ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಅದ್ಧೂರಿ ಸ್ವಾಗತ

| Published : Feb 12 2024, 01:38 AM IST / Updated: Feb 12 2024, 03:38 PM IST

ಸಾರಾಂಶ

ಭಾರತದ ಸಂವಿಧಾನ ಅಂಗೀಕಾರವಾಗಿ ೭೫ ವರ್ಷ ತುಂಬಿದ ಸಂಭ್ರಮದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆಯ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾ ರಥವನ್ನು ತಾಲೂಕಿನ ಲಕ್ಕುಂಡಿ ಗ್ರಾಮ ಪಂಚಾಯತ ನೇತೃತ್ವದಲ್ಲಿ ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡರು.

ಗದಗ: ಭಾರತದ ಸಂವಿಧಾನ ಅಂಗೀಕಾರವಾಗಿ ೭೫ ವರ್ಷ ತುಂಬಿದ ಸಂಭ್ರಮದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆಯ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾ ರಥವನ್ನು ತಾಲೂಕಿನ ಲಕ್ಕುಂಡಿ ಗ್ರಾಮ ಪಂಚಾಯತ ನೇತೃತ್ವದಲ್ಲಿ ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿರುವ ರಥಕ್ಕೆ ಗ್ರಾಪಂ ಅಧ್ಯಕ್ಷ ಕೆ.ಎಸ್.ಪೂಜಾರ ಅವರು ಹೂಮಾಲೆ ಹಾಕಿ ನಮನ ಸಲ್ಲಿಸಿ, ಸ್ವಾಗತಿಸಿದರು. ಮುತೈದೆಯರು ಆರತಿ ಬೆಳಗಿ ನಮನ ಸಲ್ಲಿಸಿದರು.

ಬಿ.ಆರ್. ಅಂಬೇಡ್ಕರ ನಗರದಿಂದ ಆರಂಭವಾದ ರಥದ ಮೆರವಣಿಗೆಯು ಅತ್ತಿಮಬ್ಬೆ ಮಹಾದ್ವಾರದ ಮೂಲಕ ಗ್ರಾಮ ಪಂಚಾಯಿತಿಯನ್ನು ತಲುಪಿತು. 

ಮೆರವಣಿಗೆಯಲ್ಲಿ ಬಾಲಕಿಯರ ಡೊಳ್ಳು ಕುಣಿತ, ಶಾಲಾ ಮಕ್ಕಳ ಲೇಜಿಮ್ ನೃತ್ಯವು ಗಮನ ಸೆಳೆಯಿತು. ನೂರಾರು ಯುವಕರು ಪಾಲ್ಗೊಂಡ ಮೆರವಣಿಗೆಯಲ್ಲಿ ಡಾ. ಅಂಬೇಡ್ಕರ್ ಅವರಿಗೆ ಜೈ ಘೋಷಗಳು ಮೊಳಗಿದವು. ಗ್ರಾಪಂ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಸಂವಿಧಾನದಿಂದ ಸಮಾನತೆ

ಗದಗ: ಡಾ. ಬಿ.ಆರ್. ಅಂಬೇಡ್ಕರ್ ಅವರು ಹಲವಾರು ದೇಶಗಳ ಸುತ್ತಿ ಎಲ್ಲರನ್ನು ಸಮಾನವಾಗಿ ಕಾಣುವಂತಹ ಸಂವಿಧಾನವು ನಮಗೆಲ್ಲಾ ಸ್ಫೂರ್ತಿಯಾಗಿದೆ ಎಂದು ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಹೇಳಿದರು.

ತಾಲೂಕಿನ ಲಕ್ಕುಂಡಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ನಡೆದ ಸಂವಿಧಾನ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಅಂಬೇಡ್ಕರ್ ಅವರು ತಮ್ಮ ಮನೆಯ ವೈಯಕ್ತಿಕ ಸಮಸ್ಯೆಯಿದ್ದರೂ ಭಾರತಾಂಬೆಯ ಮಕ್ಕಳಿಗೆ ಉತ್ತಮ ಸಂವಿಧಾನವನ್ನು ನೀಡಬೇಕು ಎಂಬ ಸಂಕಲ್ಪ ತೊಟ್ಟು ಸಂವಿಧಾನವನ್ನು ರಚಿಸಿದ್ದಾರೆ. 

ಈ ಸಂವಿಧಾನದಿಂದ ಇಂದು ಬಡವ, ಬಲ್ಲಿದ, ಕೆಳವರ್ಗ, ಮೇಲ್ವರ್ಗ ಎಂಬ ತಾರತಮ್ಯವನ್ನು ಹೋಗಲಾಡಿಸಿ ಎಲ್ಲರನ್ನು ಸಮಾನರಾಗಿ ಕಾಣುವ ಭಾಗ್ಯ ಬಂದಿದೆ. 

