ಸಾರಾಂಶ
ಗೌರಿಪುತ್ರ, ವಿಘ್ನವಿನಾಶಕ ಗಣೇಶನನ್ನು ಶನಿವಾರ ವಿಜೃಂಭಣೆಯಿಂದ ಬರಮಾಡಿಕೊಂಡಿದ್ದು, ವಿವಿಧ ರೂಪದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.
ಹಾವೇರಿ: ಗೌರಿಪುತ್ರ, ವಿಘ್ನವಿನಾಶಕ ಗಣೇಶನನ್ನು ಶನಿವಾರ ವಿಜೃಂಭಣೆಯಿಂದ ಬರಮಾಡಿಕೊಂಡಿದ್ದು, ವಿವಿಧ ರೂಪದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.
ನಗರದಲ್ಲಿ ಶನಿವಾರ ಬೆಳಗ್ಗೆಯಿಂದಲೇ ದೇವಸ್ಥಾನ, ಮೂರ್ತಿ ತಯಾರಕರ ಮನೆಗಳಿಂದ ಶುಭ್ರ ವಸ್ತ್ರಧಾರಿಗಳಾಗಿ, ಪಟಾಕಿ ಸಿಡಿಸಿ, ವಾದ್ಯ ವೈಭವಗಳೊಂದಿಗೆ ಗಣೇಶ ಮೂರ್ತಿಗಳನ್ನು ಮನೆಗೆ ಕರೆತರುತ್ತಿರುವ ದೃಶ್ಯಗಳು ಕಂಡು ಬಂದವು.ಜಿಲ್ಲೆಯ ಹಾವೇರಿ, ರಾಣಿಬೆನ್ನೂರು, ಹಿರೇಕೆರೂರು, ಹಾನಗಲ್ಲ, ಸವಣೂರು, ಬ್ಯಾಡಗಿ, ಶಿಗ್ಗಾಂವಿ ಸೇರಿದಂತೆ ಹಲವಾರು ಪಟ್ಟಣಗಳ ವಿವಿಧ ಸರ್ಕಲ್ಗಳಲ್ಲಿ, ಪ್ರಮುಖ ಬೀದಿಗಳಲ್ಲಿ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಬೃಹತ್ ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.
ಕಳೆದ ಒಂದೆರಡು ತಿಂಗಳನಿಂದ ಮೂರ್ತಿ ತಯಾರಕರಿಂದ ವಿವಿಧ ಆಕೃತಿ ಪಡೆದಿದ್ದ ಗಣೇಶ ಮೂರ್ತಿಗಳಾದ ಪಂಚಮುಖಿ ಗಣೇಶ, ಶಿವರೂಪಿ ಗಣೇಶ, ಸಾಯಿರೂಪಿ ಗಜಾನನ, ನಂದಿರೂಢ ಏಕದಂತ, ವಿಷ್ಣುರೂಪಿ ವಕ್ರತುಂಡ, ಹಸುವಿನ ಮೇಲೆ ಕುಳಿತ ಗಣೇಶ, ಗರುಡನ ಮೇಲೆ ಕುಳಿತಿರುವ ಗಣೇಶ, ನವಿಲಿನ ಮೇಲೆ ಕುಣಿವ ಗಣೇಶ, ರಥದ ಮೇಲಿರುವ ಗಣೇಶ, ಕಮಲದ ಮೇಲಿರುವ ಗಣೇಶ, ವೆಂಕಟೇಶ ರೂಪಿ ವಿಘ್ನೇಶ್ವರ ಮೂರ್ತಿಗಳು ಸೇರಿದಂತೆ ವಿವಿಧ ಭಂಗಿಯ ಗಣೇಶ ಮೂರ್ತಿಗಳನ್ನು ಜಿಲ್ಲೆಯಾದ್ಯಂತ ಪ್ರತಿಷ್ಠಾಪಿಸಲಾಗಿದೆ.ಹಾವೇರಿ ಪ್ರಮುಖ ವೃತ್ತಗಳಲ್ಲಿ ಗಣೇಶ ಪ್ರತಿಷ್ಠಾಪನೆಗಾಗಿ ಶಾಮಿಯಾನ ಹಾಕಿ ಝಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಿ ವಿವಿಧ ಭಂಗಿಗಳಲ್ಲಿರುವ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಜನತೆಯ ಕಣ್ಮನ ಸೆಳೆಯುತ್ತಿವೆ. ಸ್ಥಳೀಯ ಸುಭಾಸ ವೃತ್ತದಲ್ಲಿ ಪ್ರತಿಷ್ಠಾಪಿಸಿರುವ ಬೃಹತ್ ಗಾತ್ರದ ಹಾವೇರಿ ಕಾ ರಾಜಾ ಗಣಪ ಎಲ್ಲರ ಗಮನ ಸೆಳೆಯುತ್ತಿದೆ.
