ಸಾರಾಂಶ
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ನಾವು ನಮ್ಮ ಮಕ್ಕಳಿಗೆ ಸಂಸ್ಕಾರವನ್ನು ಹೇಳಿಕೊಡುವಂತಾಗಬೇಕು. ಹೆತ್ತವರು, ಗುರುಗಳು ಹಾಗೂ ಹಿರಿಯರನ್ನು ಗೌರವಿಸುವ ಸಂಸ್ಕಾರವಂತರಿಂದ ಮಾತ್ರ ಉತ್ತಮ ದೇಶ ನಿರ್ಮಾಣ ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತೆ ಡಾ. ಮಾತಾ ಬಿ.ಮಂಜಮ್ಮ ಜೋಗತಿ ತಿಳಿಸಿದರು.ತಾಲೂಕಿನ ಮೇಲೂರು ಗ್ರಾಮದಲ್ಲಿ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ ಹಾಗೂ ಕನ್ನಡ ರೈತ ಯುವಕರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ದೇವರು ಎಲ್ಲೂ ಇಲ್ಲ. ನಾವು ಮಾಡುವ ಕೆಲಸದಲ್ಲಿ ದೇವರನ್ನು ಹುಡುಕುವ ಕೆಲಸ ಆಗಬೇಕು. ದಕ್ಷತೆ, ಪ್ರಾಮಾಣಿಕತೆ, ಸದುದ್ದೇಶದಿಂದ ಮಾಡುವ ಕೆಲಸದಲ್ಲಿ ನಾವು ದೇವರನ್ನು ಕಾಣುವಂತಾಗಬೇಕು ಎಂದು ಹೇಳಿದರು.ಶಾಲಾ ಕಾಲೇಜು ಮಕ್ಕಳು ಸಮಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಿ. ಹೆತ್ತವರನ್ನು, ಗುರುಗಳನ್ನು ಗೌರವಿಸಿ. ನಿಮ್ಮ ಬದುಕಿನಲ್ಲಿ ಗುರಿ ಇಟ್ಟುಕೊಳ್ಳಿ. ಪ್ರಾಮಾಣಿಕತೆಯಿಂದ ನಿಮ್ಮ ಕೆಲಸವನ್ನು ನೀವು ಮಾಡಿ, ಉತ್ತಮ ಸಮಾಜ ಉತ್ತಮ ದೇಶ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಶಾಲಾ ಮಕ್ಕಳು ತಮ್ಮ ಬದುಕಿನಲ್ಲಿ ತಂದೆ- ತಾಯಿ ಹಾಗೂ ಗುರುಗಳನ್ನು ದೇವರ ಸಮಾನರಾಗಿ ಕಾಣಿ. ಅವರ ಮಾರ್ಗದರ್ಶನದಲ್ಲಿ ನಡೆಯಿರಿ, ಬದುಕು ಉತ್ತಮವಾಗುತ್ತದೆ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗುತ್ತೀರಿ ಎಂದರು.ಗ್ರಾಮದ ಸರ್ಕಾರಿ, ಖಾಸಗಿ ಶಾಲೆಗಳ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ನವಜೀವನ ಸೇವಾ ಸಂಘದ ಅಧ್ಯಕ್ಷ ಮುನಿರಾಜು ಹಾಗೂ ಗ್ರಾಮದ ಸಮಾಜ ಸೇವಕ ಎಚ್.ವಿ.ರಾಮಕೃಷ್ಣಪ್ಪ ಸೇರಿದಂತೆ ವಿವಿಧ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.ರಾಷ್ಟ್ರ ಪ್ರಶಸ್ತಿ ವಿಜೇತ, ಚಲನಚಿತ್ರ ನಿರ್ದೇಶಕರಾದ ಪಿ.ಶೇಷಾದ್ರಿ, ನಾಗೇಂದ್ರ ಪ್ರಸಾದ್, ಹಾಸ್ಯ ನಟ ಉಮೇಶ್, ಖ್ಯಾತ ವೈದ್ಯ ಡಾ.ಟಿ.ಎಚ್.ಆಂಜಿನಪ್ಪ, ಸಾಹಿತಿ ಡಾ.ರಮೇಶ್, ಗ್ರಾಪಂ ಅಧ್ಯಕ್ಷೆ ಶಶಿಕಲಾ ರಮೇಶ್, ಮಾಜಿ ಅಧ್ಯಕ್ಷ ಆರ್.ಎ.ಉಮೇಶ್, ಡಾ,ರಾಜ್ ಕುಮಾರ್ ಅಭಿಮಾನಿಗಳ ಸಂಘದ ಧರ್ಮೇಂದ್ರ, ಗೋಪಾಲ್, ಶ್ರೀನಿವಾಸ್, ಸುದೀರ್, ಸುದರ್ಶನ್, ರೂಪೇಶ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.--