ಚೀನಾದಲ್ಲಿ ಬೃಹತ್ ಹುಲ್ಲುಗಾವಲು ಪ್ರದೇಶ ಅನುಪಯುಕ್ತ ಎಂದು ಉತ್ಪಾದನೆಗೆ ತೊಡಗಿತು. ಮರುಭೂಮಿ ವಿಸ್ತಾರವಾಯಿತು. ಸಸಿಗಳನ್ನು ನೆಡುವ ತೀರ್ಮಾನ ವಿರೋಧಿಸಿದ ವಿಜ್ಞಾನಿಯನ್ನು 8 ವರ್ಷ ಜೈಲಿಗೆ ಹಾಕಿದರು. ಪರಿಸ್ಥಿತಿ ವಿಕೋಪಕ್ಕೆ ತಲುಪಿದ ಬಳಿಕ ಕ್ಷಮೆ ಕೇಳಿ ಪರಿಹಾರ ಕೇಳುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಸಿಗಳನ್ನು ನೆಡುವುದರಿಂದ ಸಹಜವಾದ ಪರಿಸರ ಕಟ್ಟಲು ಸಾಧ್ಯವಿಲ್ಲ. ಇರುವುದನ್ನು ಉಳಿಸಿಕೊಂಡು ಹೋಗಬೇಕು. ಸಸಿ ನೆಡುವುದು ಉತ್ಸಾಹ ಮತ್ತು ಭಾವಾನಾತ್ಮಕವಾಗಿ ಮಾಡುವ ಕೆಲಸಗಳು ಹೆಚ್ಚಿನ ಸಮಯ ಉಲ್ಟಾ ಆಗಬಹುದು ಎಂದು ವನ್ಯಜೀವಿ ತಜ್ಞ ಕೃಪಾಕರ ಹೇಳಿದರು.

ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಬೋಧಿವೃಕ್ಷ ಸೋಸೈಟಿ ಫಾರ್ ಡೆವಲಪ್ಮೆಂಟ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮೇಸ್ತ್ರಿ ಮಾದಯ್ಯ ಅವರಿಗೆ ಪರಿಸರ ಪ್ರಜ್ಞಾ 2026 ಪ್ರಶಸ್ತಿ ನೀಡಿ ಮಾತನಾಡಿದರು.

ಚೀನಾದಲ್ಲಿ ಬೃಹತ್ ಹುಲ್ಲುಗಾವಲು ಪ್ರದೇಶ ಅನುಪಯುಕ್ತ ಎಂದು ಉತ್ಪಾದನೆಗೆ ತೊಡಗಿತು. ಮರುಭೂಮಿ ವಿಸ್ತಾರವಾಯಿತು. ಸಸಿಗಳನ್ನು ನೆಡುವ ತೀರ್ಮಾನ ವಿರೋಧಿಸಿದ ವಿಜ್ಞಾನಿಯನ್ನು 8 ವರ್ಷ ಜೈಲಿಗೆ ಹಾಕಿದರು. ಪರಿಸ್ಥಿತಿ ವಿಕೋಪಕ್ಕೆ ತಲುಪಿದ ಬಳಿಕ ಕ್ಷಮೆ ಕೇಳಿ ಪರಿಹಾರ ಕೇಳುತ್ತಿದ್ದಾರೆ ಎಂದರು.

ಹೆಚ್ಚಿನ ಪ್ರಮಾಣದಲ್ಲಿ ಸಸಿಗಳು ನೆಡುವುದು ಒಳ್ಳೆಯ ಬೆಳವಣಿಗೆಯಲ್ಲ. ಸಹಜವಾಗಿ ನಿರ್ಮಾಣವಾಗುವ ಕಾಡುಗಳಿಗೆ ವಿರುದ್ಧವಾದದ್ದು ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಎನ್‌.ಕೆ. ಲೋಕನಾಥ್‌, ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯದಿಂದ ಸಕಾದಲ್ಲಿ ಮಳೆಗಾಲ ಆರಂಭವಾಗಿಲ್ಲ. ಇದಕ್ಕೆ ಕಾರಣರು ನಾವೇ. ಹಿಂದೆ ತಂಪಾದ ಗಾಳಿ, ಶುದ್ಧ ನೀರು ಸಿಗುವ ಕಡೆ ಮನೆ ಕಟ್ಟಲಾಗುತ್ತಿತ್ತು. ಈಗ ನಗರಗಳ ಕಡೆ ಮುಖ ಮಾಡಿದ್ದಾರೆ. ಸಮಸ್ಯೆಗಳು ಹೆಚ್ಚಾಗಿವೆ ಎಂದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಡಾ. ನಂಜಯ್ಯ ಹೊಂಗನೂರು ಮಾತನಾಡಿ, ಪ್ರಾಕೃತಿಕ ಪರಿಸರ ಕಳೆದುಕೊಳ್ಳುತ್ತಿದ್ದೇವೆ. ಮರ ಕಟಾವು ಮಾಡಿ ನಗರ ಪ್ರದೇಶ ಬೆಳೆಸುತ್ತ ಮಹಡಿ ಮೇಲೆ ಸಸಿಗಳನ್ನು ಬೆಳೆಸುತ್ತಿದ್ದೇವೆ. ಪರಿಸರದ ಅನನ್ಯತೆ ಕಳೆದುಕೊಳ್ಳುತ್ತಿದ್ದೇವೆ ಎಂದರು.

ಪ್ರತಿ ತಿಂಗಳು 2 ದಿನ ಸಂಸ್ಥೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಮಾಡುತ್ತೇವೆ. ನೆಟ್ಟ ಗಿಡಗಳನ್ನು ನೀರು ಹಾಕಿ ಕಾಪಾಡುತ್ತೇವೆ ಎಂದರು.

ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಕೆರೆ ಕಟ್ಟೆ ರಕ್ಷಿಸುತ್ತಿಲ್ಲ. ನಗರ ಪ್ರದೇಶದಲ್ಲಿ ಮರಗಳ ಕಟಾವು ಮಾಡುವುದನ್ನು ವಿರೋಧಿಸುತ್ತಿಲ್ಲ ಎಂದರು.

ಸಮಾಜ ಕಾರ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಚಂದ್ರಮೌಳಿ, ಬೋಧಿವೃಕ್ಷ ಸೊಸೈಟಿ ಫಾರ್ ಡೆವಲಪ್ಮೆಂಟ್ ಅಧ್ಯಕ್ಷ ಎಂ.ಎಸ್. ಚಂದ್ರ, ಮೇಸ್ತ್ರಿ ಮಾದಯ್ಯ ಇದ್ದರು. ಡಾ.ಎಚ್.ಪಿ. ಮಂಜು ಸ್ವಾಗತಿಸಿದರು. ಗಾಯಕ ಅಮ್ಮರಾಮಚಂದ್ರ ಪರಿಸರ ಗೀತೆ ಹಾಡಿದರು. ಸಂಶೋ‘ಧನಾ ವಿದ್ಯಾರ್ಥಿನಿ ಅನಿತಾ ನಿರೂಪಿಸಿದರು.