ಸ್ಥಳೀಯ ಅಶ್ವಿನಿ ನಗರದಲ್ಲಿ ಪ್ರತಿಷ್ಠಾಪಿಸಿರುವ ಸಿಂಹಾಸನದಲ್ಲಿ ವಿರಾಜಮಾನವಾಗಿ ಕುಳಿತಿರುವ ಗಣೇಶ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ನಗರದ ಕಲ್ಲುಮಂಟಪ ರಸ್ತೆಯಲ್ಲಿ ಬಿಲ್ಲು-ಬಾಣ ಹಿಡಿದು ನಿಂತಿರುವ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು ಕಣ್ಮನ ಸೆಳೆಯುತ್ತಿದೆ. ಬಸವೇಶ್ವರ ನಗರದಲ್ಲಿ ಪ್ರತಿಷ್ಠಾಪಿಸಿರುವ ಸಿಂಹಾಸನರೂಢ ಗಣೇಶ ಮೂರ್ತಿ ನೋಡುಗರ ಕಣ್ಮನ ಸೆಳೆಯುತ್ತಿದೆ. ಪುರದ ಓಣಿಯಲ್ಲಿ ನಂದಿ ಮೇಲೆ ಕುಳಿತಿರುವ ಗಣೇಶ ನೋಡುಗರನ್ನು ಆಕರ್ಷಿಸುತ್ತಿದೆ. ಶಿವಾಜಿನಗರದಲ್ಲಿ ನವಿಲಿನ ಮೇಲೆ ಕುಳಿತಿರುವ ಗಣೇಶ, ಕೆಇಬಿ ಕಚೇರಿಯಲ್ಲಿನ ಪೇಟ ಸುತ್ತಿಕೊಂಡು ನಿಂತಿರುವ ಗಣೇಶ ಸೇರಿದಂತೆ ಬಸ್ತಿ ಓಣಿ, ವಿದ್ಯಾನಗರ ಪಶ್ಚಿಮ, ಯಾಲಕ್ಕಿ ಓಣಿ, ನೇತಾಜಿ ನಗರ, ನಗರಸಭೆ, ಮಹಾತ್ಮಾ ಗಾಂಧಿ ವೃತ್ತ, ಎಲ್ಬಿಎಸ್ ಮಾರ್ಕೇಟ್, ಉದಯ ನಗರ, ವಿಜಯ ನಗರ, ಇಜಾರಿಲಕ್ಮಾಪೂರದಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ಮೂರ್ತಿಗಳು ನೋಡುಗರನ್ನು ಕೈ ಬೀಸಿ ಕರೆಯುತ್ತಿವೆ. ಸಾರ್ವಜನಿಕ ಗಜಾನನ ಉತ್ಸವ ಸಮಿತಿಗಳು ಪ್ರತಿಷ್ಠಾಪಿಸಿರುವ ಗಣೇಶನ ವೈವಿದ್ಯಮಯ ಮೂರ್ತಿಗಳು ನಗರದ ಜನತೆ ಬಂದು ವೀಕ್ಷಿಸುತ್ತಿದ್ದಾರೆ.