ಕ್ಷೇತ್ರದ ಜನ ಒಂದೆಡೆ ಸೇರಲು ಉತ್ತಮ ಅವಕಾಶ

| Published : Aug 24 2025, 02:00 AM IST

ಸಾರಾಂಶ

ಡಾ.ಶ್ರೀ.ಬಾಲಗಂಗಾಧರನಾಥ ಸ್ವಾಮೀಜಿ ಮೈದಾನದಲ್ಲಿ ಆಯೋಜಿಸಿದ್ದ ‘ದಾಸರಹಳ್ಳಿ ಸಂಭ್ರಮ’ ಕಾರ್ಯಕ್ರಮದಲ್ಲಿ ಶಾಸಕ ಎಸ್‌.ಮುನಿರಾಜು, ಏಳು ಮಲೆ ಚಿತ್ರದ ನಾಯಕ ರಾಣಾ, ನಾಯಕಿ ಪ್ರಿಯಾಂಕ್, ಸೂರತ್ ಫೌಂಡೇಷನ್ ಸಂಸ್ಥಾಪಕಿ ಸುಜಾತಾ ಮುನಿರಾಜು ಮತ್ತಿತರರು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ಕ್ಷೇತ್ರದ ಜನರೆಲ್ಲ ಒಂದೆಡೆ ಸೇರಿ ಸಂಭ್ರಮಿಸಲು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿರುವ ‘ದಾಸರಹಳ್ಳಿ ಸಂಭ್ರಮ’ ಕಾರ್ಯಕ್ರಮ ಉತ್ತಮ ಅವಕಾಶ ಕಲ್ಪಿಸಿದೆ ಎಂದು ಶಾಸಕ ಎಸ್.ಮುನಿರಾಜು ಶ್ಲಾಘಿಸಿದರು.

ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಶಾಸಕರ ಸಹಕಾರದೊಂದಿಗೆ ಬಾಗಲಗುಂಟೆಯ ಎಂಇಐ ಬಡಾವಣೆಯ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮೈದಾನದಲ್ಲಿ ಆಯೋಜಿಸಿದ್ದ ‘ದಾಸರಹಳ್ಳಿ ಸಂಭ್ರಮ’ ಕಾರ್ಯಕ್ರಮದ ಎರಡನೇ ದಿನವಾದ ಶನಿವಾರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ದಾಸರಹಳ್ಳಿ ಸಂಭ್ರಮದಂತಹ ಕಾರ್ಯಕ್ರಮಗಳು ಎಲ್ಲ ಕ್ಷೇತ್ರಗಳಲ್ಲೂ ನಡೆದರೆ ಜನರು ಒಂದೆಡೆ ಸೇರಿ ಖುಷಿ ಪಡಲು ಉತ್ತಮ ವಾತಾವರಣ ನಿರ್ಮಾಣವಾದಂತೆ ಆಗುತ್ತದೆ. ಮಕ್ಕಳಿಂದ ಹಿರಿಯರವರೆಗೂ ಸ್ಪರ್ಧೆಗಳನ್ನು ಆಯೋಜಿಸಿರುವುದು ಅನುಕರಣೀಯವಾಗಿದೆ. ಇದು ಈ ಭಾಗದಲ್ಲಿ ಹಬ್ಬದ ವಾತಾವರಣವನ್ನು ಉಂಟು ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅದ್ಭುತ ಕಾರ್ಯಕ್ರಮ:

ಭಾರತ ದೇಶವೇ ನಮ್ಮ ಮನೆ. ಭಾರತೀಯರೆಲ್ಲರೂ ನಮ್ಮ ಕುಟುಂಬ ಎಂಬ ಪ್ರಧಾನಿ ಮೋದಿ ಅವರ ಆಶಯದಂತೆ ದಾಸರಹಳ್ಳಿ ಕ್ಷೇತ್ರವೇ ತಮ್ಮ ಮನೆ. ಇಲ್ಲಿನ ನಾಗರಿಕರೆಲ್ಲರೂ ನನ್ನ ಕುಟುಂಬ ಎಂಬಂತೆ ಕ್ಷೇತ್ರದ ಜನರು ಇದ್ದಾರೆ. ಸಾರ್ವಜನಿಕರು ಒಂದೆಡೆ ಸೇರಿ ಸಂಭ್ರಮಿಸಬೇಕು ಎಂದು ಕನ್ನಡಪ್ರಭ ಮತ್ತು ಏಷ್ಯಾ ನೆಟ್ ಸುವರ್ಣ ನ್ಯೂಸ್ ಸಹಯೋಗದಲ್ಲಿ ಇಂತಹ ಅದ್ಭುತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಏಳುಮಲೆ ಚಿತ್ರ ತಂಡದ ನಾಯಕ ರಾಣಾ, ನಾಯಕಿ ಪ್ರಿಯಾಂಕ್ , ಸೂರಜ್ ಫೌಂಡೇಷನ್ ಸಂಸ್ಥಾಪಕಿ ಸುಜಾತ ಮುನಿರಾಜು, ಸುವರ್ಣ ನ್ಯೂಸ್‌ನ ವಿಜಯ್ ಕುಮಾರ್, ಅಮೃತ, ಈವೆಂಟ್ ಮ್ಯಾನೇಜ್ಮೆಂಟ್‌ನ ಹರಿಪ್ರಸಾದ್, ಅರವಿಂದ್ ಶೆಟ್ಟಿ ಮತ್ತಿತರರು ಹಾಜರಿದ್ದರು.

