ಸಾರಾಂಶ
ರೈತನ ಮಗನಾಗಿ ಮಲೆನಾಡಿನಲ್ಲಿ ಜನಿಸಿ ಇವರ ವಿಚಾರಧಾರೆ, ಅಗಾಧ ಅಧ್ಯಯನ, ಸರ್ವರಿಗೆ ಸಮಪಾಲು, ಸಮಬಾಳು ಎಂದು ಬದುಕು ತೋರಿಸಿಕೊಟ್ಟು ವಿಶ್ವಮಾನವರಾದರು. ಇವರ ಪ್ರತಿ ಕವಿತೆ, ನಾಟಕ, ಕವನಗಳು ಬದುಕಿಗೆ ದಾರಿ ದೀಪವಾಗಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹುಟ್ಟುತ್ತಲೆ ಯಾರು ಶ್ರೇಷ್ಟರಾಗದೆ ತಮ್ಮ ಸಾಧನೆ, ಕಾಯಕದಲ್ಲಿ ಮಾಡುವ ತಪಸ್ಸಿನಿಂದ ದೊಡ್ಡ ವ್ಯಕ್ತಿಗಳಾಗಿ ಆದರ್ಶರಾಗುತ್ತಾರೆ ಎನ್ನುವುದಕ್ಕೆ ರಸಋಷಿ ಕುವೆಂಪು ಮಾದರಿ ಪುರುಷೋತ್ತಮರು ಎಂದು ನಿವೃತ್ತ ಪ್ರಾಂಶುಪಾಲ ಚಂದ್ರಮೋಹನ್ ಹೇಳಿದರು.ಪಟ್ಟಣದ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ಹಮ್ಮಿಕೊಂಡಿದ್ದ 121ನೇ ವಿಶ್ವಮಾನವ ಕುವೆಂಪು ಜಯಂತಿಯಲ್ಲಿ ಮಾತನಾಡಿ, ಕುವೆಂಪು ಅವರ ಮಂತ್ರ ಮಾಂಗಲ್ಯ ನಾಡಿನ ಬಡವ, ಬಲ್ಲಿದರ ವಿವಾಹ ಎಂಬ ಆರ್ಥಿಕ ಸಂಕೋಲೆಗೆ ಕಡಿವಾಣ ಹಾಕುವ ಸಾಧನವಾಗಿದೆ ಎಂದು ಬಣ್ಣಿಸಿದರು.
ರೈತನ ಮಗನಾಗಿ ಮಲೆನಾಡಿನಲ್ಲಿ ಜನಿಸಿ ಇವರ ವಿಚಾರಧಾರೆ, ಅಗಾಧ ಅಧ್ಯಯನ, ಸರ್ವರಿಗೆ ಸಮಪಾಲು, ಸಮಬಾಳು ಎಂದು ಬದುಕು ತೋರಿಸಿಕೊಟ್ಟು ವಿಶ್ವಮಾನವರಾದರು. ಇವರ ಪ್ರತಿ ಕವಿತೆ, ನಾಟಕ, ಕವನಗಳು ಬದುಕಿಗೆ ದಾರಿ ದೀಪವಾಗಿದೆ ಎಂದರು.ಆರಂಭದಲ್ಲಿ ಇಂಗ್ಲಿಷ್ ಕವಿತೆ ಬರೆದು, ಬಳಿಕ ಕನ್ನಡದಲ್ಲಿ ಕವಿತೆ ರಚಿಸಿ ಕನ್ನಡದ ಕಂಪನ್ನು ವಿಶ್ವಕ್ಕೆ ಪಸರಿಸಿದರು. ಕಾಯಕದಲ್ಲಿ ಭಗವಂತನಕಾಣಿ ಎಂದು ಮಾನಸ ಗಂಗೋತ್ರಿಯಲ್ಲಿ ಕುಲಪತಿಗಳಾಗಿ ಮಾಡಿದ ಸೇವೆ ಮಾದರಿಯಾಗಿದೆ ಎಂದರು.
