ಸಾರಾಂಶ
ಕಳೆದ ನಾಲ್ಕೈದು ದಿನಗಳ ಹಿಂದೆ ಹೆದ್ದಾರಿ ರಸ್ತೆಯಲ್ಲಿ ಸಂಚರಿಸುವ ಯಾವುದೋ ವಾಹನಕ್ಕೆ ಸಿಲುಕಿ ಗಾಯಗೊಂಡ ನಂತರ ಬಿದಿರಿನ ಪೊದೆಯೊಳಗೆ ಹೋಗಿರುವ ಈ ಚಿರತೆ ಚೇತರಿಸಿಕೊಳ್ಳಲಾರದೆ ಸಾವನ್ನಪ್ಪಿರಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಹೊರವಲಯ ಬಳಪದ ಮಂಟಿಕೊಪ್ಪಲು ಗ್ರಾಮದ ಸಮೀಪ ಮಾಗಡಿ- ಜಲಸೂರು ರಾಜ್ಯ ಹೆದ್ದಾರಿ ಬದಿಯ ಬಿದಿರಿನ ಪೊದೆಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಒಂದೂವರೆ ವರ್ಷ ಪ್ರಾಯದ ಹೆಣ್ಣು ಚಿರತೆ ಕಳೇಬರ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.ಸತ್ತು ಬಿದ್ದಿದ್ದ ಚಿರತೆ ಕಳೆಬರವನ್ನು ಕಂಡ ಸ್ಥಳೀಯರು ಭಯಭೀತರಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡುತ್ತಿದ್ದಂತೆ ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಕಳೆದ ನಾಲ್ಕೈದು ದಿನಗಳ ಹಿಂದೆ ಹೆದ್ದಾರಿ ರಸ್ತೆಯಲ್ಲಿ ಸಂಚರಿಸುವ ಯಾವುದೋ ವಾಹನಕ್ಕೆ ಸಿಲುಕಿ ಗಾಯಗೊಂಡ ನಂತರ ಬಿದಿರಿನ ಪೊದೆಯೊಳಗೆ ಹೋಗಿರುವ ಈ ಚಿರತೆ ಚೇತರಿಸಿಕೊಳ್ಳಲಾರದೆ ಸಾವನ್ನಪ್ಪಿರಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.ಚಿರತೆ ಕಳೆಬರವನ್ನು ತಾಲೂಕಿನ ಹೊನ್ನಬೆಟ್ಟದ ಹೊಸೂರು ಬಳಿ ಅರಣ್ಯ ಇಲಾಖೆಯ ಡಿಪೋಗೆ ರವಾನಿಸಿದ ಅಧಿಕಾರಿಗಳು, ನ್ಯಾಯಾಲಯದ ಅನುಮತಿ ಪಡೆದ ಬಳಿಕ ಪಶು ವೈದ್ಯರನ್ನು ಸ್ಥಳಕ್ಕೆ ಕರೆಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದರು. ಬಳಿಕ ಇಲಾಖೆ ನಿಯಮಾನುಸಾರ ಚಿರತೆಯ ಕಳೇಬರವನ್ನು ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲ ಸುಡಲಾಯಿತು.
ಈ ವೇಳೆ ಎಸಿಎಫ್ ಶಿವರಾಮು, ವಲಯ ಅರಣ್ಯಾಧಿಕಾರಿ ಮಂಜುನಾಥ್, ಉಪವಲಯ ಅರಣ್ಯಾಧಿಕಾರಿ ಮಂಜು, ರಂಗಸ್ವಾಮಿ ಸೇರಿದಂತೆ ಇಲಾಖೆಉ ಸಿಬ್ಬಂದಿ ಇದ್ದರು.