ಸಾಧಕರಿಗೆ ಸನ್ಮಾನ

ಬೆಳಗಿನಿಂದ ಸಂಜೆಯವರೆಗೂ ಮುದ್ದು ಮಗು ಮಕ್ಕಳ ಫ್ಯಾಷನ್ ಶೋ ‘ನವದುರ್ಗೆ’, ಅಡುಗೆ ಮಹಾರಾಣಿ, ಡ್ಯಾನ್ಸ್ ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸೂರತ್ ಫೌಂಡೇಷನ್ ಸಂಸ್ಥಾಪಕಿ ಸುಜಾತಾ ಮುನಿರಾಜು ಅವರು ಪ್ರಮಾಣ ಪತ್ರಗಳನ್ನು ನೀಡಿ ಪ್ರೋತ್ಸಾಹದ ನುಡಿಗಳನ್ನಾಡಿದರು. ಅಡುಗೆ ಮಹಾರಾಣಿಯಲ್ಲಿ ಸ್ಪರ್ಧೆಯಲ್ಲಿ ಸುಜಾತಾ ಮುನಿರಾಜು ಅವರು ತೀರ್ಪುಗಾರರಾಗಿದ್ದು ಆಯ್ಕೆಯಾದವರು ಭಾನುವಾರ ನಡೆಯಲಿರುವ ಅಂತಿಮ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ.

ಏಳುಮಲೆ ಚಿತ್ರತಂಡ ಭಾಗಿ

ದಾಸರಹಳ್ಳಿ ಸಂಭ್ರಮದಲ್ಲಿ ‘ಏಳು ಮಲೆ’ ಚಿತ್ರತಂಡದ ನಾಯಕ ಹಾಗೂ ನಾಯಕಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಏಳು ಮಲೆ ಚಿತ್ರದ ಹಾಡಿಗೆ ನಾಯಕ ರಾಣಾ, ನಾಯಕಿ ಪ್ರಿಯಾಂಕ್ ಅವರು ನೃತ್ಯ ಮಾಡಿ ಮನರಂಜಿಸಿದರು. ಸೆಪ್ಟೆಂಬರ್‌ನಲ್ಲಿ ಚಲನಚಿತ್ರ ಪ್ರೇಕ್ಷಕರ ಮುಂದೆ ಬರಲಿದ್ದು ಪ್ರೋತ್ಸಾಹಿಸಬೇಕು ಎಂದು ಕೋರಿದರು.

ಇಂದು ಕಾರ್ಯಕ್ರಮಕ್ಕೆ ತೆರೆ

ಬೆಂಗಳೂರಿಗರ ಮೆಚ್ಚಿನ ಹಬ್ಬವಾದ ದಾಸರಹಳ್ಳಿ ಸಂಭ್ರಮಕ್ಕೆ ಇಂದು ತೆರೆ ಬೀಳಲಿದೆ. ಎರಡು ದಿನವೂ ಹಲವು ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಾನುವಾರ ಕೊನೆಯ ದಿನವಾಗಿದ್ದು ಕುಟುಂಬ ಸಮೇತ ವೀಕ್ಷಣೆಗೆ ಉತ್ತಮ ಆಯ್ಕೆಯಾಗಿದೆ.

ಇಂದಿನ ಕಾರ್ಯಕ್ರಮ

ಭಾನುವಾರ ಬೆಳಗ್ಗೆ 11ಕ್ಕೆ ಮಕ್ಕಳಿಗೆ ಮುದ್ದು ಮಗು ಮತ್ತು ವೇಷಭೂಷಣ ಸ್ಪರ್ಧೆ, ಮಧ್ಯಾಹ್ನ 12ಕ್ಕೆ ಮಕ್ಕಳಿಗೆ ಬೆಂಕಿರಹಿತ ಅಡುಗೆ ಸ್ಪರ್ಧೆ, ಮಧ್ಯಾಹ್ನ 2 ಕ್ಕೆ ಅಡುಗೆ ಮಹಾರಾಣಿ ಅಂತಿಮ ಸ್ಪರ್ಧೆ, ಸಂಜೆ 4 ಕ್ಕೆ ಚಿತ್ರಕಲಾ ಸ್ಪರ್ಧೆ, 5 ಕ್ಕೆ ಓಪನ್ ಸ್ಟೇಜ್ ಮತ್ತು ಗಾಯನ, 7ಕ್ಕೆ ಬಹುಮಾನ ವಿತರಣೆ, 8 ಕ್ಕೆ ಇಂಡಿಯನ್ ಫೋಕ್ ಮ್ಯೂಸಿಕ್ ಬ್ಯಾಂಡ್, ರಾತ್ರಿ 9 ಕ್ಕೆ ಜಂಬೆ ಝಲಕ್ ಬಾಲು ಮತ್ತು ತಂಡದಿಂದ ನೃತ್ಯ ಹಾಗೂ ದಾಸರಹಳ್ಳಿಯ ಸ್ಥಳೀಯ ಪ್ರತಿಭೆಗಳಿಂದ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. S/O ಮುತ್ತಣ್ಣ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ.