ಅರಸೀಕೆರೆ: ಅಶಕ್ತ, ದೀನ, ದುರ್ಬಲ, ಶೋಷಿತ ಮಹಿಳಾ ಸಮುದಾಯಕ್ಕೆ ಸವಲತ್ತುಗಳನ್ನು ತಲುಪಿಸುವುದು ಸರ್ಕಾರ ಹಾಗೂ ಅಧಿಕಾರಿಗಳ ಮೊದಲ ಆದ್ಯತೆಯಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಹಾಸಿಗೆ ಹಿಡಿದಿರುವ ತಾಲೂಕಿನ ಕಣಕಟ್ಟೆ ಹೋಬಳಿ ಕಿತ್ತನಕೆರೆ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಅಂಗವಿಕಲ ಪದವೀಧರ ಯುವತಿ ಶ್ರುತಿ ಇಂತಹ ಎಲ್ಲ ಬಗೆಯ ಸೌಕರ್ಯಗಳಿಂದ ವಂಚಿತಳಾಗಿದ್ದಾಳೆ.

ಏಳಲು ಶಕ್ತಿ ಸಾಲದು, ನಡೆಯಲು ಕಾಲು ಬಾರದು. ಹೀಗಿದ್ದರೂ ಸಂಬಂಧಿಗಳ ಸಹಕಾರದಿಂದ ಅಂಗವಿಕಲ ವೇತನ ಪಡೆಯಲು ತಾಲೂಕು ಕಚೇರಿ, ತಾಪಂ ಅಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸಿದ್ದರು. ಇದ್ಯಾವುಕ್ಕೂ ಕ್ಯಾರೇ ಎನ್ನದ ಹಿರಿಯ ಅಧಿಕಾರಿಗಳು ಇಲ್ಲದ ಸಬೂಬು ಹೇಳಿ ಮತ್ತಷ್ಟು ಸಂಕಟಕ್ಕೆ ಸಿಲುಕುವಂತೆ ಮಾಡಿದ್ದಾರೆ. ವಾಸ್ತವ ಮನಗಂಡು ತಕ್ಷಣವೇ ಯುವತಿ ನೆರವಿಗೆ ಧಾವಿಸಬೇಕು ಎನ್ನುವ ಒತ್ತಾಯ ಸಾಮಾಜಿಕ ಕಾರ್ಯಕರ್ತ ವೀರಭದ್ರಪ್ಪ ಅವರಿಂದ ಕೇಳಿಬಂದಿದೆ.