ಕನ್ನಡ ಉಪನ್ಯಾಸಕ ಕಿಕ್ಕೇರಿ ವಿನೋದ್ಸಿಂಗ್ ಮಾತನಾಡಿ, ಕನ್ನಡ ಇಂಗ್ಲಿಷ್ ಎರಡು ಭಾಷೆಯಲ್ಲಿ ಕುವೆಂಪು ಕಾವ್ಯ ರಚಿಸಿದ್ದರೆ ಎಂದೂ ಇವರಿಗೆ ನೋಬಲ್ ಪ್ರಶಸ್ತಿ ಲಭಿಸುತ್ತಿತ್ತು. ಮಂತ್ರಮಾಂಗಲ್ಯದ ರೀತಿ ಮದುವೆ ಚೆನ್ನ ಎಂದು ಮನೆಯಲ್ಲಿ ಚರ್ಚಿಸಿದಾಗ ತನ್ನ ಅರ್ಧಾಂಗಿ ದೊಡ್ಡ ರಾದ್ಧಾಂತವನ್ನೆ ಮಾಡಿದಳು ಎಂದು ತಮ್ಮ ಮನದಾಳದ ಮಾತು ತೋಡಿಕೊಂಡರು.ಕವಿ, ಸಾಹಿತಿ, ನಾಟಕಕಾರ, ದಾರ್ಶನಿಕ, ಸಾಮಾಜಿಕ ಹರಿಕಾರರಾಗಿ ರೈತ, ಯೋಧ, ದಾಂಪತ್ಯ, ಪ್ರೇಮ ಕವಿತೆ ಎನ್ನದೆ ಎಲ್ಲ ಮಜಲುಗಳಲ್ಲಿ ಕಾವ್ಯದ ರಸದೌತಣವನ್ನು ನಾಡಿಗೆ ನೀಡಿದ ಕುವೆಂಪು ಬಲುದೊಡ್ಡ ಆಸ್ತಿಯಾಗಿದ್ದಾರೆ ಎಂದು ಸ್ಮರಿಸಿದರು.
ಗಣ್ಯರು ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸಿಹಿ ಹಂಚಿ, ಅನ್ನದಾಸೋಹ ಏರ್ಪಡಿಸಿ ಸಂಭ್ರಮಿಸಿದರು. ಕೆಪಿಸಿಸಿ ಸದಸ್ಯ ಸುರೇಶ್, ಜಿಪಂ ಮಾಜಿ ಸದಸ್ಯ ಕೆ.ಎಸ್. ಪ್ರಭಾಕರ್, ಗ್ರಾಪಂ ಅಧ್ಯಕ್ಷ ಕೆ.ಜಿ. ಪುಟ್ಟರಾಜು, ಮಾಜಿ ಅಧ್ಯಕ್ಷ ಕೆ.ಟಿ.ಪರಮೇಶ್, ಕೇಶವಮೂರ್ತಿ, ಎಸ್.ಕೆ.ಬಾಲಕೃಷ್ಣ, ಕೆ.ಆರ್.ರಾಜೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಕಾಯಿ ಸುರೇಶ್, ಮಾಜಿಯೋಧ ಲೋಕೇಶ್, ಮೋಹನ್, ಕೆ.ಜೆ.ರಾಜಣ್ಣ, ಐಕನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಅಂಕನಹಳ್ಳಿ ಮಂಜೇಗೌಡ, ಕೆ.ಪಿ. ಮಧುಕರ್, ಸತ್ಯ, ರಾಯಲ್ ನಾಗರಾಜು, ಗೃಹರಕ್ಷಕದಳ ನಿವೃತ್ತ ಅಧಿಕಾರಿ ಕೆ.ಎನ್. ಚಂದ್ರಶೇಖರಯ್ಯ, ಕೆ.ವೈ. ಹರೀಶ್, ಕೆ.ಎನ್. ನಾಗರಾಜು, ಮಹದೇವು, ರಮೇಶ್, ಅರ್ಜುನ್, ರಘುಪ್ರಸಾದ್, ಸೊಸೈಟಿಬಾಬು, ಕುಮಾರ್ ಇದ್ದರು.