ಎಲ್ಲ ಕ್ಷೇತ್ರಗಳಲ್ಲೂ ಎಲ್ಲರಿಗೂ ಸಮಾನವಾದ ಅವಕಾಶಗಳು ದೊರೆಯುತ್ತಿವೆ. ೭೫ ವರ್ಷ ತುಂಬಿದ ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನದ ಮಹತ್ವ ಅರಿತುಕೊಳ್ಳಲು ಸರ್ಕಾರ ಜಾಗೃತಿ ಮೂಡಿಸುತ್ತಿರುವುದು ಸ್ವಾಗತಾರ್ಹ ಎಂದರು.

ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, ೬೦ ದೇಶಗಳ ಸಂವಿಧಾನವನ್ನು ಓದಿ ಅತ್ಯಂತ ಉತ್ಕೃಷ್ಠವಾದ ಸಂವಿಧಾನವನ್ನು ಈ ದೇಶಕ್ಕೆ ಕೊಟ್ಟಿದ್ದಾರೆ. 

ಇದರಿಂದ ನಾವೆಲ್ಲರೂ ಸಮಾನವಾಗಿ ಬದುಕುತ್ತಿದ್ದೇವೆ. ನಿವೃತ್ತ ನ್ಯಾಯಮೂರ್ತಿ ನಾಗಮೂಹನದಾಸ ಅವರು ೨೦೧೮ರಲ್ಲಿ ಸಂವಿಧಾನ ಸಂಕ್ಷಿಪ್ತ ಓದು ಎಂಬ ಪುಸ್ತಕವನ್ನು ಬರೆದಿದ್ದು ಅದರಲ್ಲಿ ಗರ್ಭದಲ್ಲಿರುವ ಭ್ರೂಣದಿಂದ ವೃದ್ಧರವರೆಗೂ ಈ ದೇಶದಲ್ಲಿ ಹಲವಾರು ಸಮಾನತೆಯ ಅವಕಾಶಗಳನ್ನು ಕೊಟ್ಟಿದ್ದು ೬೦ ಸಲ ಮರು ಮುದ್ರಣವನ್ನು ಕಂಡಿರುವ ಈ ಪುಸ್ತಕವನ್ನು ಎಲ್ಲರೂ ಓದಿ ತಿಳಿದುಕೊಳ್ಳಬೇಕು ಮತ್ತು ಸಂವಿಧಾನದ ಪುಸ್ತಕವನ್ನು ಇಂದು ನಾವೆಲ್ಲರೂ ದಿನ ನಿತ್ಯ ಪೂಜೆ ಮಾಡಬೇಕು ಎಂದರು.

ಈ ವೇಳೆ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕಿ ಎಂ.ಬಿ. ಗೂಡಗೂರು ಅವರು ಉಪನ್ಯಾಸ ನೀಡಿದರು. ಬಿಇಒ ವಿ.ವಿ. ನಡುವಿನಮನಿ ಅವರು ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವೀಧಿ ಬೋಧಿಸಿದರು. 

ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ, ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ ಇಂಗಳಹಳ್ಳಿ, ಕಚೇರಿಯ ಅಧಿಕ್ಷಕಿ ಎನ್. ಮಂಜುಳಾ, ಪಿಡಿಒ ರಾಜಕುಮಾರ ಭಜಂತ್ರಿ, ಜಿಲ್ಲಾ ಎಸ್‌ಸಿ, ಎಸ್‌ಟಿ ದೌರ್ಜನ್ಯ ಸಮಿತಿಯ ಸದಸ್ಯ ಬಸವರಾಜ ಮುಳ್ಳಾಳ.

ದಲಿತ ಬಹುಜನ ಚಳುವಳಿಯ ಅಧ್ಯಕ್ಷ ನಾಗಮ್ಮ ಹಾಲಿನವರ, ಎಸ್‌ಡಿಎಂಸಿ ಅಧ್ಯಕ್ಷ ಮರಿಯಪ್ಪ ವಡ್ಡರ, ಗ್ರಾಪಂ ಸದಸ್ಯರು ಇದ್ದರು. ನೀಲಗುಂದದ ಸೃಷ್ಟಿ ಜಾನಪದ ಕಲಾ ತಂಡವು ಕ್ರಾಂತಿ ಗೀತೆಯನ್ನು ಹಾಡಿದರು. ಕಾರ್ಯದರ್ಶಿ ತುಕಾರಾಮ ಹುಲಗಣ್ಣವರ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಕೆ.ಬಿ. ಕೊಣ್ಣೂರು ನಿರೂಪಿಸಿದರು. ಬಿ.ವಿ. ಗುಡಿ ವಂದಿಸಿದರು.