ಶಾಲೆಗೆ ಆಗಮಿಸಿದ ಮಕ್ಕಳಿಗೆ ಎತ್ತಿನಗಾಡಿಯಲ್ಲಿ ಮೆರವಣಿಗೆ, ಭವ್ಯ ಸ್ವಾಗತ

| Published : May 29 2025, 12:21 AM IST

ಸಾರಾಂಶ

ಶೈಕ್ಷಣಿಕ ವರ್ಷದ ತರಗತಿಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಶಾಲೆಗೆ ಆಗಮಿಸಿದ ಮೊದಲ ದಿನ ಮಕ್ಕಳಿಗೆ ಖುಷಿ ನೀಡಬೇಕು. ಜತೆಗೆ ಮಕ್ಕಳಿಗೆ ನಮ್ಮ ಸಂಸ್ಕಾರ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು .

ಕನ್ನಡಪ್ರಭ ವಾರ್ತೆ ಪಾಂಡವಪುರ

ಶೈಕ್ಷಣಿಕ ವರ್ಷ ಆರಂಭಗೊಂಡು ಮಕ್ಕಳು ಶಾಲೆಗೆ ಆಗಮಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಜಯಂತಿನಗರದ ಶ್ರೀಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ, ಉಪನ್ಯಾಸಕರು, ಶಿಕ್ಷಕರು ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಮಕ್ಕಳಿಗೆ ಪುಷ್ಪಾರ್ಚನೆ ಮಾಡಿ, ಶಾಲೆಗೆ ಭವ್ಯಸ್ವಾಗತ ಕೋರಿದರು.

ಸಂಸ್ಥೆ ಕಾರ್‍ಯದರ್ಶಿ ಪ್ರೊ.ಎಂ.ಪಂಚಲಿಂಗೇಗೌಡ, ಆಡಳಿತಾಧಿಕಾರಿ ಅಕ್ಷಯ್ ನೇತೃತ್ವದಲ್ಲಿ ಎಲ್ಲಾ ಶಿಕ್ಷಕರು ಶಾಲೆಗೆ ಆಗಮಿಸಿದ ಮಕ್ಕಳನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸುವ ಮೂಲಕ ಶಾಲೆ ಆವರಣಕ್ಕೆ ಕರೆತಂದರು. ಬಳಿಕ ಶಿಕ್ಷಕರು ಮತ್ತು ಆಡಳಿತ ಮಂಡಳಿ ಸದಸ್ಯರು ಮಕ್ಕಳಿಗೆ ಹೂ, ಸಿಹಿತಿಂಡಿ ಹಾಗೂ ಪೆನ್ಸಿಲ್‌ ಕೊಟ್ಟು ಸ್ವಾಗತಿಸಿದರು. ಬಳಿಕ ಶಾಲೆಯಲ್ಲಿ ಸರಸ್ವತಿ ಪೋಟೋಗೆ ಪೂಜೆಸಲ್ಲಿಸಿ ಮಕ್ಕಳಿಗೆ ಭವ್ಯಸ್ವಾಗತ ಕೋರಿದರು.

ಕಾರ್‍ಯದರ್ಶಿ ಪ್ರೊ.ಎಂ.ಪಂಚಲಿಂಗೇಗೌಡ ಮಾತನಾಡಿ, ಶೈಕ್ಷಣಿಕ ವರ್ಷದ ತರಗತಿಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಶಾಲೆಗೆ ಆಗಮಿಸಿದ ಮೊದಲ ದಿನ ಮಕ್ಕಳಿಗೆ ಖುಷಿ ನೀಡಬೇಕು. ಜತೆಗೆ ಮಕ್ಕಳಿಗೆ ನಮ್ಮ ಸಂಸ್ಕಾರ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಶಾಲೆಗಳು ಮಕ್ಕಳ ಭವಿಷ್ಯ ರೂಪಿಸುವ ಬುನಾದಿಯಾಗಿವೆ. ಶಾಲೆ ಬಗ್ಗೆ ದೈವಭಕ್ತಿ ಮೂಡಿಸಿಕೊಂಡು ಶ್ರದ್ಧೆ, ಭಕ್ತಿ, ಶಿಸ್ತು, ಸಂಯಮದಿಂದ ವಿದ್ಯಾಭ್ಯಾಸ ಮಾಡಬೇಕು. ಪೋಷಕರು ಕನಸುಗಳನ್ನು ಮಕ್ಕಳು ಅರ್ಥೈಸಿಕೊಂಡು ಗುರುಗಳು ಹೇಳಿಕೊಡುವ ಪಾಠ, ಪ್ರವಚನಗಳನ್ನು ಕಲಿತು ವಿದ್ಯಾವಂತರಾಗಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಸ್ಥೆ ಆಡಳಿತಾಧಿಕಾರಿ ಅಕ್ಷಯ್, ಶಿಕ್ಷಕರಾದ ಮೋಹನ್‌ರಾಜ್, ದಿವ್ಯ ಸೇರಿದಂತೆ ಎಲ್ಲಾ ಆಡಳಿತ ಮಂಡಳಿ, ಶಿಕ್ಷಕರು ಹಾಜರಿದ್ದರು.