇಕ ಮಹಾನೀಯರ ಇತಿಹಾಸವನ್ನು ಯಾರು ಮರೆಯಬಾರದು ಎಂದರು.

ಚಿತ್ರದುರ್ಗದ ಮದಕರಿ ನಾಯಕ ಆಳ್ವಿಕೆ ವೇಳೆ ಕೋಟೆಯನ್ನು ಹೈದರಾಲಿ ಸೈನ್ಯ ಸುತ್ತುವರೆದು ಆಕ್ರಮಣ ಮಾಡುವ ವೇಳೆ ವೈರಿಗಳನ್ನು ಧೈರ್ಯದಿಂದ ಮೆಟ್ಟಿನಿಂತವರು ಒನಕೆ ಓಬವ್ವ ಕೋಟೆ ಕಾವಲುಗಾರ ಕಹಳೆ ಮದ್ದ ಹನುಮಪ್ಪನ ಪತ್ನಿಯಾಗಿ ಶತ್ರುಗಳನ್ನು ಸದೆಬಡಿಯಲು ತನ್ನ ಪ್ರಾಣವನ್ನು ಲೆಕ್ಕಿಸದೆ ಹೋರಾಡಿ ರಾಜನಿಷ್ಠೆ ಮೆರೆದರು ಎಂದರು.

ಓಬವ್ವ ಯಾವುದೇ ವಿದ್ಯಾಭ್ಯಾಸ ಅಥವಾ ಹುದ್ದೆ ಪಡೆದವಳಲ್ಲ. ಆದರೂ ತನ್ನ ಪತಿ ಕರ್ತವ್ಯವನ್ನು ತನ್ನದೆಂದು ಭಾವಿಸಿ ವಿರಾವೇಶದಿಂದ ಶತ್ರು ನಾಶ ಮಾಡಿದ ಆಕೆ ಸಾಧನೆ ಎಲ್ಲರೂ ಮೆಚ್ಚುವಂತದ್ದು. ಸಾಮಾನ್ಯಳಾಗಿ ಹುಟ್ಟಿ ಅಸಾಮಾನ್ಯ ಸಾಧನೆ ಮಾಡಿದ ಓಬವ್ವ ಈ ನಾಡಿನ ಎಲ್ಲಾ ಹೆಣ್ಣು ಮಕ್ಕಳಿಗೂ ಸ್ಫೂರ್ತಿಯಾಗಿದ್ದಾರೆ ಎಂದರು.

ಬೆಂಗಳೂರು ಶ್ರೀಶಾರದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಟಿ.ಬಿ.ಅನುಸೂಯ ಹೊಂಬಾಳೆ ಮಾತನಾಡಿ, ಚಿನ್ನಪ್ಪ ಹಾಗೂ ಚಿನ್ನಮ್ಮ ದಂಪತಿಗಳ ಸಾಮಾನ್ಯ ಹೆಣ್ಣು ಮಗಳಾಗಿ ಜನಿಸಿದ ಓಬವ್ವ ಹೈದರಾಲಿ ಸೈನ್ಯವನ್ನು ತನ್ನ ಮನೆಯ ಒನಕೆಯನ್ನು ಅಸ್ತ್ರವಾಗಿ ಉಪಯೋಗಿಸಿ ಶತ್ರುಗಳ ರುಂಡ ಚೆಂಡಾಡಿದ ಈಕೆಯ ಧೈರ್ಯ, ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ ಹಾಗೂ ಬದ್ಧತೆ ಮೆರೆದು ಇಂದು ಚರಿತ್ರೆಯಲ್ಲಿ ಹೆಸರಾಗಿದ್ದಾಳೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಪಕ ಡಾ.ಕೃಷ್ಣೆಗೌಡ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಕೀಲಾರ ಕೃಷ್ಣೆಗೌಡ, ಕಸಾಪ ನಗರ ಘಟಕ ಅಧ್ಯಕ್ಷೆ ಸುಜಾತ ಕೃಷ್ಣ, ಜೈ ಕರ್ನಾಟಕ ಪರಿಷತ್ ನ ಮುಖ್ಯ ಸಂಚಾಲಕ ನಾರಾಯಣ್, ಅನುಪಮಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.